ವೃತ್ತಿಯಲ್ಲಿ ವಕೀಲನಾಗಿರುವ ಗುರುಪತ್ವಂತ್ ಸಿಂಗ್ ಪನ್ನುನ್, ಪಂಜಾಬ್‌ನ ಅಮೃತ್‌ಸರ ಜಿಲ್ಲೆಯ ಖಾನ್‌ಕೋಟ್ ಗ್ರಾಮದವರಾಗಿದ್ದು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾನೆ. 

ನವದೆಹಲಿ (ಜೂ.21): ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಶೂಟ್‌ ಮಾಡಿ ಕೊಂಡ ಬೆನ್ನಲ್ಲಿಯೇ, ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಕಳೆದ 48 ಗಂಟೆಗಳಿಂದ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದರ ನಡುವೆ ಎನ್‌ಐಎ ಕೂಡ ಗುರುಪತ್ವಂತ್‌ ಸಿಂಗ್‌ಗಾಗಿ ಹುಡುಕಾಟ ಆರಂಭ ಮಾಡಿದೆ. ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕರನ್ನು ಹೆಡೆಮುರಿಕಟ್ಟುವ ಕೆಲಸ ನಡೆಯುತ್ತಿದೆಯೇ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಏಕೆಂದರೆ, ಒಂದೇ ತಿಂಗಳ ಅಂತರದಲ್ಲಿ ಖಲಿಸ್ತಾನಿ ಹೋರಾಟದ ಮೂರು ಪ್ರಮಖ ನಾಯಕರು ನಿಗೂಢವಾಗಿ ಕೊಲೆಯಾಗಿದ್ದಾರೆ. ಮೇ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ನಡೆದ ಶೂಟೌಟ್‌ನಲ್ಲಿ 63 ವರ್ಷದ ಖಲಿಸ್ತಾನಿ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಪಂಜ್ವಾರ್ ಹತ್ಯೆಯಾಗಿತ್ತು. ಅದರ ಬಳಿಕ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಖಲಿಸ್ತಾನಿ ಪರ ನಾಯಕ ಅವತಾರ್ ಸಿಂಗ್ ಖಾಂಡಾ ಯುನೈಟೆಡ್ ಕಿಂಗ್‌ಡಂನಲ್ಲಿ ನಿಧನರಾದರು. ಈತನಿಗೆ ರಕ್ತದ ಕ್ಯಾನ್ಸರ್‌ ಇತ್ತಾದರೂ, ಹಠಾತ್‌ ಆಗಿ ಸಾವು ಕಂಡ ಬಗ್ಗೆ ಈಗಲೂ ಅನುಮಾನಗಳಿವೆ. ಸೋಮವಾರವಷ್ಟೇ ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ನಾಯಕ ನಿಜ್ಜರ್‌ನನ್ನು ಕೆನಡಾದಲ್ಲಿ ಕೊಲೆ ಮಾಡಲಾಗಿದೆ.

ಅಮೆರಿಕದಲ್ಲಿ ನೆಲೆಸಿರುವ ಗುರುಪತ್ವಂತ್ ಸಿಂಗ್ ಪನ್ನುನ್, ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಹೊತ್ತಿನಲ್ಲಿಯೇ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲಿಯೇ ಎನ್‌ಐಎ ಹುಡುಕಾಟ ಜೋರಾಗಿದೆ. ಗುರುಪತ್ವಂತ್ ನಾಪತ್ತೆಯಾಗಿರುವ ಬಗ್ಗೆ ಎಲ್ಲೂ ಅಧಿಕೃತ ವರದಿಗಳಿಲ್ಲ. ಆದರೆ, ಹೆಚ್ಚಿನ ಎಲ್ಲಾ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಲ್ಲಿ ಗುರುಪತ್ವಂತ್ ಬಗ್ಗೆ ಎರಡು ದಿನಗಳಿಂದ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ. ಇತ್ತೀಚೆಗೆ ಖಲಿಸ್ತಾನಿ ಭಯೋತ್ಪಾದಕರ ಸಾಲು ಸಾಲು ಹತ್ಯೆಯ ಬೆನ್ನಲ್ಲಿಯೇ ಈತ ಭೂಗತವಾಗಿರಬಹುದು ಎಂದೂ ಹೇಳಲಾಗಿದೆ. ಇಲ್ಲವೇ ಪ್ರಧಾನಿ ಮೋದಿ ಅಮೆರಿಕ ಭೇಟಿ ಹೊತ್ತಲ್ಲಿ ಏನಾದರು ಅವಾಂತರ ಸೃಷ್ಟಿಸಬಹುದು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳಿಂದಲೇ ಬಂಧನಕ್ಕೆ ಒಳಗಾಗಿರಬಹುದು ಎನ್ನಲಾಗಿದೆ. 

ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಭಯೋತ್ಪಾದಕ ಗುಂಪುಗಳು ಪಡೆದ ಬೆಂಬಲದ ಬಗ್ಗೆ ಭಾರತವು ಸಕ್ರಿಯವಾಗಿ ಕಳವಳ ವ್ಯಕ್ತಪಡಿಸಿದೆ. ಅಂತಹ ಗುಂಪುಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಭಾರತವು ಪನ್ನುನ್ ವಿರುದ್ಧ ರೆಡ್ ನೋಟಿಸ್ ಕೋರಿ ಇಂಟರ್‌ಪೋಲ್ ಅನ್ನು ಸಂಪರ್ಕಿಸಿತ್ತು ಆದರೆ ಇಂಟರ್‌ಪೋಲ್ ಸಾಕ್ಷ್ಯಚಿತ್ರ ಬೆಂಬಲದ ಕೊರತೆಯನ್ನು ಉಲ್ಲೇಖಿಸಿದ್ದರಿಂದ ಬೇಡಿಕೆಯನ್ನು ತಿರಸ್ಕರಿಸಲಾಯಿತು.

ಯಾರೀತ ಗುರುಪತ್ವಂತ್ ಸಿಂಗ್ ಪನ್ನುನ್: ವೃತ್ತಿಯಲ್ಲಿ ವಕೀಲನಾಗಿರುವ ಗುರುಪತ್ವಂತ್ ಸಿಂಗ್ ಪನ್ನುನ್ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿರುವ ಖಾನ್‌ಕೋಟ್ ಎಂಬ ಹಳ್ಳಿಯಲ್ಲಿ ಜನಿಸಿದ್ದ. ಪನ್ನುನ್ ಅವರು ಸಿಖ್ಸ್ ಫಾರ್ ಜಸ್ಟಿಸ್ (SFJ) ಸ್ಥಾಪಕ, ಇದನ್ನು 2007 ರಲ್ಲಿ ಅಮೆರಿಕದಲ್ಲಿ ಸ್ಥಾಪಿಸಲಾಯಿತು. SFJ ಯ ಪ್ರಾಥಮಿಕ ಉದ್ದೇಶವು ಭಾರತದಿಂದ ಪ್ರತ್ಯೇಕವಾದ ಖಲಿಸ್ತಾನ್ ಎಂಬ ಸ್ವತಂತ್ರ ದೇಶವನ್ನು ರಚಿಸಲು ಪ್ರತಿಪಾದಿಸುವುದಾಗಿದೆ.

Add Asianetnews Kannada as a Preferred SourcegooglePreferred
Scroll to load tweet…

ಖಲಿಸ್ತಾನಿಗಳ ಹೆಡೆಮುರಿ ಕಟ್ಟಿದ ಸರ್ಕಾರ, ಕೆನಡಾದ ನಡುರಸ್ತೆಯಲ್ಲಿಯೇ ಹೆಣವಾದ ಹರ್ದೀಪ್‌ ಸಿಂಗ್‌ ನಿಜ್ಜಾರ್‌!

ತನ್ನ ಕಾನೂನು ಪರಿಣತಿಯನ್ನು ಬಳಸಿಕೊಂಡು, ಪನ್ನುನ್ 2014 ರಿಂದ ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಕ್ಕೆ ಭೇಟಿ ನೀಡಿದ ಭಾರತೀಯ ರಾಜಕೀಯ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದ್ದ. ಅವರ ಕಾನೂನು ಕ್ರಮಗಳು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಶಿರೋಮಣಿ ಅಕಾಲಿದಳದ ಸುಖಬೀರ್ ಸಿಂಗ್ ಬಾದಲ್ ಸೇರಿದಂತೆ ವಿವಿಧ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡವು. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಕೇಸ್‌ ದಾಖಲಿಸಲಾಗಿದೆ.

Breaking: ಖಲಿಸ್ತಾನಿ ಭಯೋತ್ಪಾದಕ ಪರಮ್ಜಿತ್ ಸಿಂಗ್ ಪಂಜ್ವಾರ್ ಹತ್ಯೆ!