* ಹಾಲಿ ಕೇಂದ್ರ ಸಚಿವ ಅರೆಸ್ಟ್, 20 ವರ್ಷಗಳಲ್ಲಿ ಇದೇ ಮೊದಲು* ಉದ್ಧವ್ಗೆ ಹೊಡೀತಿದ್ದೆ ಎಂದ ಕೇಂದ್ರ ಸಚಿವ ಬಂಧನ* ತಡರಾತ್ರಿ ಕೋರ್ಟ್ನಿಂದ ಜಾಮೀನು
ಮುಂಬೈ(ಆ.25): ‘ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಮಾಹಿತಿ ಇಲ್ಲದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ಆದರೆ ತಡರಾತ್ರಿ ರಾಣೆ ಅವರಿಗೆ ಜಾಮೀನು ಲಭಿಸಿದೆ.
ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವರೊಬ್ಬರ ಬಂಧನ 20 ವರ್ಷದಲ್ಲೇ ಮೊದಲ ಬಾರಿ ನಡೆದಿದ್ದು, ಮಾಜಿ ಮಿತ್ರರಾದ ಬಿಜೆಪಿ ಮತ್ತು ಶಿವಸೇನೆ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೂ ನಾಂದಿ ಹಾಡಿದೆ.
ಮತ್ತೊಂದೆಡೆ ರಾಣೆ ಹೇಳಿಕೆ ಮತ್ತು ಬಂಧನ ವಿರೋಧಿಸಿ ಮುಂಬೈ ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಬಿಜೆಪಿ ಕಚೇರಿಗಳ ಮೇಲೆ ದಾಳಿಗಳೂ ನಡೆದಿವೆ.
ಈ ನಡುವೆ ರಾಣೆ ಅವರ ವಿವಾದಿತ ಹೇಳಿಕೆಯನ್ನು ಪುರಸ್ಕರಿಸುವುದರಿಂದ ರಾಜ್ಯ ಬಿಜೆಪಿ ನಾಯಕರು ಹಿಂದೆ ಸರಿದಿದ್ದರೂ, ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಅನೇಕರು ರಾಣೆ ಬಂಧನವನ್ನು ಉಗ್ರವಾಗಿ ಖಂಡಿಸಿದ್ದಾರೆ. ರಾಣೆಗೆ ಪೂರ್ಣ ಬೆಂಬಲ ಪ್ರಕಟಿಸಿದ್ದಾರೆ. ಇನ್ನೊಂದೆಡೆ ರಾಣೆಗೆ ಜಾಮೀನು ಸಿಕ್ಕ ಬಳಿಕ ಪ್ರತಿಕ್ರಿಯಿಸಿರುವ ಶಿವಸೇನೆ ಮೂಲಗಳು, ‘ರಾಣೆ ವಿರುದ್ಧ ಪ್ರಕರಣ ಮುಂದುವರಿಸುವ ಆಸಕ್ತಿ ಇಲ್ಲ. ಕಾನೂನಿಗಿಂತ ಯಾರೂ ಮಿಗಿಲಲ್ಲ ಎಂದು ಸಾಬೀತುಪಡಿಸುವುದೇ ಬಂಧನದ ಉದ್ದೇಶ ಆಗಿತ್ತು’ ಎಂದಿವೆ.
ಏನಾಯ್ತು?:
ಸೋಮವಾರ ರತ್ನಗಿರಿ ಜಿಲ್ಲೆಯಲ್ಲಿ ಜನಾಶೀರ್ವಾದ ರಾರಯಲಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ‘ಮಹಾರಾಷ್ಟ್ರದ ಮುಖ್ಯಮಂತ್ರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲವೆಂಬುದು ನಾಚಿಕೆಗೇಡಿನ ವಿಷಯ. ಆ.15ರಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಸಿಎಂ ಉದ್ಧವ್ ಠಾಕ್ರೆಗೆ ಸ್ವಾತಂತ್ರ್ಯ ಬಂದ ವರ್ಷ ಖಚಿತವಾಗದೆ ಭಾಷಣದ ಮಧ್ಯದಲ್ಲೇ ತಮ್ಮ ಆಪ್ತರನ್ನು ಕೇಳಿ ಖಚಿತಪಡಿಸಿಕೊಂಡರು. ಒಂದು ವೇಳೆ ನಾನೇನಾದರೂ ಸ್ಥಳದಲ್ಲಿ ಇದ್ದಿದ್ದರೆ ಅವರ ಕಪಾಳಕ್ಕೆ ಬಲವಾಗಿ ಬಿಗಿಯುತ್ತಿದ್ದೆ’ ಎಂದು ವಿವಾದಿತ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿರುದ್ಧ ಸೋಮವಾರವೇ ರಾಜ್ಯದ ಹಲವೆಡೆ ಶಿವಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಅವರ ಬಂಧನಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ನಾಸಿಕ್ನಲ್ಲಿ ರಾಣೆ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ರಾಣೆ ಬಂಧನಕ್ಕೆ ನಾಸಿಕ್ನ ಜಿಲ್ಲಾ ಪೊಲೀಸ್ ವರಿಷ್ಠ ದೀಪಕ್ ಪಾಂಡೆ ಆದೇಶಿಸಿದ್ದರು. ಇದರ ನಡುವೆ, ರಾಣೆ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರೂ ಅದಕ್ಕೆ ಪುರಸ್ಕಾರ ಸಿಗಲಿಲ್ಲ.
ಈ ಹಿನ್ನೆಲೆಯಲ್ಲಿ ಮಂಗಳವಾರ ರಾಣೆ ಅವರು ರತ್ನಗಿರಿ ಜಿಲ್ಲೆಯಲ್ಲಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆಯೇ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಿ ಸಂಗಮೇಶ್ವರ ಠಾಣೆಗೆ ಕರೆದೊಯ್ದರು.
ಬಳಿಕ ರಾತ್ರಿ ಅವರನ್ನು ಮಹಾಡ್ ಕೋರ್ಟ್ಗೆ ಹಾಜರುಪಡಿಸಲಾಯಿತು. ಆಗ ಪೊಲೀಸರು ರಾಣೆ ಅವರ 7 ದಿನದ ಕಸ್ಟಡಿ ಕೇಳಿದರು. ರಾಣೆ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಕೇಳಿದರು. ಕೊನೆಗೆ ಕೋರ್ಟು ಜಾಮೀನು ನೀಡಿತು.
ಹೇಳಿಕೆ ಬಗ್ಗೆ ರಾಣೆ ಸಮರ್ಥನೆ:
ಬಂಧನದ ಮಾಧ್ಯಮಗಳಿಗೆ ರಾಣೆ ಪ್ರತಿಕ್ರಿಯಿಸಿ, ‘ನನಗೆ ಯಾವುದೇ ಪಶ್ಚಾತ್ತಾಪವಿಲ್ಲ’ ಎಂದಿದ್ದಾರೆ.
