* ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿಯ ಮೇರೆಗೆ ದ್ವನಿವರ್ಧಕ ನಿಲ್ಲಿಸಿದ ಮಸೀದಿ, ಮಂದಿರ* ರಾಮ್ ಜಾನಕಿ ದೇವಸ್ಥಾನದ ಅರ್ಚಕ ಮತ್ತು ಜಾಮಾ ಮಸೀದಿಯ ಇಮಾಮ್ ಪರಸ್ಪರ ಒಪ್ಪಿಗೆ ಸೂಚಿಸಿ ಧ್ವನಿವರ್ಧಕವನ್ನು ತೆಗೆದಿರಿಸಿದ್ದಾರೆ* ಸಮಾಜಕ್ಕೆ ಕೋಮು ಸೌಹಾರ್ದತೆಯ ಸಂದೇಶವನ್ನು ರವಾನಿಸಲು ಮುಂದಾದ ಅರ್ಚಕ, ಇಮಾಮ್

ಲಕ್ನೋ(ಏ.26): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿಯ ಮೇರೆಗೆ ರಾಮ್ ಜಾನಕಿ ದೇವಸ್ಥಾನದ ಅರ್ಚಕ ಮತ್ತು ಜಾಮಾ ಮಸೀದಿಯ ಇಮಾಮ್ ಪರಸ್ಪರ ಒಪ್ಪಿಗೆ ಸೂಚಿಸಿ ಧ್ವನಿವರ್ಧಕವನ್ನು ತೆಗೆದಿರಿಸಿದ್ದಾರೆ. ಈ ಮೂಲಕ ಬುಂದೇಲ್‌ಖಂಡದ ಭೂಮಿ ಝಾನ್ಸಿಯಿಂದ ರಾಜ್ಯ ಮಾತ್ರವಲ್ಲದೆ ಇಡೀ ದೆಶಕ್ಕೇ ಮಹತ್ವದ ಸಂದೇಶವೊಂದನ್ನು ನೀಡಿದೆ. ಹೌದು ದೇವಸ್ಥಾನದ ಅರ್ಚಕ ಶಾಂತಿ ಮೋಹನ್ ದಾಸ್ ಮತ್ತು ಮಸೀದಿಯ ಇಮಾಮ್ ಹಫೀಜ್ ಮೊಹಮ್ಮದ್ ತಾಜ್ ಆಲಂ ಅವರು ಸಮಾಜಕ್ಕೆ ಕೋಮು ಸೌಹಾರ್ದತೆಯ ಸಂದೇಶವನ್ನು ರವಾನಿಸಲು ದಶಕಗಳಷ್ಟು ಹಳೆಯದಾದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಜಂಟಿಯಾಗಿ ನಿರ್ಧರಿಸಿದ್ದೇವೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಝಾನ್ಸಿಯ ಬರಗಾಂವ್ ಪಟ್ಟಣದ ಗಾಂಧಿ ಚೌಕ್‌ನಲ್ಲಿ ರಾಮ ಜಾನಕಿ ಮಂದಿರ ಮತ್ತು ಜಾಮಾ ಮಸೀದಿ ಸಮೀಪದಲ್ಲಿದೆ. ಮಸೀದಿಯಲ್ಲಿ ಐದು ಬಾರಿಯ ಆಜಾನ್ ಸಂಪ್ರದಾಯವು ದಶಕಗಳಿಂದ ನಡೆಯುತ್ತಿದ್ದರೆ, ಬೆಳಿಗ್ಗೆ ಧ್ವನಿವರ್ಧಕಗಳ ಮೂಲಕ ದೇವಾಲಯದಲ್ಲಿ ಆರತಿ ನಡೆಯುತ್ತದೆ. ಶಾಂತಿ ಮೋಹನ್ ದಾಸ್ ಅವರು ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಈಗ ಬೆಳಗ್ಗೆ ಮತ್ತು ಸಂಜೆ ಧ್ವನಿವರ್ಧಕವಿಲ್ಲದೆ ಆರತಿ ಮಾಡಲಾಗುತ್ತಿದೆ ಎಂದರು. ಇದರೊಂದಿಗೆ ಭಜನಾ ಕಾರ್ಯಕ್ರಮವೂ ಶಾಂತಿಯುತವಾಗಿ ನಡೆಯುತ್ತಿದೆ.

ಧ್ವನಿವರ್ಧಕವನ್ನು ಇಳಿಸುವುದು ಇಂದಿನ ಅಗತ್ಯ

ಎರಡೂ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವುದು ಇಂದಿನ ಅಗತ್ಯವಾಗಿದೆ ಎಂದು ಮಸೀದಿಯ ಇಮಾಮ್ ಹಫೀಜ್ ತಾಜ್ ಆಲಂ ಹೇಳಿದ್ದಾರೆ. ನಾವು ಪರಸ್ಪರ ಸಹೋದರತೆಯಿಂದ ಬದುಕುತ್ತಿದ್ದೇವೆ, ಆದ್ದರಿಂದ ಧ್ವನಿವರ್ಧಕ ಅಡ್ಡಿಯಾಗುವುದಿಲ್ಲ. ಈ ಸೌಹಾರ್ದತೆ ಇಡೀ ದೇಶದಲ್ಲಿ ಉಳಿಯಲಿ ಮತ್ತು ಜನರು ಶಾಂತಿಯಿಂದ ಬದುಕಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಚಿಕ್ಕ ಸ್ಪೀಕರ್‌ಗಳಿವೆ, ಅದು ಮಸೀದಿಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತದೆ. ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಗ್ಗೆ ದೇಶದಲ್ಲಿ ಗದ್ದಲ ನಡೆಯುತ್ತಿರುವ ಸಮಯದಲ್ಲಿ ಝಾನ್ಸಿಯ ಎರಡು ಧಾರ್ಮಿಕ ಸ್ಥಳಗಳಿಂದ ಈ ಸಂದೇಶವು ಹೋಗಿದೆ.

ಶಾಂತಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ

ರಾಮ ಜಾನಕಿ ಮಂದಿರ ಮತ್ತು ಸುನ್ನಿ ಜಮಾ ಮಸೀದಿ ಎರಡೂ ನಗರದ ಗಾಂಧಿ ಚೌಕ್ ಪ್ರದೇಶದಲ್ಲಿವೆ ಎಂದು ಎಸ್‌ಡಿಎಂ ಸನ್ಯಾ ಛಾಬ್ರಾ ಹೇಳಿದ್ದಾರೆ. ಇವೆರಡೂ ಒಂದಕ್ಕೊಂದು ಕೆಲವು ಮೀಟರ್ ದೂರದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಶಾಂತಿ ಸಮಿತಿ ಸಭೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.