* ನಾಯಕರು ಪ್ರತಿಷ್ಠೆ ಬಿಟ್ಟು ಪಕ್ಷ ಕಟ್ಟಬೇಕು* ಇದು ಸಾಧ್ಯವಾದರಷ್ಟೇ ನಮಗೆ ಯಶಸ್ಸು* ರಾಜ್ಯಗಳ ‘ಕೈ’ ನಾಯಕರ ಕಿತ್ತಾಟಕ್ಕೆ ಸೋನಿಯಾ ಕಿಡಿ 

ನವದೆಹಲಿ(ಅ.27): ಪಕ್ಷದ ರಾಜ್ಯ ಘಟಕಗಳಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ಒಡಕಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಅಧ್ಯಕ್ಷೆ(AICC president) ಸೋನಿಯಾ ಗಾಂಧಿ(Sonia Gandhi), ‘ವೈಯಕ್ತಿಕ ಪ್ರತಿಷ್ಠೆಗಳಿಗಿಂತ ಪಕ್ಷ ಬಲಗೊಳಿಸುವತ್ತ ಗಮನ ಹರಿಸಬೇಕು. ಇದು ಸಾಧ್ಯವಾದರೆ ವೈಯಕ್ತಿಕ ಹಾಗೂ ಪಕ್ಷದ ಯಶಸ್ಸು ಎರಡೂ ಸಾಧ್ಯವಾಗಲಿದೆ’ ಎಂದು ಕಾಂಗ್ರೆಸ್‌ ನಾಯಕರಿಗೆ ಕರೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ಪಂಜಾಬ್‌(Punjab), ಛತ್ತೀಸ್‌ಗಢ, ರಾಜಸ್ಥಾನ(Rajasthan), ಕರ್ನಾಟಕ(Karnataka) ಸೇರಿದಂತೆ ಹಲವು ಘಟಕಗಳಲ್ಲಿ ನಾಯಕರ ನಡುವೆ ಸಂಘರ್ಷ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸೋನಿಯಾ(Sonia Gandhi) ಹೇಳಿಕೆಗೆ ಮಹತ್ವ ಬಂದಿದೆ.

ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ(Goa), ಉತ್ತರಾಖಂಡ, ಮಣಿಪುರ(Manipur) ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ನಿಮಿತ್ತ ಮಂಗಳವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಸೋನಿಯಾ ಮಾತನಾಡಿದರು.

‘ಪಕ್ಷದ ರಾಜ್ಯ ನಾಯಕರಲ್ಲಿ ನೀತಿ ನಿರೂಪಣೆ ವಿಷಯದಲ್ಲಿ ಒಡಕು ಮೂಡುತ್ತಿದೆ. ಒಗ್ಗಟ್ಟು ಇಲ್ಲ. ಹೀಗಾಗಿ ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದ ನೀತಿ- ನಿರೂಪಣೆಗಳ ಮಾಹಿತಿ ಲಭ್ಯವಾಗುತ್ತಿಲ್ಲ. ಎಐಸಿಸಿಯ ನಿತ್ಯದ ಸಂದೇಶಗಳು ಕಾರ್ಯಕರ್ತರು, ಜಿಲ್ಲಾ ಮಟ್ಟಗಳನ್ನು ತಲುಪುತ್ತಲೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ-ಆರೆಸ್ಸೆಸ್‌ ತತ್ವಗಳ ವಿರುದ್ಧ ಹೋರಾಡಬೇಕಿದೆ. ದೇಶದ ಪ್ರಜಾಸತ್ತೆ ಹಾಗೂ ಸಂವಿಧಾನ, ಕಾಂಗ್ರೆಸ್‌ನ ಮೂಲತತ್ವಗಳನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಬೇಕಿದೆ. ಇದಕ್ಕಾಗಿ ಪಕ್ಷದಲ್ಲಿ ಏಕತೆ ಹಾಗೂ ಶಿಸ್ತು ಕಾಪಾಡಿಕೊಳ್ಳಬೇಕು. ವೈಯಕ್ತಿಕ ಪ್ರತಿಷ್ಠೆ ಮೀರಿ ಪಕ್ಷ ಬಲಗೊಳಿಸುವುದು ಧ್ಯೇಯ ಆಗಬೇಕು’ ಎಂದು ಹೇಳಿದರು.

ಇನ್ನು ನವೆಂಬರ್‌ 1ರಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗುತ್ತಿದೆ. ಈ ಬಗ್ಗೆ ಮಾತನಾಡಿದ ಸೋನಿಯಾ, ‘ಕಾಂಗ್ರೆಸ್‌ ನಾಯಕರು ಪ್ರತಿ ಮನೆಮನೆಗೆ ಹೋಗಿ ನೋಂದಣಿ ಪ್ರಕ್ರಿಯೆಗೆ ಚುರುಕು ಮುಟ್ಟಿಸಬೇಕು’ ಎಂದು ಕರೆ ನೀಡಿದರು.

ಇನ್ನು ಮೋದಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಯತ್ನ ನಡೆಸಿದೆ ಎಂದು ಆರೋಪಿಸಿದ ಅವರು, ‘5 ರಾಜ್ಯಗಳ ಚುನಾವಣೆ ವೇಳೆ ಪಕ್ಷವು ನೀತಿ ಆಧರಿತ ಪ್ರಚಾರ ನಡೆಸಬೇಕು’ ಎಂದು ಸೂಚಿಸಿದರು.