ಆತ್ಮಹತ್ಯೆ ಮಾಡಿಕೊಳ್ಳಲು ಜನನಿಬಿಡ ಪ್ರದೇಶದಲ್ಲಿ ಸೇತುವೆ ಹತ್ತಿ ನಿಂತಿದ್ದ 40 ವರ್ಷದ ವ್ಯಕ್ತಿಯೊಬ್ಬ, ಪೋಲೀಸರು ಬಿರಿಯಾನಿ ಕೊಡಿಸುತ್ತೇವೆ ಎನ್ನುತ್ತಿದ್ದಂತೆ ಇಳಿದು ಬಂದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ!

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಜನನಿಬಿಡ ಸೇತುವೆ ಸಂಖ್ಯೆ 4 ರ ಕಬ್ಬಿಣದ ರಚನೆಯ ಮೇಲೆ ಹತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲೀಸರು ಬಿರಿಯಾನಿ ಆಮಿಷ ತೋರಿಸಿ ಕೆಳಗಿಳಿಸಿದ ಘಟನೆ ನಡೆದಿದೆ. 
ಸೋಮವಾರ ಮಧ್ಯಾಹ್ನ 2.40 ರ ಸುಮಾರಿಗೆ 40 ವರ್ಷದ ವ್ಯಕ್ತಿಯೊಬ್ಬರು ಕೋಲ್ಕತ್ತಾದ ಸೇತುವೆಯೊಂದರ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದರಿಂದ ಈ ಪ್ರದೇಶದಲ್ಲಿ ಸುಮಾರು 20 ನಿಮಿಷಗಳ ಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತು. 

Add Asianetnews Kannada as a Preferred SourcegooglePreferred

ನಂತರ ಅಲ್ಲಿಗೆ ಬಂದ ಕರಾಯ ಪೋಲಿಸ್ ಮತ್ತು ಈಸ್ಟ್ ಗಾರ್ಡ್‌ನ ಜಂಟಿ ತಂಡವು ಏನೇ ಹೇಳಿದರೂ ಈತ ಮಾತು ಕೇಳಲಿಲ್ಲ. ಕಡೆಗೆ ಒಳ್ಳೆಯ ರೆಸ್ಟೋರೆಂಟ್‌ನಿಂದ ಬಿರಿಯಾನಿ ತರಿಸಿ ಕೊಡುವುದಾಗಿ ಪೋಲೀಸರು ಹೇಳುತ್ತಿದ್ದಂತೆಯೇ ವ್ಯಕ್ತಿ ಸೇತುವೆ ಕಂಬಿಗಳನ್ನಿಳಿದು ಕೆಳಗ್ಗೆ ಬಂದಿದ್ದಾನೆ.

ಟೈಲ್ಸ್ ವ್ಯಾಪಾರವನ್ನು ನಡೆಸುತ್ತಿದ್ದ ಈತ ಇತ್ತೀಚೆಗೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಎನ್ನಲಾಗಿದೆ. 

ಸೋಮವಾರ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆತ, ಸೇತುವೆ ಬಳಿ ವಾಹನ ನಿಲ್ಲಿಸಿ, ಮಗಳಿಗೆ ತನ್ನ ಫೋನ್ ಬಿದ್ದು ಹೋಗಿದೆ ಹುಡುಕಬೇಕು ಎಂದ. ನಂತರ ಇದ್ದಕ್ಕಿದ್ದಂತೆ ಸೇತುವೆ ಏರತೊಡಗಿದ. ಕಡೆಗೆ ಅದರ ತುದಿ ತಲುಪಿದ ಆತನೇನಾದರೂ ಬಿದ್ದಿದ್ದರೆ, ಕೆಳಗೆ ವಿದ್ಯುತ್ ಕಂಬಿಗಳಿಗೋ ಅಥವಾ ರೈಲಿನ ಟ್ರ್ಯಾಕ್‌ ಮೇಲೋ ಬಿದ್ದು ಸಾಯುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. 

ವಿಷಯ ಹಾಸ್ಯಾಸ್ಪದವೋ, ಗಂಭೀರವೋ- ಬಿರಿಯಾನಿ ಮಹಿಮೆಯಂತೂ ಅಸಾಧಾರಣವೇ ಸರಿ.