ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?
* ಹಿಂದೆ ದೆಹಲಿ ಪ್ರತಿಭಟನೆಯಲ್ಲೂ ಖಲಿಸ್ತಾನಿಗಳು ಭಾಗಿಯಾಗಿದ್ದ ಆರೋಪ
* ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?
* ಖಲಿಸ್ತಾನಿ ಬಂಡುಕೋರ ಭಿಂದ್ರನ್ವಾಲೆ ಚಿತ್ರದ ಟೀಶರ್ಟ್ ಧರಿಸಿದ ವ್ಯಕ್ತಿಗಳು ಪ್ರತಿಭಟನೆಯಲ್ಲಿ ಪ್ರತ್ಯಕ್ಷ
ಲಖೀಂಪುರ(ಅ.07): ಉತ್ತರ ಪ್ರದೇಶದ(Uttar Pradesh) ಲಖೀಂಪುರದಲ್ಲಿ(lakhimpur) ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆಯೇ ಎಂಬ ಗುಮಾನಿ ಉಂಟಾಗಿದೆ. ಪ್ರತ್ಯೇಕ ಖಲಿಸ್ತಾನ(Khalistani) ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನಿ ಉಗ್ರರ ಗುಂಪುಗಳು ಈ ಹೋರಾಟದಲ್ಲಿ ಸೇರಿಕೊಂಡಿವೆ ಎಂಬ ಆರೋಪಗಳು ಕೇಳಿಬಂದಿವೆ.
ಇದಕ್ಕೆ ಪುಷ್ಟಿನೀಡುವಂತೆ ಖಲಿಸ್ತಾನಿ ಹೋರಾಟಗಾರ ಭಿಂದ್ರನ್ವಾಲೆಯ ಚಿತ್ರ ಇರುವ ಟೀಶರ್ಟ್ಗಳನ್ನು ಧರಿಸಿ ಕೆಲವರು ಹೋರಾಟದಲ್ಲಿ ಭಾಗಿಯಾಗಿರುವುದು ವಿಡಿಯೋಗಳು ಹಾಗೂ ಫೋಟೋಗಳಲ್ಲಿ ಸೆರೆಯಾಗಿದೆ. ‘ಖಲಿಸ್ತಾನಿಗಳು ಹೋರಾಟದಲ್ಲಿದ್ದಾರೆ’ ಎಂದು ಬಿಜೆಪಿ ಸಂಸದ ವಿಜಯಪಾಲ್ ಸಿಂಗ್ ತೋಮರ್ ಕೂಡ ಆರೋಪಿಸಿದ್ದಾರೆ. ಇದೇ ವೇಳೆ, ಭಿಂದ್ರನ್ವಾಲೆಯನ್ನು ರೈತ ಹೋರಾಟದ ನಾಯಕತ್ವ ವಹಿಸಿರುವ ರಾಕೇಶ್ ಟಿಕಾಯತ್ ಸಮರ್ಥಿಸಿಕೊಂಡಿರುವುದು ವಿವಾದಕ್ಕೆ ತುಪ್ಪ ಸುರಿದಿದೆ.
ಈ ಹಿಂದೆ ದಿಲ್ಲಿಯಲ್ಲಿ(Delhi) ನಡೆದಿರುವ ರೈತ ಹೋರಾಟದಲ್ಲಿ ಕೂಡ ಖಲಿಸ್ತಾನಿಗಳು ಪಾಲ್ಗೊಂಡ ಕುರುಹುಗಳು ಲಭ್ಯವಾಗಿದ್ದವು. ಇದೀಗ ಲಖೀಂಪುರದಲ್ಲೂ ಇವರ ಪಾತ್ರ ಕಂಡುಬಂದಿದೆ. ಇನ್ನು ಲಖೀಂಪುರದಲ್ಲಿ ಸಿಖ್ ಜನಸಂಖ್ಯೆ ಸಾಕಷ್ಟಿದ್ದು, ಇದನ್ನು ಮಿನಿ ಪಂಜಾಬ್ ಎಂದೇ ಕರೆಯಲಾಗುತ್ತದೆ ಎಂಬುದು ಗಮನಾರ್ಹ.
ಖಲಿಸ್ತಾನಿಗಳಿಗೆ ಬೆಂಬಲ ನೀಡಿದ ರೈತ ನಾಯಕ ಟಿಕಾಯತ್
ರೈತರ ಪ್ರತಿಭಟನೆಗಳಲ್ಲಿ ಕೆಲವು ರೈತ ಹೋರಾಟಗಾರು, ಖಲಿಸ್ತಾನಿ(Khalistani) ಹೋರಾಟಗಾರ ಭಿಂದ್ರನ್ವಾಲೆಯ ಚಿತ್ರವಿರುವ ಟೀ-ಶರ್ಟ್ ಧರಿಸಿರುವುದನ್ನು ಭಾರತೀಯ ಕಿಸಾನ್ ಯೂನಿಯನ್ನ(Indian Kisan Union) ನಾಯಕ ರಾಕೇಶ್ ಟಿಕಾಯತ್(rakesh Tikait) ಸಮರ್ಥಿಸಿಕೊಂಡಿದ್ದಾರೆ. ‘ಕೆಲವರಿಗೆ ರಾಮ ಸಂತನಾದರೆ ಕೆಲವರಿಗೆ ರಹೀಮ ಸಂತ’ ಎನ್ನುವ ಮೂಲಕ ಭಿಂದ್ರನ್ವಾಲೆಯನ್ನು ಕೆಲವರು ಸಂತನೆಂದು ಪೂಜಿಸುತ್ತಾರೆ ಎಂಬರ್ಥದ ಮಾತು ಹೇಳಿದ್ದಾರೆ.
‘ಭಿಂದ್ರನ್ವಾಲೆಯನ್ನು ಸಂತ ಎಂದು ಪೂಜಿಸುವ ಹುಡುಗನೊಬ್ಬ ಅವರ ಚಿತ್ರವಿರುವ ಟೀಶರ್ಟ್ ಧರಿಸಿದ್ದಾನೆ. ಆದರೆ ಸರ್ಕಾರ ಮಾತ್ರ ಬಿಂದ್ರನ್ವಾಲೆ ಅವರನ್ನು ಉಗ್ರ ಎಂದು ಪರಿಗಣಿಸುತ್ತದೆ’ ಎಂದು ಬುಧವಾರ ಹೇಳಿದ್ದಾರೆ.