ದೋಷಪೂರಿತ ರನ್‌ವೇ ಬಗ್ಗೆ 2 ಎಚ್ಚರಿಕೆ| 2011, 2019ರಲ್ಲಿ 2 ಎಚ್ಚರಿಕೆ ಬಂದಿದ್ದವು| ಮಳೆಯಲ್ಲಿ ಲ್ಯಾಂಡಿಂಗ್‌ ಸುರಕ್ಷಿತವಲ್ಲ: ತಜ್ಞರ ಎಚ್ಚರಿಕೆ| ರನ್‌ವೇಯಲ್ಲಿ ಬಿರುಕು: ವಿಮಾನಯಾನ ಸಚಿವಾಲಯ ಎಚ್ಚರಿಸಿತ್ತು| ಆದರೂ ಇಲ್ಲಿ ನಡೆದಿತ್ತು ವಿಮಾನ ಕಾರ್ಯಾಚರಣೆ

ಕಲ್ಲಿಕೋಟೆ(ಆ.09): ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣ ಸುರಕ್ಷಿತವಲ್ಲ ಎಂದು 2011 ಹಾಗೂ ಕಳೆದ ವರ್ಷ ಜುಲೈ 11ರಂದು ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಆದರೂ ಈ ಎಚ್ಚರಿಕೆ ನಿರ್ಲಕ್ಷಿಸಿ ವಿಮಾನ ಸಂಚಾರ ನಡೆದಿತ್ತು ಎಂದು ಬೆಳಕಿಗೆ ಬಂದಿದೆ. ಶುಕ್ರವಾರ ಇಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ನಂತರ ಈ ಎಚ್ಚರಿಕೆ ಸಂದೇಶಗಳು ಮಹತ್ವ ಪಡೆದುಕೊಂಡಿವೆ.

Add Asianetnews Kannada as a Preferred SourcegooglePreferred

ವಿಮಾನ ತುಂಡಾದ ಕೂಡಲೇ ಎಲ್ಲರ ಆಕ್ರಂದನ!

2011ರಲ್ಲಿ: ವಿಮಾನಯಾನ ತಜ್ಞ ಕ್ಯಾ| ಮೋಹನ್‌ ರಂಗನಾಥನ್‌ ಅವರು ಅಂದಿನ ನಾಗರಿಕ ವಿಮಾನಯಾನ ಕಾರ್ಯದರ್ಶಿ ನಸೀಂ ಜೈದಿ ಅವರಿಗೆ 2011ರ ಜೂನ್‌ನಲ್ಲಿ ರನ್‌ವೇ ಸರಿಯಿಲ್ಲ ಎಂದು ತಿಳಿಸಿದ್ದರು. ‘ಮಳೆ, ತೇವದ ಹಾಗೂ ಗಾಳಿಯ ವಾತಾವರಣದಲ್ಲಿ ವಿಮಾನವನ್ನು ಇಲ್ಲಿ ಲ್ಯಾಂಡ್‌ ಮಾಡಿದರೆ ಸುರಕ್ಷಿತವಾಗಿಲ್ಲ. ರನ್‌ವೇ 10ರಲ್ಲಿ ಲ್ಯಾಂಡ್‌ ಮಾಡಿದರೆ ವಿಮಾನ ಪ್ರಯಾಣಿಕರ ಜೀವಕ್ಕೆ ಅಪಾಯವಿದೆ’ ಎಂದು ರಂಗನಾಥನ್‌ ಅವರು ತಿಳಿಸಿದ್ದರು. ಮಂಗಳೂರಿನಲ್ಲಿ 2010ರಲ್ಲಿ 158 ಪ್ರಯಾಣಿಕರನ್ನು ಬಲಿ ಪಡೆದ ಏರ್‌ ಇಂಡಿಯಾ ವಿಮಾನ ದುರಂತದ ನಂತರ ಈ ಎಚ್ಚರಿಕೆ ನೀಡಿದ್ದರು.

ಮಂಗಳೂರು ಸೇರಿ ದೇಶದ 5 ಟೇಬಲ್‌ ಟಾಪ್‌ ನಿಲ್ದಾಣಗಳು: ಸಣ್ಣ ಎಡವಟ್ಟಾದ್ರೂ ಅಪಘಾತ!

ಕಳೆದ ವರ್ಷ ಮತ್ತೊಂದು ಎಚ್ಚರಿಕೆ:

2011ರ ಎಚ್ಚರಿಕೆ ಬಳಿಕ ಇಂಥದ್ದೇ ಎಚ್ಚರಿಕೆ ವಿಮಾನಯಾನ ಸಚಿವಾಲಯದಿಂದ ಕಳೆದ ವರ್ಷ ಜುಲೈ 11ರಂದು ಬಂದಿತ್ತು. ರನ್‌ವೇಯಲ್ಲಿ ಬಿರುಕು ಇದೆ. ನೀರು ನಿಲ್ಲುತ್ತಿದೆ ಹಾಗೂ ರನ್‌ವೇಯಲ್ಲಿ ಹೆಚ್ಚು ರಬ್ಬರ್‌ ಅಂಶವಿದೆ. ಹೀಗಾಗಿ ರನ್‌ವೇಯಲ್ಲಿ ಲೋಪವಿದೆ ಎಂದು ಅದು ಹೇಳಿತ್ತು.