ಭಾರೀ ಮಳೆಯಿಂದಾಗಿ ಉತ್ತರಾಖಂಡ್‌ನ ಕೇದಾರನಾಥ ದೇವಸ್ಥಾನದ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 4 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. 16 ಜನ ನಾಪತ್ತೆಯಾಗಿದ್ದಾರೆ.

ಕೇದಾರನಾಥ (ಆ.5): ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಉತ್ತರಾಖಂಡ್‌ನ ಕೇದಾರನಾಥ ದೇವಸ್ಥಾನದ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 4 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. 4ಮೃತದೇಹಗಳು ಪತ್ತೆಯಾಗಿದ್ದು ಇನ್ನು 16 ಜನರು ನಾಪತ್ತೆಯಾಗಿದ್ದಾರೆ. ಇನ್ನು ಇಲ್ಲಿನ ಗೌರಿಕುಂಡ್‌ ಪ್ರದೇಶದಲ್ಲಿನ ಹಲವಾರು ಅಂಗಡಿಗಳು ಕೊಚ್ಚಿ ಹೋಗಿವೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಭಾರೀ ಮಳೆ ಹಾಗೂ ಗುಡ್ಡಗಳಿಂದ ಬೀಳುವ ಬಂಡೆಗಳು ಕಾರ್ಯಾಚರಣೆ ಅಡ್ಡಿಯಾಗುತ್ತಿವೆ. ನೇಪಾಳದ ಕೆಲವರು ಸೇರಿದಂತೆ ನಾಪತ್ತೆಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಭಾರೀ ಮಳೆಗೆ ರಾಜ್ಯದ ಹಲವೆಡೆ ಆರೆಂಜ್‌ ಅಲರ್ಚ್‌ ಘೊಷಿಸಲಾಗಿದೆ.

ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಪಾದಯಾತ್ರೆಯನ್ನು ನಿಲ್ಲಿಸಲಾಗಿದೆ. ಕೇದಾರನಾಥ ದೇಗುಲಕ್ಕೆ ಟ್ರೆಕ್ಕಿಂಗ್ ಮತ್ತು ಅಲ್ಲಿಂದ ಬರುವವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಮೂರು ಅಂಗಡಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಗೌರಿಕುಂಡವು ದೇವಾಲಯದಿಂದ ಸುಮಾರು 16 ಕಿಮೀ ದೂರದಲ್ಲಿದೆ.

ಕೇದಾರನಾಥ ದೇಗುಲದ ಅವರಣದಲ್ಲಿ ಮೊಬೈಲ್‌ ಬ್ಯಾನ್‌: ಫೋಟೋಗ್ರಫಿ, ವಿಡಿಯೋಗ್ರಫಿಗೂ ನಿಷೇಧ

ಭೂಕುಸಿತದಿಂದ ಧ್ವಂಸಗೊಂಡ ಅಂಗಡಿಗಳು ಮತ್ತು ಹೋಟೆಲ್‌ಗಳ ಅವಶೇಷಗಳು ಮಂದಾಕಿನಿ ನದಿಯಲ್ಲಿ ಕುಸಿಯುತ್ತಿರುವುದು ಕಂಡುಬಂದಿದೆ. ಕೆಲವರು ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಇನ್ನು ಕೆಲವರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಎಂದು ನಂಬಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಗಹರ್ವಾರ್ ಅವರು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿರುವಾಗ ನಾಲ್ಕು ಮೃತದೇಹಗಳು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದು ದೇವಭೂಮಿ; ಉತ್ತರಾಖಂಡದ ಈ 10 ದೇವಾಲಯಗಳು ಹಿಂದೂಗಳಿಗೆ ಬಲು ಪವಿತ್ರ

ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ರಾಜ್ಯ ಸಚಿವಾಲಯದ ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಕರೆ ನೀಡಿದರು. ಪ್ರವಾಹ ಭೀತಿ ಎದುರಿಸುತ್ತಿರುವ ಸ್ಥಳಗಳಲ್ಲಿ ಎಚ್ಚರಿಕೆಯನ್ನು ನೀಡುವಂತೆ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನೆಲೆಸಿರುವವರನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಆಡಳಿತವು ಸಾವನ್ನಪ್ಪಿದ, ಕಾಣೆಯಾದ ಸಂತ್ರಸ್ತರ ಹೆಸರನ್ನು ಬಿಡುಗಡೆ ಮಾಡಿದೆ.