ಫೆ.22ಕ್ಕೆ ವಿಶ್ವಾಸಮತ ಯಾಚನೆಗೆ ಪುದುಚೇರಿ ಸಿಎಂಗೆ ಸೂಚನೆ | ಅಲ್ಪಮತಕ್ಕೆ ಕುಸಿದಿರುವ ಕಾಂಗ್ರೆಸ್‌- ಡಿಎಂಕೆ ಮೈತ್ರಿ ಸರ್ಕಾರ

ಪುದುಚೇರಿ(ಫೆ.19): ಕಾಂಗ್ರೆಸ್‌- ಡಿಎಂಕೆ ಮೈತ್ರಿಕೂಟದ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಉಪ ರಾಜ್ಯಪಾಲೆ ತಮಿಳಿಸಾಯಿ ಸುಂದರರಾಜನ್‌ ಅವರು ಫೆ.22ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತಿಗೆ ಆದೇಶಿಸಿದ್ದಾರೆ.

Add Asianetnews Kannada as a Preferred SourcegooglePreferred

ಸೋಮವಾರ ಸಂಜೆ 5 ಗಂಟೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರು ವಿಶ್ವಾಸಮತ ಸಾಬೀತುಪಡಿಸಬೇಕಿದೆ. ಇತ್ತೀಚೆಗೆ ಇಬ್ಬರು ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

AIADMK ಬಾಸ್‌ ಹುದ್ದೆ ಬಿಡಲ್ಲ: ಸಿಎಂ, ಡಿಸಿಎಂ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಶಶಿಕಲಾ

ಈ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತಿಗೆ ವಿಶೇಷ ಅಧಿವೇಶನ ಕರೆಯುವಂತೆ ವಿಪಕ್ಷ ನಾಯಕ ಎನ್‌. ರಂಗಸ್ವಾಮಿ ಅವರ ನೇತೃತ್ವದ ನಿಯೋಗ ಉಪ ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಿತ್ತು.

ಬಲಾಬಲ ಲೆಕ್ಕಾಚಾರ:

3 ನಾಮನಿರ್ದೇಶಿತರು ಸೇರಿ ಪುದುಚೇರಿ ವಿಧಾನಸಭೆ ಸದಸ್ಯ ಬಲ 33. ಒಬ್ಬ ಕಾಂಗ್ರೆಸ್‌ ಶಾಸಕ ಅನರ್ಹಗೊಂಡಿದ್ದ ಕಾರಣ ಇತ್ತೀಚಿನವರೆಗೆ 32 ಶಾಸಕರಿದ್ದರು. ಆದರೆ ನಾಲ್ವರ ರಾಜೀನಾಮೆ ಕಾರಣ ಕಾಂಗ್ರೆಸ್‌ ಸದಸ್ಯ ಬಲ 14ರಿಂದ 10ಕ್ಕೆ ಕುಸಿದಿದೆ. ಸರ್ಕಾರದ ಪಾಲುದಾರ ಡಿಎಂಕೆಯಲ್ಲಿ 3 ಶಾಸಕರಿದ್ದಾರೆ.

ಒಬ್ಬ ಪಕ್ಷೇತರ ಶಾಸಕನ ಬೆಂಬಲ ಇದೆ. ಹಾಗಾಗಿ ಈಗ ಸರ್ಕಾರದ ಬಲ 14. ಇನ್ನು ವಿಪಕ್ಷದ ಪಾಳಯದಲ್ಲೂ 14 ಸದಸ್ಯರು ಇದ್ದಾರೆ. ಒಟ್ಟಾರೆಯಾಗಿ ಒಬ್ಬನ ಅನರ್ಹತೆ ಹಾಗೂ ನಾಲ್ವರ ರಾಜೀನಾಮೆ ಕಾರಣ ಹಾಲಿ ವಿಧಾನಸಭೆ ಬಲ 28ಕ್ಕೆ ಕುಸಿದಿದ್ದು, ಆಡಳಿತ ಹಾಗೂ ವಿಪಕ್ಷಗಳೆರಡರಲ್ಲೂ ತಲಾ 14 ಶಾಸಕರು ಉಳಿದಿದ್ದಾರೆ. ಸರ್ಕಾರ 1 ಮತದಿಂದ ಬಹುಮತದ ಕೊರತೆ ಎದುರಿಸುತ್ತಿದೆ.

ಪುದುಚೇರಿ ರಾಜ್ಯಪಾಲ ಹುದ್ದೆಯಿಂದ ಕಿರಣ್ ಬೇಡಿ ವಜಾ ಆದ ಹಿನ್ನೆಲೆ ತೆಲಂಗಾಣದ ಗವರ್ನರ್ ತಮಿಳಿಸಾಯಿ ಸುಂದರರಾಜನ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.