ಪ್ರಧಾನಿ ಮೋದಿ ಇಂದಿನ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. ಈ ಅಭಿಯಾನ ದೊಡ್ಡ ಮಟ್ಟದ ಚಳುವಳಿಯಾಗಿ ರೂಪುಗೊಳ್ಳುತ್ತಿದೆ ಎಂದೂ ಹೇಳಿದ್ದಾರೆ.

ಇಂದು ತಿಂಗಳ ಕೊನೆಯ ಭಾನುವಾರ. ಅಂದರೆ ಪ್ರಧಾನಿ ಮೋದಿಯ ಮನ್‌ ಕೀ ಬಾತ್‌ ಕಾರ್ಯಕ್ರಮ. ಜುಲೈ 31, ಭಾನುವಾರದ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಮುಖವಾಗಿ ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಬಗ್ಗೆ ಮಾತನಾಡಿದ್ದಾರೆ. ‘ಆಜಾದಿ ಕಾ ಅಮೃತ ಮಹೋತ್ಸವ’ ಅಭಿಯಾನ ಸಾಮೂಹಿಕ ಚಳುವಳಿಯಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ನಮ್ಮ ದೇಶ 2022ರ ಆಗಸ್ಟ್‌ 15ರಂದು 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ನಡೆಯುತ್ತಿರುವ ‘ಆಜಾದಿ ಕಾ ಅಮೃತ ಮಹೋತ್ಸವ’ಅಭಿಯಾನ ಸಾಮೂಹಿಕ ಚಳುವಳಿಯಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಭಾನುವಾರ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. ಹಾಗೂ, ಆಗಸ್ಟ್ 2 ರಿಂದ 15 ರವರೆಗೆ ದೇಶದ ಜನತೆ ತಮ್ಮ ಸಾಮಾಜಿಕ ಜಲತಾಣಗಳ ಪ್ರೊಫೈಲ್‌ ಫೋಟೋಗಳಲ್ಲಿ ‘ತಿರಂಗ’ ಅಂದರೆ ನಮ್ಮ ರಾಷ್ಟ್ರೀಯ ಧ್ವಜದ ಫೊಟೋವನ್ನು ಹಾಕಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. 

Mann Ki Baat ಮಿಥಾಲಿ ರಾಜ್ ಅನೇಕರಿಗೆ ಸ್ಪೂರ್ತಿಯ ಚಿಲುಮೆ ಎಂದ ಪ್ರಧಾನಿ ಮೋದಿ

ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿರುವ ‘ಆಜಾದಿ ಕಾ ಅಮೃತ ಮಹೋತ್ಸವ’ಅಭಿಯಾನದ ದಿನಗಳಲ್ಲಿ ‘ಹರ್‌ ಘರ್‌ ತಿರಂಗಾ’ ಎಂಬ ಈವೆಂಟ್‌ ಸಹ ನಡೆಯುತ್ತಿದೆ ಎಂದು ಸಹ ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಹಾಗೆ, ನಮ್ಮ ಮನೆಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾಕಿಕೊಳ್ಳುವ ಮೂಲಕ ಈ ಚಳುವಳಿಯನ್ನು ದೊಡ್ಡದಾಗಿ ಮಾಡೋಣ ಎಂದೂ ಮೋದಿ ಹೇಳಿದ್ದಾರೆ. 

‘ಆಜಾದಿ ಕಾ ಅಮೃತ ಮಹೋತ್ಸವ’ ಅಭಿಯಾನ ಸಾಮೂಹಿಕ ಚಳುವಳಿಯಾಗಿ ರೂಪುಗೊಳ್ಳುತ್ತಿರುವುದು ತನಗೆ ಸಂತಸ ತಂದಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರು ಮತ್ತು ಸಮಾಜದ ಪ್ರತಿಯೊಂದು ವರ್ಗದ ಜನರು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೂ, "ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವೆಲ್ಲರೂ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ" ಎಂದು ಪ್ರಧಾನಿ ಮೋದಿ ತಮ್ಮ ಜುಲೈ ತಿಂಗಳ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾನು ಹೋರಾಡಿದ್ದೇನೆ: ಮೋದಿ 'ಮನ್ ಕಿ ಬಾತ್'!

ಆಟಿಕೆಗಳ ರಫ್ತಿನಲ್ಲಿ ಭಾರತವು ಶಕ್ತಿಶಾಲಿಯಾಗುತ್ತಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಭಾರತಕ್ಕೆ ಆಟಿಕೆಗಳ ಆಮದು ಶೇಕಡಾ 70 ರಷ್ಟು ಕಡಿಮೆಯಾಗಿದೆ. ಇನ್ನೊಂದೆಡೆ, ಭಾರತದಿಂದ ಅವುಗಳ ರಫ್ತು ಈ ಹಿಂದಿನ 300-400 ಕೋಟಿ ರೂಪಾಯಿಗಳಿಂದ ಸುಮಾರು 2,600 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.

“ಭಾರತೀಯ ತಯಾರಕರು ಈಗ ಭಾರತೀಯ ಪುರಾಣ, ಇತಿಹಾಸ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಆಟಿಕೆಗಳನ್ನು ತಯಾರಿಸುತ್ತಿದ್ದಾರೆ, ದೇಶದ ಎಲ್ಲೆಡೆ ಇರುವ ಆಟಿಕೆ ಕ್ಲಸ್ಟರ್‌ಗಳು, ಆಟಿಕೆಗಳನ್ನು ತಯಾರಿಸುವ ಸಣ್ಣ ಉದ್ಯಮಿಗಳು ಇದರಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ. ಈ ಸಣ್ಣ ಉದ್ಯಮಿಗಳು ತಯಾರಿಸಿದ ಆಟಿಕೆಗಳು ಈಗ ಪ್ರಪಂಚದಾದ್ಯಂತ ರಫ್ತಾಗುತ್ತಿವೆ" ಎಂದು ಪ್ರಧಾನಿ ಮೋದಿ ಈ ವೇಳೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಭಾರತದ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ರೈಲ್ವೆ ಠಾಣೆಗಳಿಗೆ ಭೇಟಿ ನೀಡಿ ಎಂದೂ ಪ್ರಧಾನಿ ಮೋದಿ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.’ಆಜಾದಿ ಕೀ ರೈಲ್‌ ಗಾಡಿ ಔರ್ ರೈಲ್ವೆ ಸ್ಟೇಷನ್‌’ ಎಂಬ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಮೋದಿ, ದೇಶದ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಹಲವು ರೈಲು ನಿಲ್ದಾಣಗಳು ದೇಶದಲ್ಲಿವೆ. ಈ ರೈಲ್ವೆ ಸ್ಟೇಷನ್‌ಗಳ ಬಗ್ಗೆ ನಿಮಗೆ ಅಚ್ಚರಿ ಉಂಟಾಗಬಹುದು. ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂತಹ 75 ರೈಲು ನಿಲ್ದಾಣಗಳನ್ನು ಸಿದ್ಧಗೊಳಿಸಲಾಗಿದೆ ಎಂದೂ ಪ್ರಧಾನಿ ಮೋದಿ ಮನ್‌ ಕೀ ಬಾತ್‌ ಹೇಳಿದ್ದಾರೆ.