ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮೊಂದಿಗೆ ಸೇರಿಕೊಂಡ ಒಬ್ಬ ಶಾಸಕರೂ ಸೋತರೆ ರಾಜಕೀಯ ತ್ಯಜಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. 

ಮುಂಬೈ(ಜು.16): ಮುಂಬೈನಲ್ಲಿ ನೂತನ ಸರ್ಕಾರ ರಚನೆಯಾದರೂ ವಾಗ್ದಾಳಿ ಮಾತ್ರ ಇನ್ನೂ ನಿಂತಿಲ್ಲ. ಸದ್ಯ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಉದ್ಧವ್ ಬಣದ ವಿರುದ್ಧ ಕಿಡಿ ಕಾರಿದ್ದಾರೆ. ಇದೇ ವೇಳೆ ಉದ್ಧವ್‌ ಠಾಕ್ರೆಗೆ ಸವಾಲನ್ನೂ ಎಸೆದಿದ್ದಾರೆ. 

Add Asianetnews Kannada as a Preferred SourcegooglePreferred

"ಈ ಎಲ್ಲಾ 50 ಶಾಸಕರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬುದು ನನಗೆ ಖಚಿತವಾಗಿದೆ... ಅವರಲ್ಲಿ ಯಾರಾದರೂ ಸೋತರೆ ನಾನು ರಾಜಕೀಯವನ್ನು ತ್ಯಜಿಸುತ್ತೇನೆ" ಎಂದು ಶಿಂಧೆ ತಮ್ಮ ಬೆಂಬಲಿಗರಲ್ಲಿ ಒಬ್ಬರಾದ ಶಾಸಕ ಅಬ್ದುಲ್ ಸತ್ತಾರ್ ಅವರ ರ್ಯಾಲಿಯನ್ನುದ್ದೇಶಿಸಿ ಹೇಳಿದರು.

ಮುಂದಿನ ರಾಜ್ಯ ಚುನಾವಣೆಯಲ್ಲಿ ತಮ್ಮ ಶಿವಸೇನೆ ಮತ್ತು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷ ಸೇರಿ 200 ಸ್ಥಾನಗಳನ್ನು ಪಡೆಯಲಿದೆ - ಇಲ್ಲವೇ ರಾಜಕೀಯ ತ್ಯಜಿಸುವುದಾಗಿ ಪುನರುಚ್ಚರಿಸಿದರು. ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಪತನಕ್ಕೆ ಕಾರಣವಾದ ಇತ್ತೀಚಿನ ನಾಟಕೀಯ ದಂಗೆಯನ್ನು ಉಲ್ಲೇಖಿಸಿ, ಶಿಂಧೆ ಅವರು ಅದರ ಸಂಭವನೀಯ ಪರಿಣಾಮಗಳ ಬಗ್ಗೆ ಚಿಂತಿತರಾಗಿದ್ದೆ ಎಂದು ಒಪ್ಪಿಕೊಂಡರು.

"ಇದೆಲ್ಲ ನಡೆಯುತ್ತಿರುವಾಗ, ಆರಂಭದಲ್ಲಿ ಸುಮಾರು 30 ಶಾಸಕರು, ನಂತರ 50 ಶಾಸಕರು ಇದ್ದರು.. ಅವರೆಲ್ಲರೂ ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಬೆಂಬಲಿಸಿದರು. ಆದರೆ ನಾನು ಚಿಂತಿತನಾಗಿದ್ದೆ, ಏಕೆಂದರೆ ಅವರು ತಮ್ಮ ಇಡೀ ರಾಜಕೀಯ ಜೀವನವನ್ನು ನನ್ನೊಂದಿಗೆ ಕಳೆದಿದ್ದರಿಂದ ಅವರಿಗೆ ಏನಾಗುತ್ತದೆ ಎಂಬ ಆತಂಕ ಇತ್ತು. ಅವರ ಜೀವನ ಪಣದಲ್ಲಿತ್ತು ಎಂದಿದ್ದಾರೆ.

ತಮ್ಮ ಗುಂಪಿಗೆ ನಾಯಿ, ಹಂದಿಗಳ ಗುಂಪು, ಶವ ಎಂದು ಶಿವಸೇನೆಯ ವಿವಿಧ ನಾಯಕರು ಹಣೆಪಟ್ಟಿ ಕಟ್ಟಿದ್ದನ್ನು ಸ್ಮರಿಸಿದ ಶಿಂಧೆ, ಯಾವುದೇ ಶಾಸಕರನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದರು. ಅಲ್ಲದೇ ತಮ್ಮ ವಿರುದ್ಧ ಆರೋಪ ಮಾಡಿದವರು ಅವರು ಹಿಂದುತ್ವ ಮತ್ತು ರಾಜ್ಯದ ವಿರೋಧಿಗಳು ಎಂದು ಹೇಳಿದರು.

ಶಾಸಕರು ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರಿಂದ ಸ್ಫೂರ್ತಿ ಪಡೆದಿದ್ದಾರೆ, ಅವರು ಯಾವಾಗಲೂ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ರಾಜಕೀಯ ಶತ್ರುಗಳೆಂದು ಪರಿಗಣಿಸಿದ್ದಾರೆ ಮತ್ತು ಎರಡೂವರೆ ವರ್ಷಗಳ ಎಂವಿಎ ಅಧಿಕಾರಾವಧಿಯಲ್ಲಿ ಉಸಿರುಗಟ್ಟಿತ್ತು.