ದಿಢೀರ್ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಎನ್‌ಸಿಪಿ ನಾಯಕ ಪ್ರಧಾನಿ ಕಚೇರಿಯಲ್ಲಿ 20 ನಿಮಿಷಗಳ ಮಹತ್ವದ ಮಾತುಕತೆ ಮಹಾ ಸರ್ಕಾರದ ಸಚಿವರ ಮೇಲೆ ತನಿಖಾ ಸಂಸ್ಥೆಗಳ ದಾಳಿಗೆ ಅಸಮಾಧಾನ  

ನವದೆಹಲಿ(ಏ.06): ಮಹಾರಾಷ್ಟ್ರ ಮೈತ್ರಿ ಸರ್ಕಾರದ ಸಚಿವರು, ನಾಯಕರ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಗಳ ದಾಳಿ ಹಲವು ರಾಜಕೀಯ ಹೋರಾಟಕ್ಕೆ ನಾಂದಿ ಹಾಡಿದೆ. ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಗ್ಗಜಗ್ಗಾಟ ನಡುವೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(NCP)ನಾಯಕ ಶರದ್ ಪವಾರ್ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪ್ರಧಾನಿ ಕಚೇರಿಯಲ್ಲಿ ಶರದ್ ಪವಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 20 ನಿಮಿಷಗಳ ಕಾಲದ ಮಾತುಕತೆಯಲ್ಲಿ ಮಹಾ ಮೈತ್ರಿ ಸರ್ಕಾರದ ಮೇಲೆ ನಡೆಯುತ್ತಿರುವ ಸಿಬಿಐ ಸೇರಿದಂತೆ ಕೇಂದ್ರ ಸಂಸ್ಥೆಗಳ ದಾಳಿಗಳ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. 

ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಬಿಜೆಪಿ ವಿಷಕಾರಿ ಮಾತಾವರಣ ಸೃಷ್ಟಿ, ಶರದ್ ಪವಾರ್!

ಮಹಾರಾಷ್ಟ್ರದಲ್ಲಿನ ಅಭಿವೃದ್ಧಿಯೋಜನೆಗಳ ಕುರಿತು ಮಾತುಕತೆ ನಡೆಸಲು ಶರದ್ ಪವಾರ್ ದೆಹಲಿಯಲ್ಲಿ ಮೋದಿ ಭೇಟಿಯಾಗಿದ್ದಾರ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಇದರ ಜೊತೆಗೆ ಕೆಲ ಮಹತ್ವದ ವಿಚಾರಗಳನ್ನು ಚರ್ಚಿಸಿರುವ ಸಾಧ್ಯತೆ ಇದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಮಾಜಿ ಗೃಹ ಸಚವ ಅನಿಲ್ ದೇಶಮುಖ್ ಸಿಬಿಐ ಗಾಳದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇತ್ತೀಚಗೆ ಶಿವಸೇನಾ ನಾಯಕ ಸಂಜಯ್ ರಾವತ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದು ರಾಜಕೀಯ ಕೆಸರೆಚಾಟಕ್ಕೂ ಕಾರಣವಾಗಿತ್ತು. ಈ ಎಲ್ಲಾ ವಿಚಾರಗಳನ್ನು ಮೋದಿ ಜೊತೆ ಚರ್ಚಿಸಿದ್ದಾರ ಎಂದು ಮೂಲಗಳು ಹೇಳಿವೆ.

ಹಂಗಾಮಿ ಸಿಎಂ ಆದ್ರಾ ಶರದ್ ಪವಾರ್? ಠಾಕ್ರೆ ಅನುಪಸ್ಥಿತಿಯಲ್ಲಿ ಮಹಾ ಮಂತ್ರಿಗಳ ಜೊತೆ ಸಭೆ!

ರಾವತ್ ಮೇಲೆ ಭೂಕಬಳಿಕೆ ಆರೋಪ 
ಮುಂಬೈನ ಚಾಲ್‌ಗಳನ್ನು ಮರು ನಿರ್ಮಾಣ ಯೋಜನೆಯಡಿ ನಡೆದಿದೆ ಎನ್ನಲಾದ 1034 ಕೋಟಿ ರು.ಮೌಲ್ಯದ ಭೂ ಅಕ್ರಮ ಪ್ರಕರಣ ಸಂಬಂಧ, ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರ ಕುಟುಂಬಕ್ಕೆ ಸೇರಿದ ಭಾರೀ ಪ್ರಮಾಣದ ಭೂಮಿಯನ್ನು ಇಡಿ ತನ್ನ ವಶಕ್ಕೆ ಪಡೆದಿದೆ. ಮುಂಬೈ ಹೊರವಲಯದ ಅಲಿಬಾಗ್‌ನಲ್ಲಿರುವ 8 ಜಮೀನು ಮತ್ತು ಮುಂಬೈನ ದಾದರ್‌ನಲ್ಲಿರುವ ಫ್ಲ್ಯಾಟ್‌ ಅನ್ನು ಇಡಿ ವಶಕ್ಕೆ ಪಡೆದಿದೆ. ಇತ್ತೀಚೆಗಷ್ಟೇ ಇದೇ ಹಗರಣ ಸಂಬಂಧ ಪ್ರವೀಣ್‌ ರಾವತ್‌ ಅವರನ್ನು ಇಡಿ ಬಂಧಿಸಿತ್ತು. ಅಲ್ಲದೆ ಸಂಜಯ್‌ ಅವರ ಪತ್ನಿಯನ್ನು ಕಳೆದ ವರ್ಷ ವಿಚಾರಣೆ ಕೂಡಾ ಮಾಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್‌ ರಾವತ್‌, ‘ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಿ, ನನಗೆ ಗುಂಡು ಹಾರಿಸಿ ಅಥವಾ ನನ್ನನ್ನು ಜೈಲಿಗೆ ಕಳುಹಿಸಿ ಇಂಥದ್ದಕ್ಕೆಲ್ಲಾ ನಾನು ಹೆದರುವವನಲ್ಲ. ನಾನು ಬಾಳಾಸಾಹೇಬ್‌ ಠಾಕ್ರೆ ಅವರ ಹಿಂಬಾಲಕ, ಓರ್ವ ಶಿವಸೈನಿಕ. ಇದಕ್ಕೆಲ್ಲಾ ಹೆದರಿ ಸುಮ್ಮನೆ ಕೂರುವುದಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾನು ಅವರ ಬಣ್ಣ ಬಯಲು ಮಾಡುತ್ತೇನೆ’ ಎಂದು ಅಬ್ಬರಿಸಿದ್ದಾರೆ.

ಮುಸ್ಲಿಂ ಎಂಬ ಕಾರಣಕ್ಕೆ ಮಲಿಕ್‌ ಬಂಧನ: ಶರದ್‌ ಪವಾರ್‌
ಮರಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಬಂಧನವು ರಾಜಕೀಯ ಪ್ರೇರಿತವಾಗಿದ್ದು ಆತ ಮುಸ್ಲಿಂ ಎಂಬ ಕಾರಣದಿಂದಾಗಿ ಭೂಗತ ಪಾತಕಿ ದಾವೂದ್‌ ಜೊತೆ ಸಂಪರ್ಕವಿದೆ ಎಂದು ಆರೋಪಿಸಲಾಗುತ್ತದೆ ಎಂದು ಶರದ್‌ ಪವಾರ್‌ ಪ್ರತಿ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವೂದ್‌ ಇಬ್ರಾಹಿಂ ಹಾಗೂ ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಫೆ 23ರಂದು ಮಲಿಕ್‌ ಅವರನ್ನು ಬಂಧಿಸಲಾಗಿತ್ತು. ದಾವೂದ್‌ ಒಬ್ಬ ಮುಸ್ಲಿಂ ಎಂಬ ಕಾರಣಕ್ಕಾಗಿ ಆತನೊಂದಿಗೆ ನವಾಬ್‌ ಮಲ್ಲಿಕ್‌ಗೆ ಸಂಬಂಧ ಕಲ್ಪಿಸಲಾಗುತ್ತಿದೆ. ಮಲಿಕ್‌ ಮತ್ತು ಅವರ ಕುಟುಂಬಕ್ಕೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಆದರೆ ನಾವು ಈ ಬಗ್ಗೆ ಹೋರಾಟ ನಡೆಸುತ್ತೇವೆ ಎಂದು ಎನ್‌ಸಿಪಿ ಮುಖ್ಯಸ್ಥರು ತಿಳಿಸಿದ್ದಾರೆ.