ಕೇಂದ್ರದ ಎಫ್‌ಸಿಆರ್‌ಎ ತಿದ್ದುಪಡಿ ವಿಧೇಯಕದ ಹಿನ್ನೆಲೆಯಲ್ಲಿ, ದೇವಸ್ಥಾನಗಳಲ್ಲಿರುವ ಚಿನ್ನವನ್ನು ಜನರ ಸೇವೆಗೆ ಬಳಸಬೇಕು ಎಂದು ಕೇರಳದ ಫಾದರ್ ಪೌಲ್ ಥಲೈಕಾಡ್ ಹೇಳಿದ್ದಾರೆ. ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುವಂತೆ ದೇಗುಲದ ಸಂಪತ್ತನ್ನೂ ಬಳಸಬೇಕು ಎಂಬ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.

ದೇವಸ್ಥಾನದ ಚಿನ್ನ ಜನಸೇವೆಗೆ ಬಳಕೆಯಾಗಲಿ ಎಂದ ಕೇರಳ ಚರ್ಚ್ ಫಾದರ್:

ಕೊಚ್ಚಿ: ವಿದೇಶಿ ದೇಣಿಗೆ(ನಿಯಂತ್ರಣ)ಗೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಎಫ್‌ಸಿಆರ್‌ಎ (ತಿದ್ದುಪಡಿ) ವಿಧೇಯಕಕ್ಕೆ ಕೇರಳದ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಪೌಲ್ ಥಲೈಕಾಡ್ ತೀವ್ರ ಕಿಡಿಕಾರಿದ್ದಾರೆ. ನಾವು ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುತ್ತೇವೆಯೇ ಹೊರತು ಕೂಡಿಡುವುದಿಲ್ಲ. ದೇವಸ್ಥಾನ ಗಳಲ್ಲಿರುವ ಚಿನ್ನವನ್ನು ಲಾಕರ್‌ನಲ್ಲಿಡುವ ಬದಲು ಜನ ಸೇವೆಗಾಗಿ ಬಳಸಬೇಕು ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಫಾದರ್ ಪೌಲ್ ಅವರ ಈ ಹೇಳಿಕೆ ಇದೀಗ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫಾದರ್ ಹೇಳಿದ್ದೇನು?: ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚರ್ಚ್‌ಗಳಿಗೆ ಹರಿದು ಬರುವ ಹಣವನ್ನು ನಾವು ಕೂಡಿಡುವುದಿಲ್ಲ, ಬದಲಾಗಿ ಜನ ಸೇವೆಗಾಗಿ ಬಳಸುತ್ತೇವೆ. ಸಾಯಿಬಾಬಾ ಮತ್ತು ಮಾತಾ ಅಮೃತಾನಂದಮಯಿಯಂಥ ಧಾರ್ಮಿಕ ಚಳವಳಿಗಳು ಕೂಡ ಇದೇ ರೀತಿಯ ಸಾರ್ವಜನಿಕ ಸೇವೆಯ ಧ್ಯೇಯ ಹೊಂದಿವೆ. ಅದೇ ರೀತಿ ದೇವಸ್ಥಾನಗಳಲ್ಲಿರುವ ಚಿನ್ನ ಜನ ಕಲ್ಯಾಣಕ್ಕಾಗಿ ಬಳಕೆಯಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಂಪುಕೋಟೆ, ಸಂಸತ್ ಟಾರ್ಗೆಟ್: ಆಟಿಕೆ ಕಾರಿಗೆ ಐಇಡಿ ಜೋಡಿಸುತ್ತಿದ್ದಾಗಲೇ ಶಂಕಿತರು ಅಂದರ್

ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಕೆಲ ದೇವಸ್ಥಾನಗಳಲ್ಲಿ ಸಂಪತ್ತಿನ ಸಂಗ್ರಹ ಹಾಗೂ ಹಲವು ಕ್ರಿಶ್ಚಿಯನ್ ಸಂಸ್ಥೆಗಳ ಸೇವಾ ಕಾರ್ಯಗಳ ನಡುವೆ ತುಲನೆ ಮಾಡಿ ನಾನು ಈ ಹೇಳಿಕೆ ನೀಡಿದ್ದೇನಷ್ಟೆ. ಹಿಂದಿನಿಂದಲೂ ಚರ್ಚ್‌ಗಳು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ. ಇದು ಸರ್ವ ಧರ್ಮೀಯರು, ಭಾರತೀಯರಿಗಾಗಿ ಮಾಡುವ ಸೇವೆ. ಮಾನವಕುಲದ ಕಲ್ಯಾಣವೇ ಕೆಲಸ ದೇವರ ಕೆಲಸ ಎಂಬುದು ಎಲ್ಲಾ ಧರ್ಮಗಳ ಸಾರ್ವಕಾಲಿಕ ಆಧ್ಯಾತ್ಮಿಕ ತತ್ವವಾಗಿದೆ. ದೇವಸ್ಥಾನಗಳಾಗಲಿ, ಚಚ್ ೯ಗಳಾಗಲಿ ಸಂಪತ್ತು ಹೊಂದಿವೆಯೇ, ಇಲ್ಲವೇ ಎಂಬುದಕ್ಕಿಂತ ಆ ಸಂಪತ್ತನ್ನು ಯಾವ ರೀತಿ ಸಮಾಜದ ಒಳಿತಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ ಎಂಬುದು ಮುಖ್ಯ. ನಮ್ಮದು ಜನಸೇವೆಯೇ ಜನಾರ್ದನ ಸೇವೆ ಎಂಬುದು ಧ್ಯೇಯ ಎಂದಿದ್ದಾರೆ.

ಫಾದರ್ ಪೌಲ್ ಹೇಳಿಕೆಗೆ ಹಿಂದೂ ಸಂಘಟನೆಗಳ ಕೆಂಪುಗಣ್ಣು

ಫಾದರ್ ಅವರ ಈ ಹೇಳಿಕೆಗೆ ಹಿಂದೂ ಐಕ್ಯ ವೇದಿಕೆ ಸೇರಿ ಹಲವು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೇವಸ್ಥಾನದ ಆಸ್ತಿ ಭಕ್ತರು ನೀಡಿದ್ದೇ ಹೊರತು ಬಡವರ ಫೋಟೋ ತೋರಿಸಿ ವಿದೇಶದಿಂದ ಸ್ಮಗ್ಲಿಂಗ್ ಮಾಡಿದ್ದಲ್ಲ ಎಂದು ಆರೋಪಿಸಿದೆ. ಕೆಲ ಹಿಂದೂ ಸಂಘಟನೆಗಳು ಕ್ರಿಶ್ಚಿಯನ್ ತೀವ್ರಗಾಮಿಗಳು ಮತ್ತು ಜಿಹಾದಿಗಳು ದೇವಸ್ಥಾನದ ಆಸ್ತಿ ಮೇಲೆ ಕಣ್ಣುಹಾಕುತ್ತಿದ್ದಾರೆ ಎಂದೂ ಆರೋಪಿಸಿವೆ.

ಇದನ್ನೂ ಓದಿ: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ