ಬೇಟೆ ವೇಳೆ ಆಕಸ್ಮಿಕವಾಗಿ ಸ್ನೇಹಿತ ಬಲಿ, ನೊಂದ 3 ಸ್ನೇಹಿತರ ಆತ್ಮಹತ್ಯೆ| ಉತ್ತರಾಖಂಡ್‌ನ ತೆಹ್ರಿ ಜಿಲ್ಲೆಯಲ್ಲಿ ಭಯಾನಕ ಘಟನೆ

ನ್ಯೂ ತೆಹ್ರಿ(ಏ.06): ಶಿಕಾರಿಗೆಂದು ಕಾಡಿಗೆ ತೆರಳಿದ ವೇಳೆ ತಮ್ಮ ಸ್ನೇಹಿತ ತಮ್ಮ ಗುಂಡಿಗೆ ಬಲಿಯಾಗಿದ್ದರಿಂದ ನೊಂದ ಇತರೆ ಮೂವರು ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ನ್ಯೂತೆಹ್ರಿ ಜಿಲ್ಲೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಂದಿ ಗ್ರಾಮದ 7 ಯುವಕರು ಶನಿವಾರ ರಾತ್ರಿ ಬೇಟೆಗೆಂದು ಹತ್ತಿರದ ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಗನ್‌ ಹಿಡಿದು ಹೆಜ್ಜೆ ಹಾಕುತ್ತಿದ್ದ ರಾಜೀವ್‌(22) ಎಂಬಾತ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಅಚಾತುರ್ಯವಾಗಿ ಗನ್‌ನ ಟ್ರಿಗರ್‌ ಅದುಮಿದಿದ್ದಾನೆ. ಈ ವೇಳೆ ಬಂದೂಕಿನಿಂದ ಹೊರ ಚಿಮ್ಮಿದ ಗುಂಡು ಸಂತೋಷ್‌ ಎಂಬಾತನಿಗೆ ತಾಗಿ ಆತ ಸಾವನ್ನಪ್ಪಿದ್ದಾನೆ. ಈ ವೇಳೆ ಭಯಭೀತನಾದ ರಾಜೀವ್‌ ಗನ್‌ ಸಮೇತ ಪರಾರಿಯಾಗಿದ್ದಾನೆ. ಆದರೆ ಘಟನೆಗೆ ತಾವೇ ಕಾರಣ ಎಂದು ನೊಂದ ಇತರೆ ಮೂವರು ಸ್ನೇಹಿತರಾದ ಸೋಬನ್‌, ಪಂಕಜ್‌, ಅರ್ಜುನ್‌ ಗ್ರಾಮಕ್ಕೆ ಮರಳಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯ ವಿವರವನ್ನು ರಾಹುಲ್‌ ಮತ್ತು ಸುಮಿತ್‌ ಎಂಬುವರಿಂದ ಪಡೆದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ, ವಿಷ ಸೇವಿಸಿದ ಮೂವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಯತ್ನಿಸಿದ್ದು, ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಪ್ರೇಟ್‌ ತಿಳಿಸಿದ್ದಾರೆ.