ಮಂಗ್ಳೂರಿನ ಗ್ಯಾಂಗ್ಸ್ಟರ್ ಪ್ರಸಾದ್ ಪೂಜಾರಿ ಚೀನಾದಿಂದ ಭಾರತಕ್ಕೆ ಗಡಿಪಾರು
ಶಿವಸೇನಾ ಕಾರ್ಯಕರ್ತ ಚಂದ್ರಕಾಂತ ಜಾಧವ್ ಹತ್ಯೆ ಮತ್ತು ಹಲವು ಸುಲಿಗೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್, ಮಂಗಳೂರು ಮೂಲದ ಪ್ರಸಾದ್ ಪೂಜಾರಿಯನ್ನು ಚೀನಾ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ.
ಮುಂಬೈ (ಮಾ.24): ಶಿವಸೇನಾ ಕಾರ್ಯಕರ್ತ ಚಂದ್ರಕಾಂತ ಜಾಧವ್ ಹತ್ಯೆ ಮತ್ತು ಹಲವು ಸುಲಿಗೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್, ಮಂಗಳೂರು ಮೂಲದ ಪ್ರಸಾದ್ ಪೂಜಾರಿಯನ್ನು ಚೀನಾ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಪ್ರಸಾದ್ ಶನಿವಾರ ಮುಂಬೈಗೆ ಬಂದಿಳಿಯುತ್ತಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಉಗ್ರರು ಮತ್ತು ಗ್ಯಾಂಗ್ಸ್ಟರ್ಗಳ ವಿಷಯದಲ್ಲಿ ಸದಾ ಭಾರತ ವಿರೋಧಿ ನಿಲುವು ಹೊಂದಿರುವ ಚೀನಾ ಸರ್ಕಾರ, ಭಾರತದ ಕೋರಿಕೆ ಮನ್ನಿಸಿ ಪ್ರಸಾದ್ನನ್ನು ಗಡಿಪಾರು ಮಾಡಿದ್ದು ಅಪರೂಪದ ಬೆಳವಣಿಗೆ ಎನ್ನಲಾಗಿದೆ.
ಯಾರು ಗಣೇಶ್ ಪೂಜಾರಿ?: ಛೋಟಾ ರಾಜನ್ ಗ್ಯಾಂಗ್ನ ಸದಸ್ಯನಾಗಿದ್ದ ಪ್ರಸಾದ್ ಪೂಜಾರಿ ಗಣೇಶ್ ಪೂಜಾರಿ ಮುಂಬೈನಲ್ಲಿ ಭೂಗತ ಪಾತಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ ಹಿನ್ನೆಲೆಯಲ್ಲಿ ದಶಕಗಳ ಹಿಂದೆಯೇ ಚೀನಾಕ್ಕೆ ತೆರಳಿ ಅಲ್ಲಿ ಮಹಿಳೆಯನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದ. ಜೊತೆಗೆ ಅಲ್ಲಿಂದಲೇ ಮುಂಬೈನಲ್ಲಿ ಸುಲಿಗೆ, ಹತ್ಯೆ ಮೊದಲಾದ ಕೃತ್ಯ ನಡೆಸುತ್ತಿದ್ದ. ಇಂತ ಪ್ರಕರಣಗಳ ಕುರಿತು ಖಚಿತ ಸಾಕ್ಷ್ಯ ಸಂಗ್ರಹಿಸಿದ್ದ ಭಾರತ ಸರ್ಕಾರ ಈತನ ಗಡಿಪಾರಿಗೆ ಚೀನಾಗೆ ಮನವಿ ಮಾಡಿತ್ತು. 2023ರ ಮಾರ್ಚ್ನಲ್ಲಿ ನಕಲಿ ಪಾಸ್ಪೋರ್ಟ್ ಹೊಂದಿದ ಆರೋಪದಲ್ಲಿ ಬಂಧಿಸಿದ್ದರು. ಸುಲಿಗೆ ಪ್ರಕರಣದಲ್ಲಿ ಪ್ರಸಾದ್ನ ತಾಯಿ ಇಂದಿರಾ ವಿಠಲ್ ಪೂಜಾರಿಯನ್ನೂ ಬಂಧಿಸಲಾಗಿತ್ತು.
ದಿಲ್ಲಿ ಸಿಎಂ ಕೇಜ್ರಿವಾಲ್ಗೆ ತನಿಖೆ ಕುಣಿಕೆ ಇನ್ನಷ್ಟು ಬಿಗಿ: ಜಲಮಂಡಳಿ ಕೇಸಲ್ಲೂ ವಿಚಾರಣೆ ಸಾಧ್ಯತೆ
ಪ್ರಸಾದ್ ವಿರುದ್ಧ 15 ರಿಂದ 20 ಪ್ರಕರಣ: ಚೀನಾದಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸುವ ಪ್ರಕ್ರಿಯೆಯು ಕಳೆದ ವರ್ಷದಿಂದ ವೇಗ ಪಡೆದುಕೊಂಡಿತ್ತು. ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ಪ್ರಸಾದ್ ಪೂಜಾರಿ ವಿರುದ್ಧ ಸುಮಾರು 15 ರಿಂದ 20 ಪ್ರಕರಣಗಳು ದಾಖಲಾಗಿವೆ. ಪ್ರಸಾದ್ ಪೂಜಾರಿಯನ್ನು ಚೀನಾದ ಅಧಿಕಾರಿಗಳು ಮಾರ್ಚ್ 2023ರಲ್ಲಿ ಹಾಂಗ್ ಕಾಂಗ್ನಿಂದ ಬಂಧಿಸಿದ್ದರು. ಮುಂಬೈನಲ್ಲಿ ಪ್ರಸಾದ್ ಪೂಜಾರಿ ವಿರುದ್ಧ ಈಗಾಗಲೇ ಸುಲಿಗೆ, ಕೊಲೆ ಮತ್ತು ಕೊಲೆ ಯತ್ನದಂತಹ ವಿವಿಧ ಪ್ರಕರಣಗಳು ದಾಖಲಾಗಿವೆ. ಪ್ರಸಾದ್ ಪೂಜಾರಿ ಮೋಸ್ಟ್ ವಾಂಟೆಡ್ ಆರೋಪಿ ಆಗಿದ್ದಾನೆ. ನಕಲಿ ಪಾಸ್ಪೋರ್ಟ್ ಹೊಂದಿದ್ದ ಆರೋಪದ ಮೇಲೆ 2023ರ ಮಾರ್ಚ್ನಲ್ಲಿ ಹಾಂಕಾಂಗ್ನಲ್ಲಿ ಬಂಧನಕ್ಕೊಳಗಾಗಿದ್ದ ಪೂಜಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.