* ಇಸ್ರೇಲ್ ಮೇಲೆ ರಾಕೆಟ್ ದಾಳಿ,  ಭಾರತದ ಕೇರಳ ಮೂಲದ ಮಹಿಳೆ ಸಾವು* ಗಾಜಾ ಕಡೆಯಿಂದ ರಾಕೆಟ್ ದಾಳಿ* ಕೇರಳ ಮೂಲದ ಸೌಮ್ಯ ಸಂತೋಷ್ ಮೃತಪಟ್ಟವರು* ಘಟನೆಯಲ್ಲಿ ಸೌಮ್ಯ ಅವರ ಪತಿ ಹಾಗು 9 ವರ್ಷದ ಮಗು ಪಾರಾಗಿದ್ದಾರೆ

ಇಸ್ಲೇಲ್(ಮೇ.12) ಪ್ಯಾಲೇಸ್ತೀನ್‌‌ದಲ್ಲಿನ ಗಾಜಾ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯ ಸಂತೋಷ್, ದಕ್ಷಿಣ ಇಸ್ರೇಲ್‌ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು.

ಗಾಜಾ ಮೂಲದ ಉಗ್ರರು ಸೋಮವಾರ ಸಂಜೆಯಿಂದ ಇಸ್ರೇಲ್ ಮೇಲೆ ನೂರಾರು ರಾಕೆಟ್‌ ದಾಳಿ ನಡೆಸಿದ್ದು, ಮಂಗಳವಾರ ರಾತ್ರಿ 9 ಗಂಟೆಯ ವರೆಗೆ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದಿ ಉಗ್ರರ ನೆಲೆ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಅರಬ್-ಯಹೂದಿ ದೇಶಗಳಲ್ಲಿ ಭಾರಿ ಹಿಂಸಾಚಾರ ಹಾಗೂ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲಾಡ್ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಭಾರತೀಯ ಮೂಲದ ಮಹಿಳೆ ಕಳೆದ ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಕೇರಳದಲ್ಲಿರುವ ಪತಿ ಹಾಗೂ ಏಳು ವರ್ಷದ ಮಗನನ್ನು ಅಗಲಿದ್ದಾರೆ.

ಉಗ್ರರು ನಡೆಸಿದ ರಾಕೆಟ್ ದಾಳಿಯು ನೇರವಾಗಿ ವೃದ್ಧೆಯ ಮನೆಗೆ ಅಪ್ಪಳಿಸಿತ್ತು. ಈ ವೇಳೆ 80 ವರ್ಷದ ವೃದ್ಧೆಯ ಆರೈಕೆ ಮಾಡುತ್ತಿದ್ದ ಕೇರಳ ಮೂಲದ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸಿದೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಸಂಭವಿಸಿದಾಗ ಸೌಮ್ಯ ತನ್ನ ಪತಿ ಸಂತೋಷ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡುತ್ತಿದ್ದರು ಎಂದು ಕೇರಳದಲ್ಲಿರುವ ಕುಟುಂಬ ಮೂಲಗಳು ತಿಳಿಸಿವೆ.