ನಾನು ಓಡಾಡುವೆ, ಬಿಜೆಪಿ ಹೇಗೆ ಓಡಾಡುತ್ತೋ ನೋಡುವೆ: ಬಿಜೆಪಿಗೆ ಮಮತಾ ಟಾಂಗ್!
ನಂದಿಗ್ರಾಮದಲ್ಲಿ ಗಾಯವಾದ ಕಾಲಿಗೆ ಚಿಕಿತ್ಸೆ| ನಾನು ಓಡಾಡುವೆ, ಬಿಜೆಪಿ ಹೇಗೆ ಓಡಾಡುತ್ತೋ ನೋಡುವೆ| ಬಿಜೆಪಿಗೆ ಮಮತಾ ಟಾಂಗ್
ಝಲ್ದಾ (ಮಾ.16): ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ತಮ್ಮ ವಿರುದ್ಧ ನಡೆಯುವ ಯಾವುದೇ ಷಡ್ಯಂತ್ರಗಳು ಬಿಜೆಪಿ ವಿರುದ್ಧದ ತಮ್ಮ ಹೋರಾಟ ಮತ್ತು ಪ್ರಚಾರಕ್ಕೆ ಅಡ್ಡಿಪಡಿಸಲಾರವು ಎಂದು ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದರು.
ನಂದಿಗ್ರಾಮದಲ್ಲಿ ಗಾಯವಾದ ಕಾಲಿಗೆ ಚಿಕಿತ್ಸೆ ಪಡೆದ ಬಳಿಕ ಸೋಮವಾರ ಭಾಗಿಯಾದ ತಮ್ಮ ಮೊದಲ ಚುನಾವಣಾ ರಾರಯಲಿಯನ್ನುದ್ದೇಶಿಸಿ ದೀದಿ, ‘ನನ್ನ ಕಾಲು ಶೀಘ್ರ ಸರಿಯಾಗುತ್ತೆ. ಕೆಲ ದಿನಗಳಲ್ಲಿ ನಾನು ಓಡಾಡುವೆ. ಆದರೆ. ಬಂಗಾಳದ ಮಣ್ಣಿನಲ್ಲಿ ನಿಮ್ಮ ಕಾಲು ಅದು ಹೇಗೆ ಓಡಾಡಲಿವೆ ಎಂದು ನೋಡುತ್ತೇನೆ’ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಇನ್ನು, ‘ರಥಗಳಲ್ಲಿ ಓಡಾಡುವವ ಪುರಿ ಜಗನ್ನಾಥ. ಆದರೆ ಈಗ ರಥದಲ್ಲಿ ಓಡಾಡುವವರೆಲ್ಲ ದೇವರೇ?’ ಎಂದು ಬಿಜೆಪಿ ರಥಯಾತ್ರೆಯನ್ನು ಗೇಲಿ ಮಾಡಿದರು.
ದಿಲ್ಲಿಯ ಹಲವು ನಾಯಕರೊಂದಿಗೆ ಬಂಗಾಳವನ್ನು ಗೆಲ್ಲಲು ಬಿಜೆಪಿ ಮುಂದಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಸಾಮಾಜಿಕ ಕಲ್ಯಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದೇನೆ. ನಾವು ಮಾಡಿದಷ್ಟುಅಭಿವೃದ್ಧಿ ಕೆಲಸವನ್ನು ವಿಶ್ವದ ಯಾವುದೇ ಸರ್ಕಾರಗಳು ಮಾಡಲಾಗದು. ಹೀಗಾಗಿ ಬಂಗಾಳ ನಿಮಗೆ ದಕ್ಕದು. ಅಲ್ಲದೆ ದೇಶವನ್ನು ಮುನ್ನಡೆಸಲಾಗದ ಪ್ರಧಾನಿ ಅವರು ಪೂರ್ತಿ ಅಸಮರ್ಥರು ಎಂಬುದು ಖಚಿತವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜೊತೆಗೆ ತಮ್ಮ ಧ್ವನಿ ಮತ್ತು ಹೃದಯ ಜೀವಂತ ಇರುವವರೆಗೆ ತಮ್ಮ ಹೋರಾಟವನ್ನು ಮುಂದುವರಿಸುತ್ತೇನೆ ಎಂದರು.