* ಕಾಂಗ್ರೆಸ್ ಹೊರತಾದ ಅಭ್ಯರ್ಥಿ ಕಣಕ್ಕಿಳಿಸುವ ತಂತ್ರ?* ರಾಷ್ಟ್ರಪತಿ ಚುನಾವಣೆ ಕಾರ್ಯತಂತ್ರಕ್ಕೆ 15ಕ್ಕೆ ಮಮತಾ ಸಭೆ* ವಿಪಕ್ಷಗಳ ಸಭೆ ಕರೆದ ಟಿಎಂಸಿ ನಾಯಕ
ಕೋಲ್ಕತಾ(ಜೂ.12): ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಜಂಟಿ ಕಾರ್ಯತಂತ್ರವನ್ನು ಸಿದ್ಧಪಡಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೂ.15ರಂದು ವಿಪಕ್ಷ ನಾಯಕರ ಸಭೆ ಕರೆದಿದ್ದಾರೆ. ಈ ಸಂಬಂಧ ಪ್ರತಿಪಕ್ಷಗಳ ನಾಯಕರಿಗೆ ಪತ್ರ ಬರೆದಿರುವ ಅವರು, ದಿಲ್ಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.
‘ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಎಲ್ಲ ಪ್ರಗತಿಪರ ವಿಪಕ್ಷ ನಾಯಕರು ರಾಷ್ಟ್ರಪತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಕಾನ್ಸ್ಟಿಟ್ಯುಶನ್ ಕ್ಲಬ್ನಲ್ಲಿ ಜೂ. 15 ರಂದು ಮಧ್ಯಾಹ್ನ 3 ಗಂಟೆಗೆ ಸಭೆ ಸೇರಬೇಕಾಗಿ ಕೋರಲಾಗಿದೆ’ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ.
ಆದರೆ, ಇತ್ತೀಚೆಗೆ ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ವಿಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸಲು ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯೋಜಿಸಿದ್ದರು. ಇದರ ನಡುವೆಯೇ, ಕಾಂಗ್ರೆಸ್ ಜತೆ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿರುವ ಅವರು ಪ್ರತ್ಯೇಕ ಸಭೆ ಆಯೋಜಿಸಿರುವ ಕಾರಣ ವಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಯಶ ಕಾಣಲಿವೆಯೇ ಎಂಬ ಅನುಮಾನ ಮೂಡಿದೆ.
ಇದಕ್ಕೆ ತಕ್ಕುದಾಗಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು, ‘ಮಮತಾರ ಪ್ರತ್ಯೇಕ ಸಭೆ ವಿಪಕ್ಷಗಳಲ್ಲಿ ಒಡಕು ಮೂಡಿಸುತ್ತದೆ’ ಎಂದು ಆಕ್ಷೇಪಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯು ಜು.18 ರಂದು ನಡೆಯಲಿದ್ದು, ಶಾಸಕರು ಹಾಗೂ ಸಂಸದರು ಸೇರಿದಂತೆ 4,809 ಸದಸ್ಯರನ್ನೊಳಗೊಂಡ ಜನಪ್ರತಿನಿಧಿಗಳ ಸಮೂಹವು ರಾಷ್ಟ್ರಪತಿಯವರನ್ನು ಚುನಾಯಿಸಲಿದೆ.
