ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ ಯಾತ್ರೆ ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾಯಿತು. ಮೊದಲ ದಿನವೇ ಸಾವಿರಾರು ಭಕ್ತರು ದಾಂಗುಡಿ ಇಟ್ಟು ಅಯ್ಯಪ್ಪನ ದರ್ಶನ ಪಡೆದರು.

ಪಟ್ಟಣಂತಿಟ್ಟ : ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ ಯಾತ್ರೆ ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾಯಿತು. ಮೊದಲ ದಿನವೇ ಸಾವಿರಾರು ಭಕ್ತರು ದಾಂಗುಡಿ ಇಟ್ಟು ಅಯ್ಯಪ್ಪನ ದರ್ಶನ ಪಡೆದರು.

Add Asianetnews Kannada as a Preferred SourcegooglePreferred

ಸೋಮವಾರ ವೃಚಿಕಂ ಋತುವಿನ ಆರಂಭದ ದಿನವಾದ್ದರಿಂದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಭಾನುವಾರ ಸಂಜೆಯೇ ದೇಗುಲದ ಬಾಗಿಲು ತೆರೆಯಲಾಗಿದ್ದು, ಸೋಮವಾರದಿಂದ 41 ದಿನಗಳ ಮಂಡಲ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಮಂದಿ ಯಾತ್ರೆ ಕೈಗೊಂಡು ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

ಅಕ್ರಮ ವಿರುದ್ಧ ಬಿಜೆಪಿ ಅಭಿಯಾನ

ಶಬರಿಮಲೆ ದೇಗುಲದ ಚಿನ್ನಲೇಪಿತ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಚಿನ್ನದಲ್ಲಿ ಅಕ್ರಮವೆಸಗಿದ ಪ್ರಕರಣದ ಸಂಬಂಧ ಬಿಜೆಪಿ ಸಹಿ ಅಭಿಯಾನ ಕೈಗೊಂಡಿದೆ. 1 ಕೋಟಿ ಅಯ್ಯಪ್ಪ ಭಕ್ತರಿಂದ ಸಹಿ ಸಂಗ್ರಹಿಸಿ, ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಲು ನಿರ್ಧರಿಸಿದೆ. ಈ ಅಭಿಯಾನಕ್ಕೆ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್‌ ಈ ತಿಂಗಳ ಆರಂಭದಲ್ಲಿ ಚಾಲನೆ ನೀಡಿದ್ದರು.

ಚಿನ್ನಕ್ಕೆ ಕನ್ನ ಪ್ರಕರಣ: ಶಬರಿಮಲೆ ವಿಗ್ರಹಗಳ ಕವಚ ಕಳಚಿ ಪರೀಕ್ಷೆ

ಪಟ್ಟಣಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ಕವಚಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ವೈಜ್ಞಾನಿಕ ಪರೀಕ್ಷೆಗಾಗಿ ಕವಚಗಳನ್ನು ಸೋಮವಾರ ಕಳಚಿದ್ದಾರೆ.ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಮಧ್ಯಾಹ್ನ 1.15ಕ್ಕೆ ಕವಚಗಳನ್ನು ಕಳಚಲಾಯಿತು. 3 ಗಂಟೆವರೆಗೂ ಈ ಕಾರ್ಯ ಮುಂದುವರಿಯಿತು. ಆ ಬಳಿಕ ಅವುಗಳನ್ನು ಮತ್ತೊಂದು ಕೋಣೆಗೆ ಸ್ಥಳಾಂತರಿಸಿ, ತೂಕ ಮಾಡಲಾಯಿತು. ನಂತರ ಅವುಗಳ ಮಾದರಿಯನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.