ಹರ್ಯಾಣದ ನೂತನ ಮುಖ್ಯಮಂತ್ರಿಯಾಗಿ ಒಬಿಸಿ ನಾಯಕ ನಯಬ್ ಸಿಂಗ್ ಸೈನಿ ಪ್ರಮಾಣವಚನ!
ಮನೋಹರ್ ಲಾಲ್ ಕಟ್ಟರ್ ಹರ್ಯಾಣದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿತ್ತು. ಇದೀಗ ಹರ್ಯಾಣದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಕಟ್ಟರ್ ಆಪ್ತ, ಒಬಿಸಿ ನಾಯಕ ನಯಬ್ ಸಿಂಗ್ ಸೈನಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹರ್ಯಾಣ(ಮಾ.12) ಹರ್ಯಾಣ ರಾಜಕೀಯದಲ್ಲಿ ಎದ್ದ ಬೆಂಕಿಯನ್ನು ಕೆಲವೇ ಗಂಟೆಗಳಲ್ಲಿ ಆರಿಸುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ. ಮನೋಹರ್ ಲಾಲ್ ಕಟ್ಟರ್ ಹಾಗೂ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದೆ. ಬಿಜೆಪಿಯ ಪ್ರಮುಖ ನಾಯಕ, ಒಬಿಸಿ ಸಮುದಾಯದ ನಯಬ್ ಸಿಂಗ್ ಸೈನಿ ಇದೀಗ ಹರ್ಯಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕುರುಕ್ಷೇತ್ರ ಲೋಕಸಭಾ ಸಂಸದನಾಗಿರುವ ನಯಬ್ ಸಿಂಗ್ ಸೈನಿ ಇದೀಗ ಹರ್ಯಾಣದ ನೂತನ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದಾರೆ.
ನಯಬ್ ಸಿಂಗ್ ಸೈನಿ ಜೊತೆಗೆ ಬಿಜೆಪಿಯ ಇತರ ನಾಯಕರಾದ ಕನ್ವರ್ ಪಾಲ್, ಮೂಲ್ಚಂದ್ ಶರ್ಮಾ, ಜಯ್ ಪ್ರಕಾಶ್ ದಲಾಲ್ ಹಾಗೂ ಬನ್ವರಿ ಲಾಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ರಂಜೀತ್ ಸಿಂಗ್ ಚೌಟಾಲ ಕೂಡ ಸೈನಿ ಸಂಪುಟ ಸೇರಿಕೊಂಡಿದ್ದಾರೆ. ಈ ಮೂಲಕ ಹರ್ಯಾಣದಲ್ಲಿ ಹೊಸ ಸರ್ಕಾರ ರಚನೆಯಾಗಿದೆ.
ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು, ಹರ್ಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ
ಇಂದು ಬೆಳಗ್ಗೆ ಮನೋಹಲ್ ಲಾಲ್ ಕಟ್ಟರ್ ಹಾಗೂ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಿತ್ತು. ಜೆಜೆಪಿ ಪಕ್ಷದ ಬೆಂಬಲ ಪಡೆದು ಮೈತ್ರಿ ಸರ್ಕಾರ ರಸಿಚಿಸಿದ ಕಟ್ಟರ್ ಸೀಟು ಹಂಟಿಕೆಯಿಂದ ಮೈತ್ರಿ ನಡುವೆ ಬಿಕ್ಕಟ್ಟು ಶುರುವಾಗಿತ್ತು ಅನ್ನೋ ಮಾತುಗಳು ಕೇಳಿಬಂದಿತ್ತು. ಜೆಜೆಪಿ ಪಕ್ಷ ಲೋಕಸಭಾ ಚುನಾವಣೆಗೆ ಕೆಲ ಸ್ಥಾನಕ್ಕೆ ಪಟ್ಟು ಹಿಡಿದ ಕಾರಣ ಮನಸ್ತಾಪ ತೀವ್ರಗೊಂಡಿತ್ತು ಎಂದು ವರದಿಗಳು ಹೇಳುತ್ತಿವೆ. ಈ ಮನಸ್ತಾಪದಿಂದ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ನಿರ್ಧಾರಕ್ಕೆ ಜೆಜೆಪಿ ಮುಂದಾಗಿತ್ತು. ಹೈಕಮಾಂಡ್ ಸೂಚನೆಯುಂತೆ ಕಟ್ಟರ್ ರಾಜೀನಾಮೆ ನೀಡಿ ಅಚ್ಚರಿ ನೀಡಿದ್ದರು.
ಕಟ್ಟರ್ ಜೊತೆಗೆ ಸಚಿವ ಸಂಪುಟದ ಸಚಿವರು ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಹರ್ಯಾಣದಲ್ಲಿ ಹೊಸ ಸರ್ಕಾರವನ್ನು ಬಿಜೆಪಿ ಹೈಕಮಾಂಡ್ ರಚಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದ ಸೈನಿ, ಮನೋಹರ್ ಲಾಲ್ ಕಟ್ಟರ್ ಅವರ ಆಪ್ತನಾಗಿ ಗುರುತಿಸಿಕೊಂಡಿದ್ದಾರೆ. ಒಬಿಸಿ ಸಮುದಾಯದ ಪ್ರಬಲ ನಾಯಕ ಸೈನಿ ಹರ್ಯಾಣ ಮುಖ್ಯಮಂತ್ರಿಯಾಗಿದ್ದಾರೆ. ಇದು ಒಬಿಸಿ ಹಾಗೂ ಇತರ ಸಮುದಾಗಳ ಮತಗಳನ್ನು ಸೆಳೆಯಲು ಪ್ರಮುಖ ಅಸ್ತ್ರ ಅನ್ನೋ ಮಾತುಗಳು ಕೇಳಿಬಂದಿದೆ.
ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಶಾಕ್, ಪಕ್ಷ ತೊರದು ಕಾಂಗ್ರೆಸ್ ಸೇರಿದ ಸಂಸದ!