'ಲಕ್ಷದ್ವೀಪದ ಹೈಕೋರ್ಟ್ ವ್ಯಾಪ್ತಿ ಕರ್ನಾಟಕಕ್ಕೆ ಸ್ಥಳಾಂತರ ಪ್ರಸ್ತಾವ ಸುಳ್ಳು ಸುದ್ದಿ!'
* ಲಕ್ಷದ್ವೀಪದ ಹೈಕೋರ್ಟ್ ವ್ಯಾಪ್ತಿ ಕರ್ನಾಟಕಕ್ಕೆ ಸ್ಥಳಾಂತರ ಇಲ್ಲ
* ಹಲವು ವಿವಾದಾತ್ಮಕ ನಿರ್ಧಾರಗಳಿಂದ ಸುದ್ದಿಯಲ್ಲಿರುವ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ
* ಕಾನೂನು ಅಧಿಕಾರಿ ಪ್ರದೇಶವನ್ನು ಸ್ಥಳಾಂತರಿಸುವಂತಹ ಯಾವುದೇ ಪ್ರಸ್ತಾಪ ಸುಳ್ಳು ಎಂದ ಕಲೆಕ್ಟರ್
ಲಕ್ಷದ್ವೀಪ(ಜೂ.21): ಇತ್ತೀಚೆಗೆ ಹಲವು ವಿವಾದಾತ್ಮಕ ನಿರ್ಧಾರಗಳಿಂದ ಸುದ್ದಿಯಲ್ಲಿರುವ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ಲ ಖೋಡಾ ಅವರು, ಲಕ್ಷದ್ವೀಪದ ಹೈಕೋರ್ಟ್ ವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಪ್ರಸ್ತಾಪ ಇರಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಲಕ್ಷದ್ವೀಪದ ಸ್ಥಳೀಯ ರಾಜಕೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರೀ ವಿವಾದ ಹುಟ್ಟಿಕೊಂಡಿತ್ತು. ಆದರೀಗ ಈ ಬಗ್ಗೆ ಸ್ಪಷ್ಟನೆ ನೀಡುರುವ ಕಲೆಕ್ಟರ್ ಆಸ್ಕರ್ ಅಲಿ ಈ ಸುದ್ದಿ ನಿರಾಧಾರ ಹಾಗೂ ಸುಳ್ಳು ಎಂದಿದ್ದಾರೆ.
ಇಂತಹ ಯಾವುದೇ ಪ್ರಸ್ತಾಪವಿಲ್ಲ:
ಈ ಬಗ್ಗೆ ಮಾತನಾಡಿರುವ ಕಲೆಕ್ಟರ್ ಅಲಿ ಅವರು ಕಾನೂನು ಅಧಿಕಾರಿ ಪ್ರದೇಶವನ್ನು ಸ್ಥಳಾಂತರಿಸುವಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಹೀಗಾಗಿ ಈ ಬಗ್ಗೆ ಹರಿದಾಡುತ್ತಿರುವ ಈ ವರದಿಗಳು ಆಧಾರರಹಿತ ಮತ್ತು ಸುಳ್ಳು ಎಂದಿದ್ದಾರೆ.
ಏನಿದು ವಿವಾದ?
ಲಕ್ಷದ್ವೀಪವು ಕೇರಳಕ್ಕೆ ಕೇವಲ 400 ಕಿ.ಮೀ. ದೂರದಲ್ಲಿದೆ. ಇಲ್ಲಿನ ಭಾಷೆ ಕೂಡ ಮಲಯಾಳಿ. ಹೀಗಾಗಿ ಕೇರಳ ಹೈಕೋರ್ಟ್ ವ್ಯಾಪ್ತಿಗೆ ಇದು ಒಳಪಟ್ಟಿದೆ. ಆದರೆ ಇತ್ತೀಚೆಗೆ ಖೋಡಾ ಅವರು ಲಕ್ಷದ್ವೀಪದಲ್ಲಿ ಕೆಲವು ಕಠಿಣ ಕ್ರಮ ಕೈಗೊಂಡಿದ್ದಾರೆ. ಅವು ಗೂಂಡಾ ಕಾಯ್ದೆ ಜಾರಿ, ರಸ್ತೆ ಅಗಲೀಕರಣಕ್ಕೆ ಮೀನುಗಾರರ ಗುಡಿಸಲು ಧ್ವಂಸ, ಕೋವಿಡ್ ನಿಯಮಗಳ ಜಾರಿ- ಇತ್ಯಾದಿ. ಇನ್ನು ನಟಿಯೊಬ್ಬಳ ಮೇಲೆ ದೇಶದ್ರೋಹ ಕೇಸು ಹಾಕಿದ್ದೂ ವಿವಾದಕ್ಕೀಡಾಗಿದೆ.
ಈ ವಿಚಾರಗಳಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ಗೆ 23 ದಾವೆಗಳನ್ನು ಹೂಡಲಾಗಿದೆ. ಇದು ಖೋಡಾ ಅವರಿಗೆ ತಲೆನೋವಾಗಿ ಪರಿಣಮಿಸಿದೆ.