ಲವ್ ಜಿಹಾದ್ ವಿರುದ್ಧ ಇದೀಗ ಮಧ್ಯಪ್ರದೇಶದಿಂದಲೂ ಕಾಯ್ದೆ| ಪ್ರೀತಿ ಹೆಸರಲ್ಲಿ ಜಿಹಾದ್ಗೆ ಅವಕಾಶವಿಲ್ಲ: ಸಿಎಂ
ಭೋಪಾಲ್(ನ.04): ಉತ್ತರಪ್ರದೇಶ, ಹರಾರಯಣ ಬಳಿಕ ಇದೀಗ ಮಧ್ಯಪ್ರದೇಶದಲ್ಲಿನ ಬಿಜೆಪಿ ಸರ್ಕಾರ ಕೂಡ ‘ಲವ್ ಜಿಹಾದ್’ ವಿರುದ್ಧ ಕಾನೂನು ಜಾರಿಗೊಳಿಸುವುದಾಗಿ ಘೋಷಿಸಿದೆ.
ಕೇವಲ ಮದುವೆಗಾಗಿ ಮತಾಂತರ ಆಗುವುದು ಅಕ್ರಮ ಎಂದು ಅಲಹಾಬಾದ್ ಹೈಕೋರ್ಟ್ ಮೂರು ದಿನಗಳ ಹಿಂದಷ್ಟೇ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತನಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್, ಪ್ರೀತಿಯ ಹೆಸರಿನಲ್ಲಿ ಜಿಹಾದ್ಗೆ ಅವಕಾಶವಿಲ್ಲ. ಯಾರೇ ಆಗಲಿ ಇಂತಹ ಅಭ್ಯಾಸದಲ್ಲಿ ತೊಡಗಿದ್ದರೆ, ತಕ್ಕ ಪಾಠ ಕಲಿಸಲಾಗುವುದು. ಇದಕ್ಕಾಗಿ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.
ಉತ್ತರಪ್ರದೇಶ ಹಾಗೂ ಹರಾರಯಣ ಸರ್ಕಾರಗಳು ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರುವುದಾಗಿ ಕೆಲ ದಿನಗಳ ಹಿಂದಷ್ಟೇ ಘೋಷಿಸಿದ್ದವು. ಬಿಜೆಪಿ ಆಳ್ವಿಕೆಯ ಇನ್ನಿತರೆ ರಾಜ್ಯಗಳೂ ಇದೇ ರೀತಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರೀತಿಯ ನಾಟಕವಾಡಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿದ ಘಟನೆಗಳು ಕೇರಳದಿಂದ ಉತ್ತರ ಭಾರತದವರೆಗೂ ವಿವಿಧ ರಾಜ್ಯಗಳಲ್ಲಿ ವರದಿಯಾಗಿದ್ದವು. ಇದನ್ನು ಹಿಂದು ಸಂಘಟನೆಗಳು ‘ಲವ್ ಜಿಹಾದ್’ ಎಂದು ಕರೆದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕೇರಳದಲ್ಲಿ ಹಿಂದು, ಕ್ರೈಸ್ತ ಯುವತಿಯರನ್ನು ಪ್ರೀತಿಸಿ, ಮತಾಂತರಗೊಳಿಸಿ ವಿವಾಹವಾಗಿ ಭಯೋತ್ಪಾದನೆಗೆ ದೂಡಿದ ಪ್ರಕರಣಗಳೂ ಬೆಳಕಿಗೆ ಬಂದಿದ್ದವು.
