ಅಮ್ಮ ಕೂಲಿ ಮಾಡಿದ ಸಂಬಳ ಕೊಡಿ ಎಂದ ದಲಿತ ವಿದ್ಯಾರ್ಥಿಗೆ ಥಳಿಸಿ, ಕಾಲು ನೆಕ್ಕಿಸಿದ ಪುಂಡರು!
* ಉತ್ತರ ಪ್ರದೇಶದಲ್ಲೊಂದು ಹೇಯ ಕೃತ್ಯ
* ಅಮ್ಮ ಕೂಲಿ ಮಾಡಿದ ಸಂಬಳ ಕೊಡಿ ಎಂದ ದಲಿತ ವಿದ್ಯಾರ್ಥಿ
* ಉದ್ರಿಕ್ತರಾಗಿ ಬಾಲಕನಿಗೆ ಥಳಿಸಿದ ಪುಂಡರು
ರಾಯ್ಬರೇಲಿ(ಏ.19): ಯುಪಿಯ ರಾಯ್ ಬರೇಲಿಯಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಆರು ಜನ ದುಷ್ಕರ್ಮಿಗಳು 10ನೇ ತರಗತಿ ದಲಿತ ವಿದ್ಯಾರ್ಥಿಗೆ ಬೆಲ್ಟ್ ಮತ್ತು ವಿದ್ಯುತ್ ತಂತಿಯಿಂದ ಥಳಿಸಿದ್ದಾರೆ. ಅಲ್ಲದೇ ಅವರ ಪಾದಗಳನ್ನು ನೆಕ್ಕುವಂತೆ ಮಾಡಿದ್ದಾರೆ. ಈ ಘಟನೆಯನ್ನು ಏಪ್ರಿಲ್ 10 ನಡೆದಿದ್ದು ಎಂದು ಹೇಳಲಾಗುತ್ತಿದೆ. ರೌಡಿಗಳು ಬಾಲಕನಿಗೆ ಕಾಲು ನೆಕ್ಕುವಂತೆ ಮಾಡಿದ್ದಲ್ಲದೆ, ಜಾತಿ ನಿಂದಿಸುವ ಮಾತುಗಳನ್ನೂ ಆಡಿದ್ದಾರೆ. ಬಾಲಕನ ತಾಯಿ ಈ ಪುಂಡರ ಹೊಲಗಳಲ್ಲಿ ದುಡಿಮೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಿಶೋರ್ ಕೂಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಈ ವಿಚಾರದಿಂದ ಪುಂಡರು ಕೆರಳಿದ್ದಾರೆ.
ಇದಾದ ಬಳಿಕ ಇಬ್ಬರೂ ಸೇರಿ ಬಾಲಕನೊಂದಿಗೆ ಈ ಹೇಯ ಕೃತ್ಯ ಎಸಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು 6 ಯುವಕರ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಈ ವಿಚಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಗತ್ಪುರ ಪಟ್ಟಣದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಕಷ್ಟಪಟ್ಟು ದುಡಿದು ಹೇಗೋ ಸಂಸಾರ ನಡೆಸುತ್ತಿದ್ದಾರೆ. ದಲಿತ ಮಹಿಳೆಯ ಮಗ 10ನೇ ತರಗತಿ ಓದುತ್ತಿದ್ದಾನೆ. ಪುಂಡರ ಹೊಲಗಳಲ್ಲಿ ಕೂಲಿ ಮಾಡಿದಕ್ಕಾಗಿ ಆತನ ತಾಯಿಗೆ ಹಣ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ತಾಯಿಯ ಕೂಲಿ ಹಣ ಸಿಗದಿದ್ದಾಗ ಬಾಲಕ ಹಣ ಕೇಳುತ್ತಿದ್ದ. ಆದರೆ ದುಷ್ಕರ್ಮಿಗಳು ಹಣ ಕೇಳಿದ್ದಕ್ಕೆ ಬಾಲಕನಿಗೆ ತೀವ್ರವಾಗಿ ಥಳಿಸಿ, ಆತನ ಪಾದಗಳನ್ನು ನೆಕ್ಕುವಂತೆ ಮಾಡಿದ್ದಾರೆ. ದಲಿತರ ಮೇಲೆ ದಬ್ಬಾಳಿಕೆ ನಡೆಸಿದವರು ಇಂತಹ ನಾಚಿಕೆಗೇಡಿನ ಕೃತ್ಯ ನಡೆಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ದೇಶಾದ್ಯಂತ ಇದೇ ರೀತಿಯ ದೌರ್ಜನ್ಯ ನಡೆದಿದ್ದು, ಹಲವು ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ನಡುವೆಯೂ ಕೆಲವರು ದಲಿತರನ್ನು ಹೀಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ.