ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಶಾಶ್ವತ ಪಟಾಕಿ ನಿಷೇಧ ಹೇರುವ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ ದಿಲ್ಲಿ ಸರ್ಕಾರಕ್ಕೆ ನವೆಂಬರ್ 25 ರ ಗಡುವು ನೀಡಿದೆ. ಯಾವುದೇ ಧರ್ಮವು ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್, ಪಟಾಕಿ ನಿಷೇಧ ಆದೇಶ ಜಾರಿಯಲ್ಲಿ ವಿಫಲವಾದ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

Add Asianetnews Kannada as a Preferred SourcegooglePreferred

ನವದೆಹಲಿ: ‘ವಾಯುಮಾಲಿನ್ಯ ಪ್ರಚೋದಿಸುವ ಯಾವುದೇ ಚಟುವಟಿಕೆಯನ್ನು ಯಾವುದೇ ಧರ್ಮ ಪ್ರೋತ್ಸಾಹಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ ಹಾಗೂ ನ. 25ರೊಳಗೆ ರಾಷ್ಟ್ರ ರಾಜಧಾನಿಯಲ್ಲಿ ಶಾಶ್ವತ ಪಟಾಕಿ ನಿಷೇಧದ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಸರ್ಕಾರಕ್ಕೆ ಸೂಚಿಸಿದೆ.

ರಾಜಧಾನಿಯಲ್ಲಿ ಪಟಾಕಿ ನಿಷೇಧ ಜಾರಿಗೆ ಸಂಬಂಧಿಸಿದ ವಿಚಾರಣೆ ನಡೆಸಿದ ನ್ಯಾ। ಅಭಯ್‌ ಓಕಾ ಹಾಗೂ ನ್ಯಾ। ಆಗಸ್ಟೀನ್‌ ಜಾರ್ಜ್‌ ಮಸೀಹ್‌, ಅವರನ್ನೊಳಗೊಂಡ ಪೀಠ ‘ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕು ಸಂವಿಧಾನದ 21ನೇ ವಿಧಿ ಅಡಿಯಲ್ಲಿನ ಮೂಲಭೂತ ಹಕ್ಕು. ಯಾವುದೇ ಧರ್ಮವು ಮಾಲಿನ್ಯವನ್ನು ಉತ್ತೇಜಿಸುವ ಅಥವಾ ಜನರ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ಚಟುವಟಿಕೆ ಉತ್ತೇಜಿಸುವುದಿಲ್ಲ ಎಂಬುದು ನಮ್ಮ ಭಾವನೆ’ ಎಂದಿದೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಕ್ಯೂನಲ್ಲಿ ನಿಲ್ಲುವಾಗ, ಐ ಹೇಟ್ ಬೆಂಗಳೂರು; ಕರಾಳ ಘಟನೆ ಬಿಚ್ಚಿಟ್ಟ ಯುವತಿ!

ಇದೇ ವೇಳೆ ತನ್ನ ಈ ಹಿಂದಿನ ಪಟಾಕಿ ನಿಷೇಧ ಆದೇಶ ಜಾರಿ ಮಾಡುವಲ್ಲಿ ಎಡವಿದ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪೀಠ, ‘ನೀವು ಕೇವಲ ಪಟಾಕಿ ತಯಾರಿಕಾ ಕಚ್ಚಾವಸ್ತು ವಶಪಡಿಸಿಕೊಂಡು ಕಣ್ಣೊರೆಸುವ ತಂತ್ರ ಮಾಡಿದ್ದೀರಿ’ ಎಂದು ಕುಟುಕಿತು.

‘ದಿಲ್ಲಿ ಪೊಲೀಸ್‌ ಆಯುಕ್ತರು ತಕ್ಷಣವೇ ಎಲ್ಲ ಮಧ್ಯಸ್ಥಿಕೆದಾರರಿಗೆ ನಿಷೇಧ ಆದೇಶದ ಬಗ್ಗೆ ತಿಳಿಸಬೇಕು. ಪಟಾಕಿಗಳ ಮೇಲಿನ ನಿಷೇಧದ ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಕೋಶ ರಚಿಸಬೇಕು. ಕೈಗೊಂಡ ಕ್ರಮಗಳನ್ನು ದಾಖಲಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸಬೇಕು’ ಎಂದಿತು. ಅಲ್ಲದೆ, ‘ಪಟಾಕಿ ನಿಷೇಧದ ಆದೇಶವನ್ನು ನಾವು ಹೊರಡಿಸಿದರೂ ಅ.14ರವರೆಗೆ ಅದರ ಜಾರಿಗೆ ದಿಲ್ಲಿ ಸರ್ಕಾರ ಏಕೆ ವಿಳಂಬ ಮಾಡಿತು?’ ಎಂದೂ ಪೀಠ ಪ್ರಶ್ನಿಸಿತು.

ಇದನ್ನೂ ಓದಿ: ಮಣಿಪುರದಲ್ಲಿ ಪೊಲೀಸ್ ಠಾಣೆ, ಅಂಗಡಿಗಳಿಗೆ ಬೆಂಕಿಯಿಟ್ಟ ಉಗ್ರರು: ಗುಂಡಿಕ್ಕಿ 11 ಕುಕಿಗಳ ಹತ್ಯೆ