ರೈತರ ಜೊತೆ ಇಂದು ಮೋದಿ ಸಂವಾದ | ದೇಶಾದ್ಯಂತ 19000 ಸ್ಥಳಗಳಲ್ಲಿ ಕಾರ್ಯಕ್ರಮ ನೇರಪ್ರಸಾರ | 5 ಕೋಟಿ ರೈತರಿಂದ ಸಂವಾದ ಆಲಿಸಲು ಬಿಜೆಪಿಯ ವ್ಯವಸ್ಥೆ
ನವದೆಹಲಿ(ಡಿ.25): ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಸುಮಾರು ಒಂದು ತಿಂಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟಿಸುತ್ತಿರುವ ಬೆನ್ನಲ್ಲೇ 6 ರಾಜ್ಯಗಳ ರೈತರೊಂದಿಗೆ ಪ್ರಧಾನಿ ಮೋದಿ ಶುಕ್ರವಾರ ಸಂವಾದ ನಡೆಸಲಿದ್ದಾರೆ. ಡಿ.25ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 9 ಕೋಟಿ ರೈತರಿಗೆ ಕೇಂದ್ರ ಸರ್ಕಾರ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದು, ಆನ್ಲೈನ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ನಡುವೆ ರೈತರ ಪ್ರತಿಭಟನೆ ಕೇಂದ್ರ ಸರ್ಕಾರದ ಪಾಲಿಗೆ ಭಾರೀ ಸಮಸ್ಯೆಯಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ, ಶುಕ್ರವಾರದ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಕಾಯ್ದೆ ಸಮರ್ಥನೆಯ ವೇದಿಕೆಯಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರಪತಿಗೆ ಕಾಂಗ್ರೆಸ್ ದೂರು
ಈ ಹಿನ್ನೆಲೆಯಲ್ಲಿ ಈ ಸಂವಾದ ಕಾರ್ಯಕ್ರಮವನ್ನು ದೇಶಾದ್ಯಂತ 19000ಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಿ, ಅದರಲ್ಲಿ ಕನಿಷ್ಠ 1 ಕೋಟಿ ರೈತರು ನೇರವಾಗಿ ಭಾಗಿಯಾಗುವಂತೆ ಮತ್ತು 5 ಕೋಟಿ ರೈತರು ಸಂವಾದ ಕಾರ್ಯಕ್ರಮವನ್ನು ಆಲಿಸುವಂತೆ ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಚಿವರು, ಬಿಜೆಪಿ ನಾಯಕರು, ರಾಜ್ಯಗಳಲ್ಲಿನ ಬಿಜೆಪಿ ನಾಯಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಿದ್ದಾರೆ.
ಹಣ ಬಿಡುಗಡೆ: ಕಿಸಾನ್ ಸಮ್ಮಾನ್ ಯೋಜನೆಯ 9 ಕೋಟಿ ರೈತ ಫಲಾನುಭವಿ ಕುಟುಂಬಗಳಿಗೆ 18,000 ಕೋಟಿ ರು. ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿ ಅರ್ಹ ರೈತರಿಗೆ ತಲಾ 2000 ರು.ನಂತೆ ವಾರ್ಷಿಕ 6000 ರು.ಗಳನ್ನು ಸರ್ಕಾರ ವಿತರಿಸುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 25, 2020, 11:20 AM IST