ಅಮಾಯಕರ ಹತ್ಯೆಗೆ ಒಪ್ಪದ ಭಾರತಕ್ಕೆ ಪಲಾಯನ| ಸಾಯುವವರೆಗೂ ಗುಂಡಿಕ್ಕಿ ಎಂದ ಆದೇಶ ಧಿಕ್ಕರಿಸಿ ಭಾರತಕ್ಕೆ ಬಂದ ಮ್ಯಾನ್ಮಾರ್‌ ಪೊಲೀಸ್‌ ಅಧಿಕಾರಿ ಕಥೆ

ಚಂಫೈ (ಮಾ.11): ಕಾನೂನಿನ ಪ್ರಕಾರ ಮೊಣಕಾಲಿನ ಕೆಳಗೆ ಮಾತ್ರವೇ ಗುಂಡು ಹೊಡೆಯಬಹುದು, ಅದೂ ಕೂಡಾ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ. ಆದರೆ ಇದೀಗ ಪರಿಸ್ಥಿತಿಯೇ ಬೇರೆ. ಪ್ರತಿಭಟನಾಕಾರರು ಸಾಯುವವರೆಗೂ ಗುಂಡಿಕ್ಕಿ ಎಂದು ನಮಗೆ ಆದೇಶಿಸಲಾಗಿತ್ತು. ಆದರೆ ನಮ್ಮದೇ ನಾಗರಿಕರು ಶಾಂತಿಯುತ ಪ್ರತಿಭಟನೆ ನಡೆಸುವಾಗ ನಾವು ಅವರ ಮೇಲೆ ಗುಂಡಿಕ್ಕುವುದಾದರೂ ಹೇಗೆ? ನಾವು ಗುಂಡಿನ ದಾಳಿ ಸಾಧ್ಯವಿಲ್ಲ ಎಂದು ಬಿಟ್ಟೆವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾರನೇ ದಿನ ಮತ್ತೆ ನಮ್ಮ ಹಿರಿಯ ಅಧಿಕಾರಿ ಬಂದು, ಗುಂಡಿನ ದಾಳಿ ಮಾಡುವೆಯೋ? ಇಲ್ಲವೋ? ಈ ಎಂದು ಮರುಪ್ರಶ್ನೆ ಹಾಕಿದ್ದ. ಬೇರೆ ದಾರಿ ಕಾಣದೆ ನಾನು ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿದೆ, ಭಾರತಕ್ಕೆ ಪಲಾಯನ ಮಾಡಿದೆ...

ಇದು ನೆರೆಯ ಮ್ಯಾನ್ಮಾರ್‌ನಿಂದ ಇತ್ತೀಚೆಗೆ ಭಾರತಕ್ಕೆ ರಹಸ್ಯವಾಗಿ ಪಲಾಯನ ಮಾಡಿದ ಥಾ ಪೆಂಗ್‌ ಎಂಬ ಪೊಲೀಸ್‌ ಅಧಿಕಾರಿಯ ಕಥೆ.

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ಕಾರ ಇತ್ತೀಚೆಗೆ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ, ಪ್ರಜಾಪ್ರಭುತ್ವ ಪರ ಹೋರಾಟಗಾರರು ಬೀದಿಗೆ ಬಂದಿದ್ದಾರೆ. ಈ ವೇಳೆ ಪ್ರತಿಭಟನೆ ಹತ್ತಿಕ್ಕಲು ಸೇನೆ ಪೊಲೀಸರನ್ನು ಬಳಸಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದೆ. ಇಂಥ ದಾಳಿಯಲ್ಲಿ ಈಗಾಗಲೇ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಆದರೆ ಕೆಲ ಪೊಲೀಸರು ಅಮಾಯಕರ ಮೇಲೆ ದಾಳಿ ನಡೆಸಲು ಒಪ್ಪದೆ, ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಆದರೆ ಹೀಗೆ ರಾಜೀನಾಮೆ ನೀಡಿದವರಿಗೆ ಸೇನೆ ಕಿರುಕುಳ ನೀಡುತ್ತಿರುವ ಕಾರಣ, ಬಹಳಷ್ಟುಜನ ತಲೆ ಮರೆಸಿಕೊಂಡಿದ್ದಾರೆ. ಇನ್ನೊಂದಿಷ್ಟುಜನ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಅಂಥವರ ಪೈಕಿ ಪೆಂಗ್‌ ಕೂಡಾ ಒಬ್ಬರು.

ರಾಜೀನಾಮೆ ನೀಡಿದ ಬಳಿಕ, ಆನ್‌ಲೈನ್‌ ಮೂಲಕವೇ ಪ್ರಜಾಪ್ರಭುತ್ವ ಹೋರಾಟಗಾರರನ್ನು ಸಂಪರ್ಕಿಸಿ ಭಾರತದ ಮಿಜೋರಾಂ ತಲುಪುವ ಬಗ್ಗೆ ಮಾಹಿತಿ ಪಡೆದುಕೊಂಡೆ. ಅದರಂತೆ 3 ದಿನ ಬರಿ ರಾತ್ರಿ ವೇಳೆ ಮಾತ್ರ ಪ್ರಯಾಣಿಸುವ ಮೂಲಕ ರಹಸ್ಯವಾಗಿ ಭಾರತಕ್ಕೆ ಪಲಾಯನ ಮಾಡಿದೆ ಎಂದು ಪೆಂಗ್‌, ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ