Maharashtra Politics: ರಾಹುಲ್ ಸಮಾವೇಶಕ್ಕೆ ಸಿಗದ ಅನುಮತಿ, ಠಾಕ್ರೆ ವಿರುದ್ಧ ಹೈಕೋರ್ಟ್ ತಲುಪಿದ ಕಾಂಗ್ರೆಸ್!
* ಡಿಸೆಂಬರ್ 28 ರಂದು ನಗರದ ಶಿವಾಜಿ ಪಾರ್ಕ್ನಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಷಣ
* ರಾಹುಲ್ ಸಮಾವೇಶಕ್ಕೆ ಸಿಗದ ಅನುಮತಿ
* ಉದ್ಧವ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಕಾಂಗ್ರೆಸ್
ಮಹಾರಾಷ್ಟ್ರ(ಡಿ.14): ಡಿಸೆಂಬರ್ 28 ರಂದು ನಗರದ ಶಿವಾಜಿ ಪಾರ್ಕ್ನಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಷಣ ಮಾಡಲು ಅವಕಾಶ ನೀಡದ ಸ್ಥಳೀಯ ಸಂಸ್ಥೆ ಮತ್ತು ಪೊಲೀಸರ ವಿರುದ್ಧ ಮುಂಬೈ ಕಾಂಗ್ರೆಸ್ ಸೋಮವಾರ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಸಲ್ಲಿಸಿರುವ ರಾಜ್ಯ ಘಟಕದ ಅಧ್ಯಕ್ಷ ಭಾಯಿ ಜಗತಾಪ್, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಪ್ರಕರಣ ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಮಿತ್ರಪಕ್ಷ ಕಾಂಗ್ರೆಸ್. ಕೋವಿಡ್ -19 ರ ಓಮಿಕ್ರಾನ್ ತಳಿಯ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ, ಮುಂಬರುವ ಸಮಾವೇಶಗಳಿಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಯೋಚಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
ಅರ್ಜಿಯಲ್ಲಿ ಕಾಂಗ್ರೆಸ್ ಏನು ಹೇಳಿದೆ?
ಪಿಟಿಐ ವರದಿಯ ಪ್ರಕಾರ, ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಸಮಾವೇಶ ನಡೆಸಲು ಅನುಮತಿ ಕೋರಿ ಅಕ್ಟೋಬರ್ 2021 ರಲ್ಲಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಜಗತಾಪ್ ಹೇಳಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ರಾಹುಲ್ ಗಾಂಧಿ ಅವರನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಅರ್ಜಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
'ಕಾಂಗ್ರೆಸ್ಗೆ ಸಮಾವೇಶ ನಡೆಸಲು ಏಕೆ ಬಿಡುತ್ತಿಲ್ಲ'
ಮುಂಬೈ ಕಾಂಗ್ರೆಸ್ ಮುಖ್ಯಸ್ಥರ ಈ ಬಗ್ಗೆ ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ, "ನಮಗೆ ಏಕೆ ಅನುಮತಿ ನೀಡಿಲ್ಲ ಎಂದು ನಮಗೆ ಅರ್ಥವಾಗುತ್ತಿಲ್ಲ? ಅವರು ಕೋವಿಡ್ -19 ಚಿಂತೆ ನಮಗೂ ಇದೆ, ನಾವು ಈಗಾಗಲೇ ನಮ್ಮ ಪತ್ರದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ತಿಳಿಸಿದ್ದೇವೆ. ಹೆಚ್ಚು ಸಮಯ ಉಳಿದಿಲ್ಲವಾದ್ದರಿಂದ ಅನುಮತಿಗಾಗಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದಿದ್ದಾರೆ.
ಅರ್ಜಿಯಲ್ಲಿ ಸಮಾವೇಶಕ್ಕೆ ಅವಕಾಶ ನೀಡುವಂತೆ ಉದ್ಧವ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹ
ಕೇಂದ್ರ ಮುಂಬೈನ ವಿಸ್ತಾರವಾದ ಮೈದಾನದ ಒಂದು ಭಾಗದಲ್ಲಿ ಸಾರ್ವಜನಿಕ ಸಭೆ ನಡೆಸಲು ಮತ್ತು ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ ಅರ್ಜಿಯು ಹೈಕೋರ್ಟ್ಗೆ ನಿರ್ದೇಶನವನ್ನು ಕೋರಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 137 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸಾರ್ವಜನಿಕ ಸಭೆ ನಡೆಸಲು ಪಕ್ಷವು ಡಿಸೆಂಬರ್ 22 ರಿಂದ ಡಿಸೆಂಬರ್ 28 ರವರೆಗೆ ಶಿವಾಜಿ ಪಾರ್ಕ್ ಮೈದಾನವನ್ನು ಬಳಸಲು ಅನುಮತಿ ಕೋರಿದೆ ಎಂದು ಜಗತಾಪ್ ಅವರ ವಕೀಲ ಪ್ರದೀಪ್ ಥೋರಟ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವಾಗಿರುವ ಡಿಸೆಂಬರ್ 28 ಕಾಂಗ್ರೆಸ್ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.