ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 15ಕ್ಕೂ ಹೆಚ್ಚು ವಾಹನದ ಮೇಲೆ ಹರಿದ ಟ್ರಕ್, ಐದು ಸಾವು ಹಲವರು ಗಂಭೀರ. ಎರಡು ಟ್ರಕ್ ನಡುವೆ ಕಾರು ಅಪ್ಪಚ್ಚಿಯಾಗಿದೆ. ಟ್ರಕ್‌ಗೆ ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗಿದೆ.

ಪುಣೆ (ನ.13) ಮುಂಬೈ ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪುಣೆಯ ಹೊರವಲಯದ ಸೆಲ್ಫಿ ಪಾಯಿಂಟ್ ಬ್ರಿಡ್ಜ್ ಬಳಿ ಈ ದುರ್ಘಟನೆ ನಡೆದಿದೆ. ಕಂಟೈನರ್ ಟ್ರಕ್‌ನಿಂದ ಸರಣಿ ಅಪಘಾತ ಸಂಭವಿಸಿದೆ. ಟ್ರಕ್ ಡಿಕ್ಕಿಯಾದ ಪರಿಣಾಮ ಕಾರು ಅಪ್ಪಚ್ಚಿಯಾಗಿದೆ. ಇಷ್ಟೇ ಅಲ್ಲ ಬೆಂಕಿ ಹೊತ್ತಿಕೊಂಡು ಟ್ರಕ್, ಕಾರು ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಇತ್ತ ಅಗ್ನಿಶಾಮಕ ದಳ, ಪೊಲೀಸರು ಸ್ಥಳದಲ್ಲಿ ಪರಿಸ್ಥತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

15ಕ್ಕೂ ಹೆಚ್ಚು ವಾಹನದ ಮೇಲೆ ಹರಿದ ಟ್ರಕ್

ಪುಣೆಯ ನವಲೆ ಸೇತುವೆ ಬಳಿ ಈ ದುರಂತ ಸಂಭವಿಸಿದೆ. ವೇಗಾಗಿ ಬಂದ ಕಂಟೈನರ್ ಟ್ರಕ್ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ವಾಹನಗಳ ಮೇಲೆ ಹರಿದಿದೆ. 15ಕ್ಕೂ ಹೆಚ್ಚು ವಾಹನಗಳು ಅಪ್ಪಚ್ಚಿಯಾಗಿದೆ. ಈ ಪೈಕಿ ಒಂದು ಕಾರು ಎರಡು ಟ್ರಕ್ ನಡುವೆ ಸಿಲುಕಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ಟ್ರಕ್ ನಿಯಂತ್ರಣಕ್ಕೆ ಸಿಗದ ಕಾರಣ ಕಾರನ್ನು ಎಳೆದುಕೊಂಡು ಕೆಲ ದೂರ ಹೋಗಿದೆ. ಹೀಗಾಗಿ ಕಿಡಿ ಹೊತ್ತಿಕೊಂಡು ಬೆಂಕಿಯ ಜ್ವಾಲೆ ಆವರಿಸಿದೆ. ಪರಿಣಾಮ ಕಾರು, ಟ್ರಕ್ ಹೊತ್ತಿ ಉರಿದಿದೆ.

3ಕ್ಕೂ ಹೆಚ್ಚು ವಾಹನಕ್ಕೆ ಬೆಂಕಿ

ಅಪಘಾತದ ತೀವ್ರತೆಯಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ಟ್ರಕ್ ಸೇರಿ ಮೂರು ಘನ ವಾಹನಗಳು ಹೊತ್ತಿ ಉರಿದಿದೆ. ಘಟನೆಗೆ ಟ್ರಕ್ ನಿಯಂತ್ರಣ ತಪ್ಪಿದ್ದೆ ಕಾರಣ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ. ಹದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಟ್ರಾಫಿಕ್ ಜಾಮ್ ಸಂಭವಿಸಿದೆ. ಹೀಗಾಗಿ ಕೀಲೋಮೀಟರ್ ಉದ್ದ ವಾಹನಗಳು ನಿಂತಿದೆ. ವಾಹನಗಳಿಗೆ ಬದಲಿ ಮಾರ್ಗ ಬಳಸಲು ಪೊಲೀಸರು ಸೂಚಿಸಿದ್ದಾರೆ. ಟ್ರಾಫಿಕ್ ಜಾಮ್‌ನಲ್ಲಿ ನಿಂತಿರುವ ವಾಹನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗುತ್ತಿದೆ.

ಪುಣೆ ಸಿಟಿ ಪೊಲೀಸ್ ಡಿಸಿಪಿ ಸಂಭಜ್ ಕದಮ್ ಸ್ಥಳದಲ್ಲಿದ್ದಾರೆ.ಘಟನೆಯಲ್ಲಿ ಐವರು ಮೃತಪಟ್ಟಿರುವುದಾಗಿ ಸಂಭಜ್ ಕದಮ್ ಹೇಳಿದ್ದಾರೆ. 10ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇತ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಸದ್ಯ ಗಾಯಾಳುಗಳ ರಕ್ಷಣೆ, ಅವರಿಗೂ ಸೂಕ್ತ ಚಿಕಿತ್ಸೆಯತ್ತ ಗಮನ ನೀಡಿದ್ದೇವೆ. ಇದೇ ವೇಳೆ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಟ್ರಾಫಿಕ್ ಜಾಮ್ ಸರಿದೂಗಿಸಲು ಪ್ರಯತ್ನಿಸಲಾಗುತ್ತಿದೆ. ಬದಲಿ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ತನಿಖೆ ತೀವ್ರಗೊಳ್ಳಲಿದೆ. ಅತೀ ವೇಗದ ಚಾಲನೆಯಿಂದ ದುರಂತ ಸಂಭವಿಸಿದೆಯಾ ಅನ್ನೋ ಕುರಿತು ತನಿಖೆ ನಡೆಯಲಿದೆ ಎಂದು ಸಂಭಜ್ ಕದಮ್ ಹೇಳಿದ್ದಾರೆ.