ಜೈಲಿನಿಂದ ಆರೋಗ್ಯ ಹಾಳಾಗಿದೆ. 35 ಕೆಜಿ ತೂಕ ಕಳೆದುಕೊಂಡಿದ್ದೇನೆ. ಇದೀಗ ಅಸ್ತಿಪಂಜರವಾಗಿದ್ದೇನೆ. ಹೀಗಾಗಿ ಜಾಮೀನು ನೀಡಿ ಎಂದು ಜೈಲು ಪಾಲಾಗಿರುವ ಆಪ್ ನಾಯತ ಸತ್ಯೇಂದರ್ ಜೈನ್ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ಉತ್ತರವೇನು?
ನವದೆಹಲಿ(ಮೇ.18): ಆಮ್ ಆದ್ಮಿ ಪಾರ್ಟಿ ನಾಯಕ, ಮಾಜಿ ಸಚಿವ ಸತ್ಯೇಂದ್ರ ಜೈನ್ ಜೈಲು ಜೈಲು ಸೇರಿ ವರ್ಷವಾಗುತ್ತಿದೆ. ಜಾಮೀನಿಗಾಗಿ ಹಲವು ಪ್ರಯತ್ನಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಸತ್ಯೇಂದರ್ ಜೈನ್ ಹೊಸ ದಾಳ ಉರುಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ, ಹವಾಲ ಪ್ರಕರಣ ಸಂಬಂಧ ಜೈಲು ಸೇರಿರುವ ಸತ್ಯಂದ್ರ ಜೈನ್ ಜಾಮೀನಿಗಾಗಿ ಆರೋಗ್ಯ ಕಾರಣ ನೀಡಿದ್ದಾರೆ. ಆದರೆ ತನಗೆ ಆರೋಗ್ಯ ಸಮಸ್ಯೆ ಇದೆ ಜಾಮೀನು ನೀಡಿ ಎಂದು ಕೇಳಿಲ್ಲ. ಬದಲಾಗಿ ಜೈಲು ಸೇರಿದ ಬಳಿಕ 35 ಕೆಜಿ ತೂಕ ಕಳೆದುಕೊಂಡು ಅಸ್ತಿಪಂಜರವಾಗಿದ್ದೇನೆ. ಹೀಗಾಗಿ ಜಾಮೀನು ನೀಡಬೇಕು ಎಂದು ಹೊಸ ವಾದ ಮುಂದಿಟ್ಟಿದ್ದಾರೆ.
ಸತ್ಯೇಂದ್ರ ಜೈನ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ. ಜೈಲು ಸೇರಿದ ಬಳಿಕ ಸತ್ಯೇಂದ್ರ ಜೈನ್ ಆರೋಗ್ಯ ತೀವ್ರ ಸಮಸ್ಯೆಯಾಗಿದೆ. 35 ಕೆಜಿ ತೂಕ ಕಳೆದುಕೊಂಡು ಅಸ್ತಿಪಂಜರದ ರೀತಿ ಆಗಿದ್ದಾರೆ. ಮತ್ತಷ್ಟು ಆರೋಗ್ಯ ಹದಗೆಡುವ ಮೊದಲು ಜಾಮೀನು ನೀಡಬೇಕು ಎಂದು ಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ. ಸತ್ಯೇಂದ್ರ ಜೈನ್ ವಾದ ಆಲಿಸಿದ ಕೋರ್ಟ್, ಜಾರಿ ನಿರ್ದೇಶನಾಲಯದ ಅಭಿಪ್ರಾಯ ಕೇಳಿದೆ.
ಬೋರಾಗ್ತಿದೆ ಎಂದಿದ್ದ ಸತ್ಯೇಂದ್ರ ಸೆಲ್ಗೆ ಕೈದಿಯ ಕಳುಹಿಸಿದ ಜೈಲಾಧಿಕಾರಿಗೆ ನೊಟೀಸ್
ಅಕ್ರಮ ಆಸ್ತಿ ಸಂಪಾದನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸತ್ಯೇಂದ್ರ ಜೈನ್ ಅವರನ್ನು ಇಡಿ ಪೊಲೀಸರು ಬಂಧಿಸಿದ್ದರು. ಬಳಿಕ ಹಲವು ಪ್ರಯತ್ನ ನಡೆಸಿದರೂ ಜಾಮೀನು ಸಿಕ್ಕಿಲ್ಲ. ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕದ ತಟ್ಟಿರುವ ಸತ್ಯೇಂದ್ರ ಜೈನ್, ಈ ಬಾರಿ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಜೈನ್ ಪ್ರಭಾವಿ ವ್ಯಕ್ತಿಯಾಗಿದ್ದು ಹೊರಬಂದರೆ ಸಾಕ್ಷ್ಯ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ ಮಾಡಿದ್ದರು. ಸಹ ಆರೋಪಿಗಳಾದ ವೈಭವ್ ಜೈನ್ ಹಾಗೂ ಅಂಕುಶ್ ಜೈನ್ ಅವರ ಜಾಮೀನು ಅರ್ಜಿಗಳನ್ನೂ ವಜಾಗೊಳಿಸಿದೆ. ತಮ್ಮ ಸಂಪರ್ಕದಲ್ಲಿದ್ದ ನಾಲ್ಕು ಕಂಪನಿಗಳಿಂದ ಹಣ ಲಪಟಾಯಿಸಿದ ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜೈನ್ ವಿರುದ್ಧ ತನಿಖೆ ನಡೆಸುತ್ತಿದೆ.
ತಿಹಾರ್ ಜೈಲು ಸೇರಿರುವ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್, ಒಬ್ಬರೇ ಇರಲು ಬೇಸರವಾಗುತ್ತದೆಂದು ತಾವಿದ್ದ ಕೋಣೆಗೆ ಇನ್ನಿಬ್ಬರು ಕೈದಿಗಳನ್ನು ಹಾಕಿಸಿಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ‘ನಾನು ಒಂಟಿತನದಿಂದ ಖಿನ್ನತೆಗೆ ಒಳಗಾಗಿದ್ದೇನೆ. ಮಾನಸಿಕ ಆರೋಗ್ಯಕ್ಕಾಗಿ ಸಾಮಾಜಿಕ ಸಂವಹನ ನಡೆಸುವಂತೆ ವೈದ್ಯರು ಸಲಹೆ ನಿಡಿದ್ದಾರೆ. ಹೀಗಾಗಿ ನನ್ನ ಕೋಣೆಗೆ ಇಬ್ಬರು ಕೈದಿಗಳನ್ನು ರವಾನಿಸಿ’ ಎಂದು ಮೇ11 ರಂದು ಜೈನ್ ಬೇಡಿಕೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ನಂ. 7ನೇ ಜೈಲು ಪೊಲೀಸ್ ಅಧಿಕಾರಿಗಳು ಇಬ್ಬರು ಕೈದಿಗಳನ್ನು ಜೈನ್ ಕೋಣೆಗೆ ರವಾನಿಸಿದ್ದರು. ಜೈಲಿನಲ್ಲಿ ಮಸಾಜ್ ಮಾಡಿಸಿಕೊಂಡ ಘಟನೆಯೂ ನಡಿದಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಸೇವಾ ಕಾರ್ಯದರ್ಶಿಯನ್ನು ವಜಾ ಮಾಡಿದ ಕೇಜ್ರಿವಾಲ್!
ಸತ್ಯೇಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದರೆ, ಅಕ್ರಮ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಸೇರಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬಂಧನಕ್ಕೊಳಪಟ್ಟಆಮ್ ಆದ್ಮಿ ಪಕ್ಷದ 2ನೇ ಸಚಿವರಾಗಿದ್ದಾರೆ.
