ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯಮನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ 13 ವರ್ಷದ ಮಗಳು ಮಿಷೆಲ್ ಯಮೆನ್‌ಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. 

ನವದೆಹಲಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿ ವಿದೇಶಿ ಜೈಲಿನಲ್ಲಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ 13 ವರ್ಷದ ಮಗಳು ಮಿಷೆಲ್ ಸೇರಿದಂತೆ ಕುಟುಂಬಸ್ಥರು ಯಮೆನ್‌ಗೆ ತೆರಳಿದ್ದಾರೆ. ತಂದೆ ಟಾಮಿ ಥಾಮಸ್ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕ ಡಾ. ಕೆ. ಎ. ಪೌಲ್ ಅವರೊಂದಿಗೆ ಮಿಷೆಲ್ ಯೆಮನ್ ಅಧಿಕಾರಿಗಳನ್ನು ಭೇಟಿಯಾಗಿ ತಾಯಿಯ ಬಿಡುಗಡೆಗೆ ಮನವಿ ಮಾಡಿದ್ದಾರೆ.

ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಮಗಳು

ಕಳೆದ ಹತ್ತು ವರ್ಷಗಳಿಂದ ಯೆಮನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಅವರನ್ನು ಮಗಳು ಮಿಷೆಲ್ ನೋಡಿಲ್ಲ. ತಾಯಿಯನ್ನು ನೆನಪು ಮಾಡಿಕೊಂಡುರ ಭಾವುಕರಾಗಿ ಮಾತನಾಡಿದ ಮಿಷೆಲ್, "ನನಗೆ ಅಮ್ಮ ತುಂಬಾ ಇಷ್ಟ. ದಯವಿಟ್ಟು ಅಮ್ಮನನ್ನು ಮನೆಗೆ ಕರೆದುಕೊಂಡು ಬರಲು ಸಹಾಯ ಮಾಡಿ. ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದು ಕಣ್ಣೀರು ಹಾಕಿದ್ದಾರೆ.

ಮಗಳು ಮಿಷೆಲ್ ಜೊತೆಯಲ್ಲಿ ನಿಮಿಷಾ ಅವರ ಪತಿ ಟಾಮಿ ಥಾಮಸ್ ಕೂಡ ಮನವಿ ಮಾಡಿದ್ದಾರೆ. ದಯವಿಟ್ಟು ನನ್ನ ಪತ್ನಿ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಿ, ಅವರನ್ನು ಸ್ವದೇಶಕ್ಕೆ ಕರೆತರಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಡಾ. ಕೆ. ಎ. ಪೌಲ್ ಕೂಡ ಯೆಮನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಯೆಮನ್ ಅಧಿಕಾರಿಗಳಿಗೆ ಮತ್ತು ಚರ್ಚೆಯಲ್ಲಿ ಭಾಗಿಯಾಗಿರುವ ತಲಾಲ್ ಕುಟುಂಬಕ್ಕೆ ಅವರು ಧನ್ಯವಾದ ಅರ್ಪಿಸಿದರು.

10 ವರ್ಷಗಳಿಂದ ಮಗಳನ್ನು ನೋಡದ ನಿಮಿಷಾ ಪ್ರಿಯಾ

ನಿಮಿಷಾ ಪ್ರಿಯಾ ಅವರ ಒಬ್ಬಳೇ ಮಗಳು ಹತ್ತು ವರ್ಷಗಳಿಂದ ಅವರನ್ನು ನೋಡಿಲ್ಲ. ಮಿಷೆಲ್ ಇಲ್ಲಿದ್ದಾಳೆ. ತಲಾಲ್ ಕುಟುಂಬಕ್ಕೆ ಧನ್ಯವಾದಗಳು. ನೀವು ನಿಮಿಷಾ ಅವರನ್ನು ಶೀಘ್ರದಲ್ಲೇ, ಬಹುಶಃ ನಾಳೆ ಅಥವಾ ನಾಡಿದ್ದು ಬಿಡುಗಡೆ ಮಾಡಿದರೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಪಿಟಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಡಾ.ಕೆ.ಎ. ಪೌಲ್ ಹೇಳಿದ್ದಾರೆ.

ಇದೊಂದು ಸಂಪೂರ್ಣವಾಗಿ ಮಾನವೀಯ ಆಧಾರದಲ್ಲಿ ನಡೆಯುತ್ತಿದೆ ಎಂದು ಪೌಲ್ ತಿಳಿಸಿದ್ದಾರೆ. ದುರದೃಷ್ಟವಶಾತ್, ನಾವು ಯುದ್ಧಗಳು ಮತ್ತು ಅನಗತ್ಯ ಸಂಘರ್ಷಗಳಿಂದ ನಾಶವಾಗುತ್ತಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಈ ಸಂಧಾನ ಯಶಸ್ವಿಯಾಗುತ್ತದೆ ಮತ್ತು ಜಗತ್ತಿನ ಹಲವು ಭಾಗಗಳಿಗೆ ಇದು ಮಾದರಿಯಾಗುತ್ತದೆ ಎಂದು ನಾವು ಆಶಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಮರಣ ದಂಡನೆ ತಾತ್ಕಾಲಿಕವಾಗಿ ಮುಂದೂಡಿಕೆ

ಇದಕ್ಕೂ ಮುನ್ನ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೇರಳ ಮೌಲ್ವಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದರು. ಭಾರತ ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಜುಲೈ 16 ರಂದು ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಭಾರತ ಸರ್ಕಾರ ನಂತರ ತಿಳಿಸಿತ್ತು.

ಬ್ಲಡ್‌ ಮನಿ ಸ್ವೀಕರಿಸಲು ಒಪ್ಪದ ಕುಟುಂಬ

ಬ್ಲಡ್ ಮನಿ (ದಿಯಾ) ಪಾವತಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಆ ಕುಟುಂಬವು ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಮತ್ತು ಅವರ ಮರಣದಂಡನೆಯನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದೀಗ ಮಗಳು, ತನ್ನ ತಾಯಿಯನ್ನು ಬಿಟ್ಟು ಕಳುಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾಳೆ.

Scroll to load tweet…