Covid Crisis: ಮೃತರ ಸಂಖ್ಯೆಗಿಂತ ಪರಿಹಾರಕ್ಕೆ 9 ಪಟ್ಟು ಹೆಚ್ಚು ಅರ್ಜಿ!
* ತೆಲಂಗಾಣ, ಗುಜರಾತ್ನಲ್ಲಿ ಅರ್ಜಿಗಳ ಸಲ್ಲಿಕೆ
* ಕೋವಿಡ್: ಮೃತರ ಸಂಖ್ಯೆಗಿಂತ ಪರಿಹಾರಕ್ಕೆ 9 ಪಟ್ಟು ಹೆಚ್ಚು ಬೇಡಿಕೆ!
* ಸುಪ್ರೀಂಗೆ ಸಲ್ಲಿಸಲಾದ ರಾಜ್ಯಗಳ ಮಾಹಿತಿಯಲ್ಲಿ ಈ ಅಂಶ
ನವದೆಹಲಿ(ಜ.20): ಕೋವಿಡ್ ಪರಿಹಾರಕ್ಕೆ ಸಲ್ಲಿಸಲಾದ ಕ್ಲೇಮುಗಳ ಸಂಖ್ಯೆಯು ಕೋವಿಡ್ನಿಂದ ಬಲಿಯಾದ ಅಧಿಕೃತ ಅಂಕಿಸಂಖ್ಯೆಗಿಂತಲೂ 7 ಮತ್ತು 9 ಪಟ್ಟು ಹೆಚ್ಚಾಗಿದೆ ಎಂದು ತೆಲಂಗಾಣ ಮತ್ತು ಗುಜರಾತ್ ರಾಜ್ಯಗಳು ಸುಪ್ರೀಂ ಕೋರ್ಟ್ಗೆ ತಿಳಿಸಿವೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ ಮತ್ತು ಕೋವಿಡ್ ಪರಿಹಾರಕ್ಕೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಭಾರೀ ವ್ಯತ್ಯಾಸವಿದೆ.
ಕೋವಿಡ್ಗೆ ತುತ್ತಾಗಿ 30 ದಿನಗಳಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಸಾವನ್ನು ಸಹ ಕೋವಿಡ್ ಸಾವು ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಸುಪ್ರೀಂ ಮಾರ್ಗಸೂಚಿ ಅನ್ವಯ ಸರ್ಕಾರದ ದತ್ತಾಂಶಗಳಲ್ಲಿ ದಾಖಲಾದ ಕೋವಿಡ್ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಮೊದಲೇ ಇತ್ತು. ಆದರೆ ಈ ಪ್ರಮಾಣದಷ್ಟುಇರಲಿದೆ ಎಂದು ಊಹಿಸಲಾಗಿರಲಿಲ್ಲ.
ಕೋವಿಡ್ಗೆ ಬಲಿಯಾದ ಕುಟುಂಬಗಳ ಸದಸ್ಯರಿಗೆ ಪರಿಹಾರ ನೀಡಲಾಗಿದೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಉಸ್ತುವಾರಿ ವಹಿಸಿದೆ. ಈ ಪ್ರಕಾರ ತೆಲಂಗಾಣ ಸರ್ಕಾರ ಕೋವಿಡ್ನಿಂದ 3993 ಮಂದಿ ಬಲಿಯಾಗಿದ್ದಾರೆ ಎಂದಿದೆ. ಆದರೆ ಕೋವಿಡ್ ಪರಿಹಾರಕ್ಕಾಗಿ 29 ಸಾವಿರ ಕ್ಲೇಮ್ಗಳು ಸಲ್ಲಿಕೆಯಾಗಿವೆ. ಇತರೆ ರಾಜ್ಯಗಳಲ್ಲೂ ಇದೇ ಪುನರಾವರ್ತನೆಯಾಗಿದೆ.