Asianet Suvarna News Asianet Suvarna News

ಹೇಳಿಕೆಗಳು ಎಲ್ಲೆ ಮೀರಬಾರದು: ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಸಲಹೆ

‘ರಾಹುಲ್‌ ಗಾಂಧಿ ಕೋಲಾರದಲ್ಲಿ ಭಾಷಣ ಮಾಡಿದ ಸಮಯದಲ್ಲಿ ಈ ಪ್ರಕರಣ ದಾಖಲಿಸಿರುವ ಪೂರ್ಣೇಶ್‌ ಮೋದಿ ಹಾಜರಿರಲಿಲ್ಲ. ಕೇವಲ ವಾಟ್ಸಾಪ್‌ನಲ್ಲಿ ಬಂದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. 

modi surname case gujarat high court hears rahul gandhi s plea ash
Author
First Published Apr 30, 2023, 9:13 AM IST

ಅಹಮದಾಬಾದ್‌ (ಏಪ್ರಿಲ್ 30, 2023): ಜನಪ್ರತಿನಿಧಿಗಳು ಮಿತಿ ಮತ್ತು ಎಲ್ಲೆ ಮೀರಿ ಹೇಳಿಕೆಗಳನ್ನು ನೀಡಬಾರದು ಎಂದು ಗುಜರಾತ್‌ ಹೈಕೋರ್ಟ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಲಹೆ ನೀಡಿದೆ. ಮೋದಿ ಉಪನಾಮ ಪ್ರಕರಣದಲ್ಲಿ ತಮಗೆ ವಿಧಿಸಲಾದ 2 ವರ್ಷ ಜೈಲು ಶಿಕ್ಷೆಗೆ ತಡೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಗುಜರಾತ್‌ ಹೈಕೋರ್ಟ್‌ ಈ ಮಾತುಗಳನ್ನು ಆಡಿದೆ.

ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಪ್ರಚ್ಚಕ್‌ ‘ಹೆಚ್ಚಿನ ಸಂಖ್ಯೆಯಲ್ಲಿರುವ ಜನರ ಎದುರು ಮಾತನಾಡುವಾಗ ಎಚ್ಚರದಿಂದಿರಬೇಕು. ರಾಹುಲ್‌ ಗಾಂಧಿ ಜನರನ್ನು ಪ್ರತಿನಿಧಿಸುವ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಹೇಳಿಕೆಗಳನ್ನು ನೀಡುವಾಗ ಮಿತಿ ಮೀರಬಾರದು ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ರಾಹುಲ್‌ ಗಾಂಧಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ಈ ಪ್ರಕರಣವನ್ನು ಯಾರೂ ಸಹ ಗಂಭೀರ ಸ್ವರೂಪದ ಪ್ರಕರಣವೆಂದಾಗಲೀ ಅಥವಾ ನೈತಿಕ ಅಧಃಪತನಕ್ಕೆ ಸಂಬಂಧಿಸಿದ್ದು ಎಂದು ಪರಿಗಣಿಸಿಲ್ಲ. ಇದು ಜಾಮೀನು ನೀಡಬಹುದಾದ ಸ್ವರೂಪದ ಪ್ರಕರಣ’ ಎಂದರು.

ಇದನ್ನು ಓದಿ: ಮೋದಿ ಸರ್‌ನೇಮ್‌ ಕೇಸ್‌: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್‌ ಗಾಂಧಿ

ಜೊತೆಗೆ ‘ರಾಹುಲ್‌ ಗಾಂಧಿ ಅಪರಾಧಿ ಎಂದು ಘೋಷಿಸಲು ನ್ಯಾಯಾಲಯ ಪರಿಗಣಿಸಿದ ಪ್ರಕರಣಗಳು ಅತ್ಯಾಚಾರ, ಕೊಲೆಯಂಥ ಘೋರ ಘಟನೆಗಳಿಗೆ ಸಂಬಂಧಿಸಿದೆ. ಅಂಥ ಪ್ರಕರಣಗಳಲ್ಲೂ ನ್ಯಾಯಾಲಯಗಳು ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಿವೆ. ಒಂದು ವೇಳೆ ರಾಹುಲ್‌ ಗಾಂಧಿಗೆ ಶಿಕ್ಷೆ ಜಾರಿಯಾದರೆ ಅವರು 8 ವರ್ಷ ರಾಜಕೀಯ ಬದುಕಿನಿಂದ ದೂರ ಇರಬೇಕಾಗುತ್ತದೆ. ಇದು ವೈಯಕ್ತಿಕವಾಗಿ ಮತ್ತು ಕ್ಷೇತ್ರದ ಜನರಿಗೆ ತುಂಬಲಾರದ ನಷ್ಟವಾಗಲಿದೆ’ ಎಂದು ವಾದಿಸಿದರು.

ಅಲ್ಲದೆ, ‘ರಾಹುಲ್‌ ಗಾಂಧಿ ಕೋಲಾರದಲ್ಲಿ ಭಾಷಣ ಮಾಡಿದ ಸಮಯದಲ್ಲಿ ಈ ಪ್ರಕರಣ ದಾಖಲಿಸಿರುವ ಪೂರ್ಣೇಶ್‌ ಮೋದಿ ಹಾಜರಿರಲಿಲ್ಲ. ಕೇವಲ ವಾಟ್ಸಾಪ್‌ನಲ್ಲಿ ಬಂದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ರಾಹುಲ್‌ ಗಾಂಧಿ ಪೂರ್ಣೇಶ್‌ ಮೋದಿ ಹೆಸರನ್ನು ಪ್ರಸ್ತಾಪಿಸಿಲ್ಲ. ಒಂದು ವೇಳೆ ವಯನಾಡು ಕ್ಷೇತ್ರಕ್ಕೆ ಉಪಚುನಾವಣೆ ನಡೆದು ಬೇರೆ ವ್ಯಕ್ತಿ ಆಯ್ಕೆಯಾದ ಬಳಿಕ ರಾಹುಲ್‌ ಗಾಂಧಿ ಈ ಪ್ರಕರಣದಲ್ಲಿ ಜಯಗಳಿಸಿದರೆ ಸಮಸ್ಯೆ ಪರಿಹರಿಸಲಾಗದಷ್ಟು ಬಿಗಡಾಯಿಸಲಿದೆ’ ಎಂದು ಅಭಿಷೇಕ್‌ ಮನು ಸಿಂಘ್ವಿ ವಾದಿಸಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌: ‘ಮೋದಿ’ ಮಾನನಷ್ಟ ಕೇಸಿಗೆ ಹೈಕೋರ್ಟ್‌ ತಡೆ

ಬಳಿಕ ನ್ಯಾಯಾಲಯ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್‌ ಕೋರ್ಟ್‌

Follow Us:
Download App:
  • android
  • ios