ಮೋದಿ ಕಾಲೆಳೆದ ಚಿದಂಬರಂಗೆ, ರಾಹುಲ್ ಪತ್ರ ತೋರಿಸಿ ಧರ್ಮೇಂದ್ರ ಪ್ರಧಾನ್ ಗುದ್ದು!
* ಕೊರೋನಾ ಅಬ್ಬರದ ಮಧ್ಯೆಯೂ ಮುಂದುವರೆದ ಲಸಿಕೆ ಅಭಿಯಾನ
* ರಾಜ್ಯಗಳ ಬೇಡಿಕೆ ಮೇರೆಗೆ ಲಸಿಕೆ ಹೊಣೆ ವಹಿಸಿದ್ದ ಕೇಂದ್ರ
* ಆರೋಪ ಪ್ರತ್ಯಾರೋಪಗಳ ಮಧ್ಯೆ ಲಸಿಕೆ ಅಭಿಯಾನದ ಹೊಣೆ ಮತ್ತೆ ಹಿಂಪಡೆದ ಕೇಂದ್ರ
* ಕೇಂದ್ರಕ್ಕೆ ಚಿದಂಬರಂ ಗುದ್ದು, ರಾಹುಲ್ ಪತ್ರದ ಜೊತೆ ಪ್ರಧಾನ್ ತಿರುಗೇಟು
ನವದೆಹಲಿ(ಜೂ.,08): ಲಸಿಕೆ ಅಭಿಯಾನ ಸಂಬಂಧ ಅನೇಕ ರಾಜ್ಯಗಳು ಕೇಂದ್ರ ವಿರುದ್ಧ ವಿಭಿನ್ನ ಆರೋಪಗಳನ್ನು ಮಾಡುತ್ತಿದ್ದವು. ಹೀಗಿರುವಾಗ ಸೋಮವಾರ ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ಲಸಿಕಾ ನೀತಿ ಘೋಷಿಸಿದ್ದಾರೆ. ಇದರ ಅನ್ವಯ ಇನ್ನು ಕೇಂದ್ರವೇ ಲಸಿಕಾ ಅಭಿಯಾನದ ಹೊಣೆ ಹೊತ್ತುಕೊಂಡಿದೆ. ಹೀಗಿರುವಾಗ ಕಾಂಗ್ರೆಸ್ ಸೇರಿ ಅನೇಕ ವಿಪಕ್ಷಗಳು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿವೆ. ಅತ್ತ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡಾ ಈ ಬಗ್ಗೆ ಮೋದಿ ವಿರುದ್ಧ ಕಿಡಿ ಕಾರುತ್ತಾ, ಸರ್ಕಾರ ತನ್ನ ತಪ್ಪುಗಳಿಂದ ಪಾಠ ಕಲಿತಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಆದರೆ ಇದರೊಂದಿಗೆ ಅವರು ಇದೊಂದು ಬಗೆಯ ವಂಚನೆ, ಮೋದಿ ತಪ್ಪುಗಳಿಗೆ ವಿಪಕ್ಷವನ್ನು ಹೊಣೆಗಾರರನ್ನಾಗಿಸುತ್ತಾರೆ ಎಂದೂ ಆರೋಪಿಸಿದ್ದಾರೆ. ಹೀಗಿರುವಾಗ ಅವರ ಈ ಮಾತಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಪತ್ರ ಟ್ವೀಟ್ ಮಾಡಿದ ಪ್ರಧಾನ್
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ರವರು ಸುಹಾಸ್ ಹೆಸರಿನ ಲೇಖಕ ಹಾಗೂ ರಾಜಕಾರಣಿಯ ಟ್ವೀಟ್ ಒಂದನ್ನು ರೀಟ್ವೀಟ್ ಮಾಡುತ್ತಾ ಕೆಲ ಸಮಯದ ಹಿಂದೆ ಖುದ್ದು ರಾಹುಲ್ ಗಾಂಧಿಯೇ ರಾಜ್ಯಗಳೇ ಲಸಿಕೆ ಖರೀದಿಸುವಂತೆ ಬೇಡಿಕೆ ಇಟ್ಟಿದ್ದರು ಎಂದು ಬರೆದಿದ್ದಾರೆ. ಅಲ್ಲದೇ ಈ ಟ್ವೀಟ್ನ್ನು ರಾಹುಲ್ ಗಾಂಧಿ ಹಾಗೂ ಆನಂದ್ ಶರ್ಮಾಗೆ ಟ್ಯಾಗ್ ಮಾಡಿದ್ದಾರೆ. ಆನಂದ್ ಶರ್ಮಾರವರು ಕೂಡಾ ಲಸಿಕೆ ಖರೀದಿಸುವ ಜವಾಬ್ದಾರಿ ರಾಜ್ಯಗಳಿಗೆ ನೀಡಬೇಕೆಂದು ಒತ್ತಾಯಿಸಿದ್ದರು. ಇನ್ನು ತಮ್ಮ ಟ್ವೀಟ್ನಲ್ಲಿ ಧರ್ಮೇಂದ್ರ ಪ್ರಧಾನ್ ಚಿದಂಬರಂ ಬಳಿ ಅವರ(ರಾಹುಲ್ ಗಾಮದಿ) ಮೇಲೆ ದಯೆ ಇರಲಿ ಎಂದೂ ಉಲ್ಲೇಖಿಸಿದ್ದಾರೆ.
ಪಂಜಾಭ್ ಸರ್ಕಾರದ ತಪ್ಪೊಪ್ಪಿಕೊಮಡ ಚಿದಂಬರಂ
ಮಾಧ್ಯಮಗಳೊಂದಿಗೆ ನಡೆದ ಚರ್ಚೆಯಲ್ಲಿ ಪಿ. ಚಿದಂಬರಂರವರು ಯಾವುದೇ ರಾಜ್ಯ ಸರ್ಕಾರ ಲಸಿಕೆ ಖರೀದಿಸುತ್ತೇವೆ ಎಂದು ಹೇಳಿರಲಿಲ್ಲ. ಆದರೆ ಪ್ರಧಾನಿ ಮೋದಿಯೇ ರಾಜ್ಯಗಳು ಹೀಗೆ ಬಯಸಿದ್ದವು, ಹೀಗಾಗಿ ಈ ಜವಾಬ್ದಾರಿ ನೀಡಿದ್ದೆವು ಎಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ವೇಳೆ ಖಾಸಗಿ ಆಸ್ಪತ್ರೆಗೆ ಲಸಿಕೆ ಮಾರಿದ ಪಂಜಾಬ್ ಸರ್ಕಾರದವ ನಡೆ ತಪ್ಪು ಎಂದೂ ಹೇಳಿದ್ದಾರೆ.
ಜೂನ್ 21ರಿಂದ ಎಲ್ಲರಿಗೂ ಫ್ರೀ ವ್ಯಾಕ್ಸಿನ್
ಇನ್ನು ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾ ಲಸಿಕೆಯ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರದ್ದು. ಕೇಂದ್ರವೇ ಇನ್ಮುಂದೆ ಅಭಿಯಾನ ನಡೆಸಲಿದೆ ಎಂದಿದ್ದಾರೆ. ಅಲ್ಲದೇ ಜೂನ್ 21 ರಿಂದ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದ್ದೇವೆ ಎಂದೂ ತಿಳಿಸಿದ್ದಾರೆ.