500 ರು. ಪಿಂಚಣಿಗಾಗಿ 100ರ ತಾಯಿಯ ಮಂಚದ ಸಮೇತ ಬ್ಯಾಂಕಿಗೆ ಕರೆತಂದಳು!
500 ರು. ಪಿಂಚಣಿಗಾಗಿ 100ರ ತಾಯಿಯ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಹಿಳೆ!| ಒಡಿಶಾದಲ್ಲೊಂದು ಮನಕಲುಕುವ ಘಟನೆ, ವಿಡಿಯೋ ವೈರಲ್
ಭುವನೇಶ್ವರ(ಜೂ.15): ಪಿಂಚಣಿ ಹಣ ಪಡೆಯಲು, ಆಕೆ ಬದುಕಿರುವುದನ್ನು ಖಾತರಿಪಡಿಸುವ ಸಲುವಾಗಿ ಮಹಿಳೆಯೊಬ್ಬಳು 100 ವರ್ಷ ತುಂಬಿದ ತನ್ನ ತಾಯಿಯನ್ನು ಮಂಚದ ಸಮೇತ ಬ್ಯಾಂಕಿಗೆ ಎಳೆದೊಯ್ದು, ಹಣ ಪಡೆದುಕೊಂಡ ದಾರುಣ ಘಟನೆ ಒಡಿಶಾದ ನೌಪಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಡ ಮಹಿಳೆಯರ ಜನಧನ್ ಬ್ಯಾಂಕ್ ಖಾತೆಗೆ ಏಪ್ರಿಲ್ನಿಂದ ಜೂನ್ ತಿಂಗಳವರೆಗೆ 500 ರು. ನರವು ನೀಡುವುದಾಗಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 3 ತಿಂಗಳ ಅವಧಿಯ 1500 ರು. ಪಡೆಯುವ ಸಲುವಾಗಿ 60 ವರ್ಷದ ಪುಂಜಿಮತಿ ದೇವಿ ಎಂಬಾಕೆ ಉತ್ಕಲ್ ಗ್ರಾಮೀಣ ಬ್ಯಾಂಕಿನ ಸ್ಥಳೀಯ ಶಾಖೆಯೊಂದಕ್ಕೆ ತೆರಳಿದ್ದರು. ಆದರೆ, ಹಣ ನೀಡಲು ನಿರಾಕರಿಸಿದ್ದ ಬ್ಯಾಂಕ್ ಮ್ಯಾನೇಜರ್ ತಾಯಿಯನ್ನು ಖುದ್ದಾಗಿ ಬ್ಯಾಂಕಿಗೆ ಕರೆತರುವಂತೆ ಸೂಚಿಸಿದ್ದರು. ತನ್ನ ತಾಯಿ ಹಾಸಿಗೆ ಹಿಡಿದಿದ್ದು ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರೂ ಬ್ಯಾಂಕ್ ಮ್ಯಾನೇಜರ್ ಹಣ ನೀಡಲು ಒಪ್ಪಿರಲಿಲ್ಲ. ಹೀಗಾಗಿ ಪುಂಜಿಮತಿ ದೇವಿ ತನ್ನ ತಾಯಿಯನ್ನು ಮಂಚದ ಸಮೇತ ಬ್ಯಾಂಕಿಗೆ ಕರೆದೊಯ್ದು ಹಣ ಪಡೆದುಕೊಂಡಿದ್ದಾಳೆ.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನೌಪಾರಾ ಜಿಲ್ಲಾಧಿಕಾರಿ ಮಧುಸ್ಮಿತಾ, ಬ್ಯಾಂಕ್ನಲ್ಲಿ ಮ್ಯಾನೇಜರ್ ಒಬ್ಬರೇ ಇದ್ದ ಕಾರಣ ಅದೇ ದಿನ ಮಹಿಳೆಯ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಮರುದಿನ ಮನೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಮ್ಯಾನೇಜರ್ ಭರವಸೆ ನೀಡಿದ್ದರು. ಆದರೆ, ಅಷ್ಟರೊಳಗಾಗಿಯೇ ಮಹಿಳೆ ತನ್ನ ತಾಯಿಯನ್ನು ಬ್ಯಾಂಕಿಗೆ ಕರೆತಂದಿದ್ದಾರೆ ಎಂದು ಹೇಳಿದ್ದಾರೆ.