ನಾಲ್ಕು ಸಾವಿರ ಕೊಟ್ರೆ ಕ್ವಾರಂಟೈನ್ ಆಗದೇ ಸರ್ಟಿಫಿಕೇಟ್: ಇಂಜಿನಿಯರ್ ಸೇರಿ 3 ಅರೆಸ್ಟ್!
ಕೊರೋನಾ ತಡೆಯಲು ಲಸಿಕೆ ಅಭಿಯಾನ| ಲಸಿಕೆ ಬಂದಿದ್ದರೂ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ| ಕ್ವಾರಂಟೈನ್ ಕೂಡಾ ಅಗತ್ಯ| ವಿಜದೇಶದಿಂದ ಬರುತ್ತಿದ್ದವರಿಗೆ ಕ್ವಾರಂಟೈನ್ ಮಾಡದೇ ಸರ್ಟಿಫಿಕೇಟ್ ನೀಡುತ್ತಿದ್ದ ಜಾಲ ಬೇಧಿಸಿದ ಪೊಲೀಸರು
ಮುಂಬೈ(ಜ.17): ಕೊರೋನಾ ವೈರಸ್ ಮಹಾಮಾರಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭಗೊಂಡಿದೆ. ಹೀಗಿದ್ದರೂ ಸುರಕ್ಷತೆ ದೃಷ್ಟಿಯಿಂದ ಕ್ವಾರಂಟೈನ್ ಮಾರ್ಗಸೂಚಿ ಹಾಗೂ ನಿಯಮಗಳ ಪಾಲನೆ ಅತೀ ಅಗತ್ಯ. ಹೀಗಿರುವಾಗಲೇ ಪೊಲೀಸರು ಶುಕ್ರವಾರದಂದು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಬಹುದೊಡ್ಡ ಅಕ್ರಮ ಜಾಲವನ್ನು ಬಯಲಿಗೆಳೆದಿದ್ದಾರೆ. ವಾಸ್ತವವಾಗಿ ಇಲ್ಲಿಗಾಗಮಿಸುತ್ತಿದ್ದ ಪ್ರತಿಯೊಬ್ಬ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಸಾಂಸ್ಥಿಕ ಕ್ವಾರಂಟೈನ್ ತಪ್ಪಿಸಲು ಬಹುದೊಡ್ಡ ವಸೂಲಿ ನಡೆಯುತ್ತಿತ್ತು.
ಪೊಲೀಸರು ಈ ಪ್ರಕರಣ ಸಂಬಂಧ ಓರ್ವ 35 ವರ್ಷದ ಸಬ್ ಇಂಜಿನಿಯರ್ ಹಾಗೂ ಅವರ ಇಬ್ಬರು ಜೊತೆಗಾರರನ್ನು ಬಂಧಿಸಿದ್ದಾರೆ. ಇದರಲ್ಲಿ ಅವರ ಬಹುದೊಡ್ಡ ಕೈವಾಡವಿತ್ತು ಎನ್ನಲಾಗಿದೆ. ಪೊಲೀಸರು ಆರೋಪಿ ಸಬ್ ಇಂಜಿನಿಯರ್ ದಿನೇಶ್ ಗಾವಂಡೆ ಬಳಿ ಇದ್ದ ಬ್ಯಾಗ್ ವಶಕ್ಕೆ ಪಡೆದಿದ್ದು, ಇದರಲ್ಲಿ ಸೌದಿ ಅರೇಬಿಯಾದ ಕರೆನ್ಸಿ, ಮೂವತ್ತೈದು ಲಕ್ಷ ರೂಪಾಯಿ ನಗದು, ಇನ್ನೂರು ಸೌದಿ ರಿಯಲ್, ಹೋಂ ಕ್ವಾರಂಟೈನ್ನ ನಕಲಿ ರಬ್ಬರ್ ಸ್ಟಾಂಪ್, ಕೆಲ ಲೆಟರ್ ಹೆಡ್ ಹಾಗೂ ವೈದ್ಯರ ಸಹಿಯೊಂದಿಗೆ ಅರೆಸ್ಟ್ ಮಾಡಿದ್ದಾರೆ.
ಇಂಜಿನಿಯರ್ ಸಿಕ್ಕಾಕೊಂಡಿದ್ದು ಹೀಗೆ
ದಿನೇಶ್ ಗವಾಂಡೆ ಶೌಚಾಲಯಕ್ಕೆ ತೆರಳಿ ಸುಮಾರು 5.50ಕ್ಕೆ ಹೌಸ್ ಕೀಪಿಂಗ್ನ ಮಹಿಳೆಯೊಬ್ಬಳನ್ನು ದೂಡಿ ಬ್ಯಾಗ್ ಹಿಡಿದು ಹೊರಕ್ಕೆ ಧಾವಿಸಿದಾಗ ಆತನ ಮೇಲೆ ಅನುಮಾಣ ಮೂಡಿದೆ. ಇದಾದ ಬಳಿಕ ಮಹಿಳೆ CISF ಹಾಗೂ MIAL ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಆತ ಎಲ್ಲಾ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.
ನಾಲ್ಕು ಸಾವಿರ ನೀಡಿ ಸಾಂಸ್ಥಿಕ ಕ್ವಾರಂಟೈನ್ ಸ್ಕಿಪ್
ಪ್ರತಯಾಣಿಕರ ಬಳಿನ ಅಧಿಕಾರಿಗಳು ವಿಚಾರಿಸಿದಾಗ ಪ್ರತಿಯೊಬ್ಬರ ಬಳಿ ನಾಲ್ಕು ಸಾವಿರ ಪಡೆದುಕೊಂಡು ಸಾಂಸ್ಥಿಕ ಕ್ವಾರಂಟೈನ್ನಿಂದ ತಪ್ಪಿಸಿಕೊಂಡಿದ್ದಾರೆಂಬ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ಅನೇಕ ಜೀವಗಳನ್ನು ಆರೋಪಿಗಳು ಅಪಾಯಕ್ಕೆ ದೂಡುತ್ತಿದ್ದರು.