ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ವೇಯಲ್ಲಿ ಬೈಕ್ ಸವಾರನಿಗೆ ಉಚಿತ ಹೆಲ್ಮೆಟ್ ನೀಡಿದ ಹೆಲ್ಮೆಟ್ಮ್ಯಾನ್!
ಹೆಲ್ಮೆಟ್ಮ್ಯಾನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮುಂಬೈ ಟ್ರಾಫಿಕ್ ಪೊಲೀಸ್ ಕೂಡ ಈ ವಿಡಿಯೋವನ್ನು ಮೆಚ್ಚಿ ಕಾಮೆಂಟ್ ಮಾಡಿದೆ. ರಸ್ತೆ ಸುರಕ್ಷತೆ ವಿಚಾರದಲ್ಲಿ ಹೆಲ್ಮೆಟ್ ಮ್ಯಾನ್ನ ಶ್ರಮವನ್ನು ಪೊಲೀಸರು ಮೆಚ್ಚಿದ್ದಾರೆ.
ನವದೆಹಲಿ (ಮಾ.17): ರಸ್ತೆ ಸುರಕ್ಷತೆಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸುವ ರಾಘವೇಂದ್ರ ಕುಮಾರ್ ಎನ್ನುವ ವ್ಯಕ್ತಿ ಇತ್ತೀಚೆಗೆ ಹೆಲ್ಮೆಟ್ ಇಲ್ಲದೆ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ವೇ ಅಲ್ಲಿ 100 ಕಿಲೋಮೀಟರ್ಗಿಂತ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ನಡು ರಸ್ತೆಯಲ್ಲಿಯೇ ಉಚಿತ ಹೆಲ್ಮೆಟ್ ವಿತರಣೆ ಮಾಡಿದೆ. 'ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು, ತಮ್ಮ ಕಾರ್ಅನ್ನು ಎಕ್ಸ್ಪ್ರೆಸ್ ವೇ ಅಲ್ಲಿ ನಿಲ್ಲಿಸಿ ಹೊಚ್ಚ ಹೊಸದಾದ ಹೆಲ್ಮೆಟ್ಅನ್ನು ಬೈಕ್ ಸವಾರನಿಗೆ ನೀಡಿದ್ದಾರೆ. ಅವರ ಈ ಕ್ರಮಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 'ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ' ಹೆಸರಿನ ಹ್ಯಾಂಡಲ್ನಿಂದಲೇ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಕಾರ್ ಚಾಲನೆ ಮಾಡುತ್ತಿದ್ದರೂ ರಾಘವೇಂದ್ರ ಕುಮಾರ್ ಹೆಲ್ಮೆಟ್ ಧರಿಸಿದ್ದು ಮಾತ್ರವಲ್ಲದೆ, ಹೆಲ್ಮೆಟ್ ಇಲ್ಲದೆ 100 ಕಿಲೋಮೀಟರ್ಗಿಂತ ಅಧಿಕ ವೇಗದಲ್ಲಿ ತನ್ನ ಹಿಂದೆ ಬರುತ್ತಿದ್ದ ಬೈಕ್ ಸವಾರನಿಗೆ ಗಾಡಿ ನಿಲ್ಲಿಸುವಂತೆ ಸಿಗ್ನಲ್ ನೀಡುತ್ತಾರೆ. ನಿಲ್ಲುವ ಸಿಗ್ನಲ್ ನೀಡುವ ವೇಳೆ ಹೊಚ್ಚ ಹೊಸ ಹೆಲ್ಮೆಟ್ಅನ್ನು ಆತನಿಗೆ ತೋರಿಸುತ್ತಾರೆ. ಆತ ಕಾರಿನ ಬಳಿ ಬಂದು ಬೈಕ್ ನಿಲ್ಲಿಸಿದ ಬಳಿಕ ಮಾತನಾಡುವ ರಾಘವೇಂದ್ರ ಕುಮಾರ್, ಬಹಳ ದೂರದಿಂದಲೇ ನಿಮ್ಮನ್ನು ಫಾಲೋ ಮಾಡುತ್ತಿದ್ದೆ. ಹೆಲ್ಮೆಟ್ ಧರಿಸದೇ ನೀವು ಬೈಕ್ ರೈಡ್ ಮಾಡುತ್ತಿದ್ದೀರಿ, ಈ ಹೆಲ್ಮೆಟ್ ತೆಗೆದುಕೊಳ್ಳಿ ಎಂದು ಅವರಿಗೆ ಹೊಸ ಹೆಲ್ಮೆಟ್ ನೀಡುತ್ತಾರೆ. ಅದಲ್ಲದೆ, ಕಾರಿನ ಹಿಂಬದಿಯಲ್ಲಿ ಬರೆದಿರುವ ಸಾಲುಗಳನ್ನು ಓದಿಕೊಂಡು ಹೋಗಿ ಎನ್ನುತ್ತಾರೆ.
ಅವರ ಕಾರ್ನ ಹಿಂಬದಿಯಲ್ಲಿ, 'ಯಮರಾಜ್ ನೇ ಬೇಜಾ ನಹೀ ಬಚಾನೇ ಕೇ ಲಿಯೇ, ಊಪರ್ ಜಗಹ್ ನಹೀ ಹೇ ಜಾನೇ ಕೇ ಲಿಯೇ' ಎನ್ನುವ ಸಾಲು ಬರೆಯಲಾಗಿತ್ತು. ಅದರ ಅರ್ಥ, ನಿಮ್ಮನ್ನು ಬಚಾವ್ ಮಾಡಲು ಯಮರಾಜ ನನ್ನನ್ನು ಕಳಿಸಿಲ್ಲ. ಅಲ್ಲಿ ಹೋಗೋಕೆ ಈಗ ಜಾಗ ಇಲ್ಲ ಅಷ್ಟೇ' ಎನ್ನುವುದಾಗಿದೆ.
ಹೆಲ್ಮೆಟ್ಅನ್ನು ನೀಡಿದ ಬಳಿಕ ರಾಘವೇಂದ್ರ ಕುಮಾರ್ ಅವರು, ಬೈಕ್ ರೈಡರ್ಗೆ ಹೆಲ್ಮೆಟ್ ಧರಿಸಿಕೊಳ್ಳುವಂತೆ ಹೇಳಿದ್ದಾರೆ. ಬೈಕ್ ಸವಾರ ತನ್ನನ್ನು ಇಟಾಹ್ ಪ್ರದೇಶದ ನಿಖಿಲ್ ತಿವಾರಿ ಎಂದು ಹೇಳಿಕೊಂಡಿದ್ದು, ಹೆಲ್ಮೆಟ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಲ್ಲರೆ, ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ ಇದೆ ಎಂದು ಹೇಳುತ್ತಾರೆ.
ವಿಡಿಯೋ ಪೋಸ್ಟ್ ಮಾಡಿದ ಹ್ಯಾಂಡಲ್ನಲ್ಲಿ ಹಿಂದಿನಲ್ಲಿ ಕೆಲ ವಿವರಗಳನ್ನು ಬರೆಯಲಾಗಿದೆ. ಅದರಂತೆ, "ನಾನು ನನ್ನ ಕಾರಿನ ವೇಗದ ಮಿತಿಯನ್ನು 100 ಕ್ಕಿಂತ ಹೆಚ್ಚು ಮಾಡೋದಿಲ್ಲ. ಆದರೆ ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಒಬ್ಬ ವ್ಯಕ್ತಿ ನನ್ನನ್ನು ಹಿಂದಿಕ್ಕಿದಾಗ, ಅವನ ವೇಗವು ನಮಗಿಂತ ಹೆಚ್ಚಿದೆ ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ಅದಲ್ಲದೆ, ಅವರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಆತನನ್ನು ತಡೆದು ಹೆಲ್ಮೆಟ್ ನೀಡುವ ಸಲುವಾಗಿ ನಾನು 100 ಕಿಲೋಮೀಟರ್ ವೇಗದ ಮಿತಿಯನ್ನು ದಾಳಿ ಹೋಗಬೇಕಾಯಿತು. ಕೊನೆಗೆ ಆತನನ್ನು ನಿಲ್ಲಿಸಿ ಹೆಲ್ಮೆಟ್ ನೀಡುವಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಬರೆಯಲಾಗಿದೆ.
Mysuru : ನಿರುಪಯುಕ್ತ ಹೆಲ್ಮೆಟ್ಗಳ ಮೂಲಕ ಪಕ್ಷಿಗಳಿಗೆ ನೀರು!
ಮುಂಬೈ ಟ್ರಾಫಿಕ್ ಪೊಲೀಸರು ಕೂಡ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ವ್ಯಕ್ತಿಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, "ನೀವು ರಾಘವೇಂದ್ರ ಜೀ ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡುತ್ತಿದ್ದೀರಿ, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರು ತಮ್ಮ ವೈಯಕ್ತಿಕ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ. "ಇದು ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇವೆ" ಎಂದು ಮೂರನೇ ವ್ಯಕ್ತಿ ಬರೆದಿದ್ದಾರೆ.
ಹೆಲ್ಮೆಟ್ಗೆ ಅಪ್ಪಳಿಸಿದ ಚೆಂಡು, ಗೌತಮ್ ಗಂಭೀರ್ ಯೋಗಕ್ಷೇಮ ವಿಚಾರಿಸಿದ ಶಾಹಿದ್ ಅಫ್ರಿದಿ..!
ಇಲ್ಲಿಯವರೆಗೆ, ವ್ಯಕ್ತಿ ಭಾರತದಾದ್ಯಂತ 56,000 ಕ್ಕೂ ಹೆಚ್ಚು ಹೆಲ್ಮೆಟ್ಗಳನ್ನು ವಿತರಿಸಿದ್ದಾರೆ ಮತ್ತು ಕಳೆದ 10 ವರ್ಷಗಳಲ್ಲಿ 30 ಜೀವಗಳನ್ನು ಉಳಿಸಿದ್ದಾರೆ. ರಾಘವೇಂದ್ರ ಕುಮಾರ್ ಅವರು ರಸ್ತೆ ಸುರಕ್ಷತೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಶ್ರಮಿಸುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಆಪ್ತ ಸ್ನೇಹಿತನನ್ನು ಕಳೆದುಕೊಂಡ ನಂತರ ರಾಘವೇಂದ್ರ ಕುಮಾರ್ ಈ ಅಭಿಯಾನ ಆರಂಭಿಸಿದ್ದಾರೆ. "