ಕೊರೋನಾ ಆರ್ಥಿಕ ನಷ್ಟ ಭರಿಸಲು ಗಡ್ಕರಿಯ ಸೂಪರ್ ಪ್ಲಾನ್!
ಕೊರೋನಾ ಆರ್ಥಿಕ ನಷ್ಟಭರಿಸಲು ಸಚಿವ ಗಡ್ಕರಿಯ ಸೂಪರ್ ಪ್ಲಾನ್| ಪ್ರತೀ ದಿನ 60 ಕಿ.ಮೀ ಹೆದ್ದಾರಿಯನ್ನು ನಿರ್ಮಾಣ ಮಾಡಿ
ಮುಂಬೈ(ಏ.15): ಕೊರೋನಾ ರಣಕೇಕೆಯಿಂದ ತತ್ತರಿಸಿ ಹೋಗಿರುವ ದೇಶದ ಆರ್ಥಿಕತೆಯ ತ್ವರಿತ ಸುಧಾರಣೆಗಾಗಿ ಪ್ರತೀ ದಿನ 60 ಕಿ.ಮೀ ಹೆದ್ದಾರಿಯನ್ನು ನಿರ್ಮಾಣ ಮಾಡಬೇಕೆಂಬ ಗುರಿಯನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಕಿಕೊಂಡಿದ್ದಾರೆ.
ಈ ಬಗ್ಗೆ ಮಂಗಳವಾರ ಡೆವಲಪರ್ಸ್ ಅಸೋಸಿಯೇಷನ್ ಕ್ರೆಡಾಯ್-ಎಂಸಿಎಚ್ಐ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಸಚಿವ ಗಡ್ಕರಿ ಅವರು, ದೇಶದ ಆರ್ಥಿಕ ಸುಧಾರಣೆಗಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಲಾಕ್ಡೌನ್ನಿಂದ ದೇಶಕ್ಕೆ 8 ಲಕ್ಷ ಕೋಟಿ ರು. ನಷ್ಟ!
ಇದಕ್ಕಾಗಿ ಈ ಹಿಂದೆ ಪ್ರತೀ ದಿನ 30 ಕಿ.ಮೀ ಉದ್ದದ ಹೆದ್ದಾರಿಯನ್ನು ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಈಗಾಗಲೇ ಪೂರೈಸಿದ್ದೇವೆ. ಇದೀಗ, ದಿನಕ್ಕೆ 60 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಮಾಡುವ ಅಗತ್ಯವಿದೆ. ಈ ಮೂಲಕ ರಸ್ತೆ ಯೋಜನೆಗಳನ್ನು 2ರಿಂದ 3 ಪಟ್ಟು ಹೆಚ್ಚು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.