ಉಗ್ರರ ದಾಳಿ ಭೀತಿ ಕಾಶ್ಮೀರದಿಂದ ಅನ್ಯ ರಾಜ್ಯದವರ ಗುಳೆ!
* ಪಂಡಿತರ ಬಳಿಕ ಕಾಶ್ಮೀರ ಬಿಡುತ್ತಿರುವ ಬಿಹಾರ, ರಾಜಸ್ಥಾನಿಗಳು
* ಉಗ್ರರ ದಾಳಿ ಭೀತಿ ಕಾಶ್ಮೀರದಿಂದ ಅನ್ಯ ರಾಜ್ಯದವರ ಗುಳೆ
* ವಲಸಿಗರಿಂದ ತುಂಬಿ ತುಳುಕುತ್ತಿದೆ ಶ್ರೀನಗರದ ರೈಲ್ವೆ ನಿಲ್ದಾಣ
ಶ್ರೀನಗರ(ಅ.19): ಉಗ್ರರ ದಾಳಿಗೆ ಬೆದರಿ ಈವರೆಗೆ ಕಾಶ್ಮೀರಿ ಪಂಡಿತರು ಕಾಶ್ಮೀರ(Kashmir) ಕಣಿವೆಯಿಂದ ಸುರಕ್ಷಿತ ಸ್ಥಳಗಳಿಗೆ ಗುಳೆ ಹೋಗುತ್ತಿದ್ದರು. ಈಗ ಗುಳೆ ಹೋಗುವ ಸರದಿ ಕಾಶ್ಮೀರಕ್ಕೆ ಬಂದ ಅನ್ಯರಾಜ್ಯದ ವಲಸಿಗರದ್ದು.
ಜಮ್ಮು-ಕಾಶ್ಮೀರದಲ್ಲಿ(Jammu Kashmir) ಹೊರ ರಾಜ್ಯದವರನ್ನು ಗುರಿಯಾಗಿಸಿ ಉಗ್ರರು ಭಯೋತ್ಪಾದಕ ದಾಳಿ ಆರಂಭಿಸಿರುವ ಕಾರಣ ಬಿಹಾರ(Bihar) ಹಾಗೂ ರಾಜಸ್ಥಾನದಂಥ ರಾಜ್ಯಗಳಿಂದ ವಲಸೆ ಬಂದಿದ್ದವರನ್ನು ಗಾಬರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಲಸಿಗರು ಇದೀಗ ತಮ್ಮ-ತಮ್ಮ ಊರುಗಳಿಗೆ ಗುಳೆ ಹೊರಟಿದ್ದಾರೆ. ಇದರ ಪರಿಣಾಮ ಶ್ರೀನಗರದ(Srinagar) ರೈಲ್ವೆ ನಿಲ್ದಾಣವು ಸೋಮವಾರ ವಲಸಿಗ ಕಾರ್ಮಿಕರಿಂದ ತುಂಬಿ ತುಳುಕುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಮೂಲದ 60 ವರ್ಷದ ದಿನೇಶ್ ಮಂಡಲ್(Dineshh Mandal) ಎಂಬುವರು, ‘ಐಸ್ಕ್ರೀಂ ಮಾರಾಟಕ್ಕಾಗಿ ನಾನು ಕಳೆದ 40 ವರ್ಷಗಳಿಂದಲೂ ಆಗ್ಗಾಗ್ಗೆ ಕಾಶ್ಮೀರಕ್ಕೆ ಬರುತ್ತಿದ್ದೆ. ಆದರೆ ಕಾಶ್ಮೀರದ ಪರಿಸ್ಥಿತಿ ಈಗ ಹೇಳಲಾರದಷ್ಟುಭೀಕರವಾಗಿದ್ದು, ಹೊರ ರಾಜ್ಯದ ವರ್ತಕರು, ಕೂಲಿ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರ ದಾಳಿಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಇರುವುದು ಸಾಧ್ಯವೇ ಇಲ್ಲ’ ಎಂದು ಹೇಳಿದರು.
‘ಮೊದಲು ಹೊರ ರಾಜ್ಯಗಳ ವರ್ತಕರ ಮೇಲೆ ರಸ್ತೆಗಳಲ್ಲಿ ದಾಳಿ ನಡೆಯುತ್ತಿತ್ತು. ಆದರೆ ಇದೀಗ ನಮ್ಮ ಮನೆಗಳನ್ನೇ ಹುಡಿಕಿಕೊಂಡು ಬಂದು ದಾಳಿ ನಡೆಸಲಾಗುತ್ತಿದೆ. ಆದಾಗ್ಯೂ, ಇಲ್ಲಿನ ಸ್ಥಳೀಯರು ಕಾಶ್ಮೀರದಲ್ಲೇ ಇರಲು ಹೇಳುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಇಲ್ಲೇ ಇರಲು ಹೇಗೆ ಸಾಧ್ಯ? ಕಾಶ್ಮೀರದಲ್ಲಿ ಶಾಂತಿ ಮರಳಿದಾಗ ಮತ್ತೆ ಬರುವ ಚಿಂತನೆ ಮಾಡುತ್ತೇವೆ’ ಎಂದು ವಲಸಿಗರು ಹೇಳುತ್ತಿದ್ದಾರೆ.
ದುಃಖದ ಮಡುವಿನಲ್ಲಿ ಸಿಲುಕಿದ ಬಿಹಾರ ಗ್ರಾಮಗಳು:
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಿಹಾರದ ಕೆಲ ನಾಗರಿಕರು ಬಲಿಯಾಗಿರುವ ಪರಿಣಾಮ ಬಿಹಾರದ ಕೆಲ ಗ್ರಾಮಗಳಲ್ಲಿ ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ.
ಶ್ರೀನಗರದ ಬಳಿ 2 ದಿನಗಳ ಹಿಂದಷ್ಟೇ ಉಗ್ರರ ಗುಂಡಿಗೆ ಬಲಿಯಾಗಿದ್ದ ಬಿಹಾರದ 30 ವರ್ಷದ ಬೀದಿ ಬದಿ ವ್ಯಾಪಾರಿ ಅರವಿಂದ್ ಕುಮಾರ್ ಅವರ ಮೃತದೇಹವು ಸೋಮವಾರ ಬಂಕಾ ಜಿಲ್ಲೆಯಲ್ಲಿನ ಗ್ರಾಮಕ್ಕೆ ಬಂದಿದೆ. ಈ ವೇಳೆ ಆತನ ತಾಯಿ ಸುನೈನಾ ದೇವಿ ಮತ್ತು ಸಂಬಂಧಿಕರು ಅಳಲು ಹೇಳತೀರದಾಗಿತ್ತು. ಅರವಿಂದ್ ಕುಮಾರ್ಗೆ ಮದುವೆ ಮಾಡಲು ಮನೆಯಲ್ಲಿ ನಿಶ್ಚಯಿಸಲಾಗಿತ್ತು. ಆದರೆ ಇದೀಗ ಆತ ಹೆಣವಾಗಿ ಮನೆಗೆ ಬಂದಿದ್ದಾನೆ ಎಂದು ಸುನೈನಾ ದೇವಿ ಬಿಕ್ಕಿಬಿಕ್ಕಿ ಅತ್ತರು.
ಐಸ್ಕ್ರೀಂ ಮಾರಾಟಕ್ಕಾಗಿ ನಾನು ಕಳೆದ 40 ವರ್ಷಗಳಿಂದಲೂ ಆಗ್ಗಾಗ್ಗೆ ಕಾಶ್ಮೀರಕ್ಕೆ ಬರುತ್ತಿದ್ದೆ. ಆದರೆ ಕಾಶ್ಮೀರದ ಪರಿಸ್ಥಿತಿ ಈಗ ಹೇಳಲಾರದಷ್ಟುಭೀಕರವಾಗಿದ್ದು, ಹೊರ ರಾಜ್ಯದ ವರ್ತಕರು, ಕೂಲಿ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರ ದಾಳಿಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಇರುವುದು ಸಾಧ್ಯವೇ ಇಲ್ಲ’
-ದಿನೇಶ್ ಮಂಡಲ್, ಬಿಹಾರ ಮೂಲದ ಐಸ್ಕ್ರೀಂ ವ್ಯಾಪಾರಿ
ಕಾಶ್ಮೀರದಲ್ಲಿ ಬಿಹಾರಿಗಳ ಕೊಂದಿದ್ದು ಲಷ್ಕರ್ ಬೆಂಬಲಿತ ಸಂಘಟನೆ
ಶ್ರೀನಗÜರ: ಕಾಶ್ಮೀರದಲ್ಲಿ ಭಾನುವಾರ ಇಬ್ಬರು ಬಿಹಾರದ ಕಾರ್ಮಿಕರ ಮೇಲಿನ ದಾಳಿ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಬೆಂಬಲಿತ ಉಗ್ರ ಸಂಘಟನೆಯಾಗಿರುವ ‘ಯುನೈಟೆಡ್ ಲಿಬರೇಷನ್ ಫ್ರಂಟ್ (ಯುಎಲ್ಎಫ್)’ ಹೊತ್ತುಕೊಂಡಿದೆ. ಅಲ್ಲದೆ ಅನ್ಯರಾಜ್ಯದವರು ಕಾಶ್ಮೀರ ತೊರೆಯುವಂತೆ ಬೆದರಿಕೆ ಹಾಕಿದೆ.