ಕೊರೋನಾ ಓಡುತ್ತೆ ಅನ್ನೋ ಭ್ರಮೆ ಬೇಡ, ಲಸಿಕೆ ಹಾಕಿಸ್ಕೊಳ್ಳಿ: ಪಿಎಂ ಮೋದಿ!
* ಪ್ರಧಾನ ಮಂತ್ರಿ ಮೋದಿಯ, ಮನ್ ಕೀ ಬಾತ್ನ 78 ನೇ ಸಂಚಿಕೆ
* ಒಲಂಪಿಲ್ ತಯಾರಿ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ
* ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನೆನಪಿಸಿಕೊಂಡ ಪಿಎಂ ಮೋದಿ
* ಕೊರೋನಾ ಲಸಿಕೆ ಬಗ್ಗೆಯೂ ಜಾಗೃತಿ
ನವದೆಹಲಿ(ಜೂ.27) ಪ್ರಧಾನಿ ನರೇಂದ್ರ ಮೋದಿ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನ 78 ನೇ ಸಂಚಿಕೆ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಒಲಂಪಿಕ್ನಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದ ಭಾರತೀಯ ಯಾರು? ಎಂಬ ಪ್ರಶ್ನೆ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚೆಗಷ್ಟೇ ಕೊರೋನಾದಿಂದ ಮೃತಪಟ್ಟ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರನ್ನು ನೆನಪಿಸಿಕೊಂಡ ಮೋದಿ, ಅವರ ಜೀವನ ಎಲ್ಲರಿಗೂ ಪ್ರೇರಣೆ ಎಂದಿದ್ದಾರೆ.
ಮನ್ ಕೀ ಬಾತ್ನ ಪ್ರಮುಖ ಅಂಶಗಳು
* ಒಲಂಪಿಲ್ ತಯಾರಿ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಮಿಲ್ಕಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 2014ರಲ್ಲಿ ಅವರು ಸೂರತ್ಗೆ ಬಂದಿದ್ದರು. ರಾತ್ರಿಯ ಮ್ಯಾರಾಥಾನ್ಗೆ ಒಟ್ಟಿಗೆ ಚಾಲನೆ ನೀಡಿದ್ದೆವು ಎಂದು ದಿಗ್ಗಜ ಅಥ್ಲೀಟ್ರನ್ನು ನೆನಪಿಸಿಕೊಂಡಿದ್ದಾರೆ.
* ಪ್ರತಿಭೆ, ಸಮರ್ಪಣೆ, ನಿರ್ಣಯ ಮತ್ತು ಕ್ರೀಡಾಸ್ಫೂರ್ತಿ ಎಲ್ಲವೂ ಒಟ್ಟಿಗೆ ಸೇರಿದಾಗ ವ್ಯಕ್ತಿ ಚಾಂಪಿಯನ್ ಆಗುತ್ತಾರೆ. ಟೋಕಿಯೊಗೆ ಹೋಗುವ ನಮ್ಮ ಒಲಿಂಪಿಕ್ ತಂಡವು ಅಂತಹ ಅನೇಕ ಆಟಗಾರರನ್ನು ಸಹ ಒಳಗೊಂಡಿದೆ, ಅವರ ಜೀವನವು ಬಹಳಷ್ಟು ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
* ನಮ್ಮ ದೇಶದಲ್ಲಿ ಚಿಕ್ಕ-ಚಿಕ್ಕ ಪಟ್ಟಣದಿಂದ, ಗ್ರಾಮಗಳಿಂದ ಕ್ರೀಡಾಪಡುಗಳು ಟೋಕಿಯೋ ಒಲಂಪಿಕ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದ ಪಿಎಂ ಮೋದಿ, ಈ ಸಂದರ್ಭದಲ್ಲಿ ಮಹಿಳಾ ಹಾಕಿ ತಂಡದ ಸದಸ್ಯೆ ನೇಹಾ ಘೋಯೆಲ್ ಬಗ್ಗೆ ಮಾತನಾಡಿದರು. ನೇಹಾ ತಾಯಿ, ಸಹೋದರಿ ಸೈಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಾರೆ ಎಂದು ಬಡತನದಿಂದ ಬಂದ ಪ್ರತಿಭೆಯ ಬಗ್ಗೆ ಬಣ್ಣಿಸಿದ್ದಾರೆ.
* ಟೋಕಿಯೊಗೆ ಹೋಗುವ ಪ್ರತಿಯೊಬ್ಬ ಕ್ರೀಡಾಪಟು ತನ್ನ ಬದುಕಿನಲ್ಲಿ ತನ್ನದೇ ಆದ ಹೋರಾಟವನ್ನು ಮಾಡುತ್ತಿರುತ್ತಾರೆ. ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಾರೆ. ನಾವೆಲ್ಲರೂ ಎಲ್ಲಾ ಟ್ವಿಟರ್ನಲ್ಲಿ 'ಚೀರ್ ಫಾರ್ ಇಂಡಿಯಾ' ಹ್ಯಾಷ್ ಟ್ಯಾಗ್(#Cheer4India) ಮೂಲಕ ಟೋಕಿಯೋ ಒಲಂಪಿಕ್ನಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
* ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಿಲ್ಲುಗಾರ ಪ್ರವೀಣ್ ಜಾಧವ್ ಬಗ್ಗೆ ಮಾತನಾಡಿದ ಮೋದಿ ಮಹಾರಾಷ್ಟ್ರದ ಸತಾರಾದ ಪ್ರವೀಣ್ ಜಾಧವ್ ಅತ್ಯುತ್ತಮ ಬಿಲ್ಲುಗಾರರಾಗಿದ್ದಾರೆ. ಅವರ ಪೋಷಕರು ಕೂಲಿ ಕೆಲಸ ಮಾಡುತ್ತಾರೆ ಮತ್ತು ಈಗ ಜಾಧವ್ ಟೋಕಿಯೊದಲ್ಲಿ ಮೊದಲ ಬಾರಿ ಭಾಗವಹಿಸುತ್ತಿದ್ದಾರೆ ಎಂದು ಪರಿಚಯಿಸಿದ್ದಾರೆ.
* ಕೋವಿಡ್ ವಿರುದ್ಧ ನಮ್ಮ ದೇಶದ ಹೋರಾಟ ಜಾರಿಯಲ್ಲಿದೆ. ಕೋವಿಡ್ ಲಸಿಕೆ ಮಹಾಭಿಯಾನ ಯಶಸ್ವಿಯಾಗಿದೆ. ನವ ಭಾರತದ ಶಕ್ತಿ ನೋಡಿ. ಭಾರತದಲ್ಲಿ ತಯಾರಾದ ಲಸಿಕೆ ಈಗಾಗಲೇ ಜನರಿಗೆ ಮುಕ್ತವಾಗಿ ಸಿಗುತ್ತಿದೆ ಎಂದು ಮೋದಿ ಹೇಳಿದರು. ಈ ಹೋರಾಟದಲ್ಲಿ ಭಾರತದ ಹಳ್ಳಿಗಳ ಜನರು, ನಮ್ಮ ಅರಣ್ಯವಾಸಿಗಳು-ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ತಮ್ಮ ಶಕ್ತಿ ಮತ್ತು ತಿಳುವಳಿಕೆಯನ್ನು ಹೇಗೆ ತೋರಿಸಿದರು ಎಂಬುದು ಜಗತ್ತಿಗೆ ಅಧ್ಯಯನದ ವಿಷಯವಾಗಿದೆ ಎಂದಿದ್ದಾರೆ.
* ಮಧ್ಯಪ್ರದೇಶದ ಸತ್ನಾ ನಿವಾಸಿ ರಾಮ್ಲೋಟನ್ ಕುಶ್ವಾಹ ಜಿ ಅವರು , ಅವರು ಬಹಳ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ರಾಮ್ಲೋಟನ್ ಜಿ ತಮ್ಮ ಜಮೀನಿನಲ್ಲಿ ಕಂಟ್ರಿ ಮ್ಯೂಸಿಯಂ ನಿರ್ಮಿಸಿದ್ದಾರೆ. ಈ ವಸ್ತುಸಂಗ್ರಹಾಲಯದಲ್ಲಿ ಅವರು ನೂರಾರು ಔ ಷಧೀಯ ಸಸ್ಯಗಳು ಮತ್ತು ಬೀಜಗಳನ್ನು ಸಂಗ್ರಹಿಸಿದ್ದಾರೆ ಎಂದಿದ್ದಾರೆ.
* ಇದೇ ವೇಳೆ ಲಸಿಕೆ ಅಭಿಯಾನದ ಬಗ್ಗೆ ಮಾತನಾಡಿದ ಪಿಎಂ ಮೋದಿ ವ್ಯಾಕ್ಸಿನ್ ಬಗ್ಗೆ ಯಾವುದೇ ಭಯ ಬೇಡ. ನಾನು, ನನ್ನ ತಾಯಿ ಕೂಡಾ ಲಸಿಕೆ ಪಡೆದಿದ್ದೇವೆ. ನೀವು ಲಸಿಕೆ ಪಡೆಯದಿದ್ದರೆ ನಿಮ್ಮ ಮತ್ತು ಅಕ್ಕಪಕ್ಕದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ತಕ್ಷಣ ಲಸಿಕೆ ಪಡೆಯಿರಿ. ಕೊರೋನಾ ವೈರಸ್ ರೂಪಾಂತರಗೊಳ್ಳುತ್ತಿದೆ. ಲಸಿಕೆ ಪಡೆಯುವುದರಿಂದ ಗಂಭೀರ ಪರಿಣಾಮದಿಂದ ಪಾರಾಗಬಹುದು. ನಾವು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಜೊತೆಗೆ ಲಸಿಕೆ ಪಡೆಯಬೇಕು ಎಂದಿದ್ದಾರೆ.
* ದೇಶದಲ್ಲಿ ನೈಋತ್ಯ ಮುಂಗಾರು ಮಾರುತಗಳು ಆರಂಭವಾಗಿದೆ. ಮಳೆ ನೀರು ಜಮೀನನ್ನು ಸುಧಾರಣೆ ಮಾಡುತ್ತದೆ. ನೀರಿನ ಸಂರಕ್ಷಣೆಯನ್ನು ನಾವು ದೇಶ ಸೇವೆ ಎಂದು ಪರಿಗಣಿಸುತ್ತೇವೆ ಎಂದಿದ್ದಾರೆ. ಇದೇ ವೇಳೆ ಉತ್ತರಾಖಂಡ್ನ ಶಿಕ್ಷಕರ ಮಳೆ ನೀರು ಇಂಗಿಸುವಿಕೆ ಬಗ್ಗೆ ಮೋದಿ ವಿವರಣೆ ನೀಡಿದ್ದಾರೆ. 30 ಸಾವಿರಕ್ಕೂ ಅಧಿಕ ಇಂಗುಗುಂಡಿಗಳನ್ನು ಶಿಕ್ಷಕರು ನಿರ್ಮಿಸಿದ್ದಾರೆ. ಈಗಲೂ ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ನೀರಿನ ಕೊರತೆ ದೂರವಾಗಿದೆ ಎಂದು ಶ್ಲಾಘಿಸಿದ್ದಾರೆ.
* ಭೂಮಿಯಲ್ಲಿರುವ ಪ್ರತಿ ಸಸ್ಯಗಳಲ್ಲೂ ಔಷಧೀಯ ಗುಣ ಇರುತ್ತದೆ. ನೀವು ನಿಮ್ಮ ಅಕ್ಕಪಕ್ಕದ ಔಷಧಿ ಸಸ್ಯಗಳ ಬಗ್ಗೆ ತಿಳಿಯಿರಿ ಮತ್ತು ಅದನ್ನು ಬೇರೆಯವರಿಗೂ ತಿಳಿಸಿ ಎಂದು ಪ್ರಧಾನಿ ಮೋದಿ ಹೇಳಿದರು.
* ಜುಲೈ 1ರಂದು ನಾವು ವೈದ್ಯರ ದಿಚಾರಣೆ ಆಚರಣೆ ಮಾಡಲಾಗುತ್ತದೆ. ವೈದ್ಯರ ಕೆಲಸ ಎಲ್ಲರಿಗೂ ತಿಳಿದಿದೆ. ಜನರ ಜೀವ ಉಳಿಸಲು ವೈದ್ಯರು ನಮ್ಮ ಸೇವೆ ಮಾಡುತ್ತಿದ್ದಾರೆ. ಹೀಗಿರುವಾಗ ನಾವು ವೈದ್ಯರಿಗೆ ಧನ್ಯವಾದ ಸಲ್ಲಿಸೋಣ ಎಂದು ಮನವಿ ಮಾಡಿದರು.