ಲಖೀಂಪುರದಲ್ಲಿ ರೈತರ ಸಾವು ಖಂಡನೀಯ: ಸಚಿವೆ ನಿರ್ಮಲಾ
* ನಾಲ್ವರು ರೈತರು ಸೇರಿ ಎಂಟು ಮಂದಿ ಬಲಿ ಪಡೆದಿದ್ದ ಲಖೀಂಪುರ ಹಿಂಸಾಚಾರ
* ಶಾಲೆಯೊಂದರಲ್ಲಿ ನಡೆಸಿದ ಸಂವಾದದಲ್ಲಿ ಮೌನ ಮುರಿದ ನಿರ್ಮಲಾ
ಲಖೀಂಪುರ್(ಅ.14): ಇಲ್ಲಿ ನಡೆದ ಹಿಂಸಾಚಾರದಲ್ಲಿ(Violence) ನಾಲ್ವರು ರೈತರು ಮೃತಪಟ್ಟಿರುವುದು ಖಂಡನೀಯ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಹೇಳಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿರುವ ಅವರು ಅಲ್ಲಿನ ಶಾಲೆಯೊಂದರಲ್ಲಿ ನಡೆಸಿದ ಸಂವಾದದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
ಹಾರ್ವರ್ಡ್ ಕೆನೆಡಿ ಶಾಲೆಯ ಮಕ್ಕಳು ಈ ಘಟನೆ ಕುರಿತು ಪ್ರಧಾನ ಮಂತ್ರಿಯಾಗಲಿ(Prime Minister) ಅಥವಾ ಮಂತ್ರಿಮಂಡಲದ ಹಿರಿಯರಾಗಲೀ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಇಂತಹ ಘಟನೆಗಳು ದೇಶದಲ್ಲಿ ಎಲ್ಲೇ ನಡೆದರೂ ನಾವು ಖಂಡಿಸುತ್ತೇವೆ. ಆದರೆ ಇದು ಬಿಜೆಪಿ ಆಡಳಿತದ ರಾಜ್ಯದಲ್ಲಿ ನಡೆದಿರುವುದರಿಂದ ಇಷ್ಟೊಂದು ಮಹತ್ವ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಲಖೀಂಪುರ ಹಿಂಸಾಚಾರ: ಸಚಿವರ ಪುತ್ರ ಆಶಿಷ್ಗೆ ಜಾಮೀನಿಲ್ಲ: ಕೋರ್ಟ್
ಲಖೀಂಪುರ ಹಿಂಸಾಚಾರ ಪ್ರಕರಣದಲ್ಲಿ ಬಂಧಿತ ಕೇಂದ್ರ ಸಚಿವ ಅಜಯ್ ಮಿಶ್ರಾರ(Ajay Mishra) ಪುತ್ರ ಆಶಿಷ್ ಮಿಶ್ರಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಅಶಿಷ್ಗೆ ಮತ್ತಷ್ಟುದಿನಗಳ ಕಾಲ ಜೈಲೇ ಗತಿಯಾಗಿದೆ.
ಏತನ್ಮಧ್ಯೆ, ಈ ಕೇಸ್ನಲ್ಲಿ ಅಂಕಿತ್ ದಾಸ್ ಮತ್ತು ಲತೀಫ್ ಎಂಬ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೇರಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಆಶಿಶ್ನನ್ನು ರಕ್ಷಿಸಲು ವಿಡಿಯೋ ಸಾಕ್ಷ್ಯಕ್ಕೆ ವಕೀಲರ ಸಿದ್ಧತೆ
ಇಲ್ಲಿನ ಹಿಂಸಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪೊಲೀಸರ ವಿಚಾರಣೆ ವೇಳೆ ಘಟನೆ ನಡೆದ ದಿನ ಮಧ್ಯಾಹ್ನ 2.30-3.30ರವೆರೆಗೆ ಎಲ್ಲಿದ್ದನೆಂದು ತಿಳಿಸಲು ವಿಫಲನಾಗಿ ಬಂಧಿತನಾಗಿದ್ದ. ಹಾಗಾಗಿ ಆ ಒಂದು ಗಂಟೆಯ ಅವಧಿಯಲ್ಲಿ ಆಶಿಶ್ ಘಟನೆಯ ಸ್ಥಳದಲ್ಲಿ ಇರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಆತನ ವಕೀಲರು ವಿಡಿಯೋ ಸಾಕ್ಷ್ಯ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.9ರಂದು ಪೊಲೀಸರು ಎದುರು ವಿಚಾರಣೆಗೆ ಹಾಜರಾಗಿದ್ದ ಆಶಿಶ್, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೇ ಹಾಗೂ ಘಟನಾ ಸ್ಥಳದಲ್ಲಿ ತಾನು ಇರಲಿಲ್ಲ ಎಂಬುದಕ್ಕೆ ಪುರಾವರ ನೀಡಲಾಗದೇ ಬಂಧಿತನಾಗಿದ್ದ. ಆಶಿಶ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದ ಸೋಮವಾರ ಕೋರ್ಟ್ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.