Wayanad Landslide News: ಕೇರಳದ ವಯನಾಡ್‌ನಲ್ಲಿ ಭೀಕರ ಭೂಕುಸಿತ ಉಂಟಾಗಿದ್ದು, ಇಲ್ಲಿಯವರೆಗೂ ಚುರಲ್ಮಲಾದಲ್ಲಿ ಮಾತ್ರವೇ ರಕ್ಷಣಾ ಕಾರ್ಯಾಚರಣೆ ಸಾಗಿದೆ. ಚೂರಲ್ಮಲಾಗಿಂತ ಹೆಚ್ಚಿನ ಹಾನಿಗೆ ಒಳಗಾದ ಮುಂಡಕೈ ಪ್ರದೇಶದಲ್ಲಿ ಸಂಜೆಯ ವೇಳೆಗೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಬಹುದು ಎನ್ನಲಾಗಿದೆ. 

ವಯನಾಡ್‌ (ಜು.30): ಕೇರಳದ ವಯನಾಡ್‌ ಜಿಲ್ಲೆಯ ಗ್ರಾಮಗಳಾದ ಚೂರಲ್ಮಲಾ ಹಾಗೂ ಮುಂಡಕೈ ನಕಾಶೆಯಿಂದಲೇ ಕಾಣೆಯಾಗುವಂಥ ಅಪಾಯ ಎದುರಿಸಿದೆ. ಭೂಕುಸಿತದಲ್ಲಿ ಈ ಎರಡೂ ಗ್ರಾಮಗಳು ಭೀಕರವಾಗಿ ಹಾನಿಗೆ ಒಳಗಾಗಿದ್ದು, ಆಪ್ತರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗ್ಗೆಯಿಂದಲೇ ಚುರಲ್ಮಲಾದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಚುರಲ್ಮಲಾಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂಡಕೈ ಹಾನಿಗೆ ಒಳಗಾಗಿದೆ. ಆದರೆ, ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೇ ಕುಸಿದು ಹೋದ ಕಾರಣದಿಂದ ಮುಂಡಕೈಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಹಿನ್ನಡೆಯಾಗಿದೆ. ಸಂಜೆಯ ವೇಳೆಗೆ ಮುಂಡಕೈಯಲ್ಲೂ ಕಾರ್ಯಾಚರಣೆ ಆರಂಭವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ಗ್ರಾಮದಲ್ಲಿ ಸದ್ಯ 10 ಮನೆಗಳು ಮಾತ್ರವೇ ಉಳಿದಿವೆ. ಮತ್ತೆಲ್ಲಾ ಮನೆಗಳು ಭೂಕುಸಿತದಲ್ಲಿ ಕೊಚ್ಚಿಹೋಗಿರಬಹುದು ಎಂದು ಅಂದಾಜಿಸಲಾಗಿದೆ.

ಚುರಲ್ಮಲಾ ಮುಂಡಕೈಯಲ್ಲಿ ಏನೂ ಉಳಿದಿಲ್ಲ. ಒಂದು ಸಂಪೂರ್ಣ ಪ್ರದೇಶವೇ ದುರಂತದಲ್ಲಿ ಕೊಚ್ಚಿಹೋಗಿದೆ, ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ವಯನಾಡು ಶೋಕದ ನಾಡಾಗಿ ಮಾರ್ಪಾಡಾದರೆ ಇಡೀ ಕೇರಳವೇ ನಡುಗಿದೆ ಚುರಲ್ಮಲಾ ಮತ್ತು ಮುಂಡಕೈ ಇತಿಹಾಸದಲ್ಲಿಯೇ ದೊಡ್ಡ ಅನಾಹುತ ಇದಾಗಿದೆ.. ವಯನಾಡಿನಲ್ಲಿ ಭೂಕುಸಿತ ಸಂಭವಿಸಿದರೆ, ನಿಲಂಬೂರ್ ಪೋತುಕಲ್ಲು ನಿವಾಸಿಗಳು ಮೃತ ದೇಹಗಳನ್ನು ನದಿಯಲ್ಲಿ ಕಾಣುತ್ತಿದ್ದಾರೆ. ಚಾಲಿಯಾರ್‌ ನದಿಯಲ್ಲಿ ಕಿಲೋಮೀಟರ್‌ ದೂರದವರೆಗೆ ಮರದ ದಿಮ್ಮಿಗಳಂತೆ ಶವಗಳು ತೇಲಿ ಹೋಗುತ್ತಿದೆ. ಇಲ್ಲಿಯವರೆಗೂ ಎಷ್ಟು ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ ಎನ್ನುವುದರ ಮಾಹಿತಿಗಳಿಲಲ್ಲ. ಕಿಲೋಮೀಟರ್ ಗಟ್ಟಲೆ ತೇಲಿ ಬಂದ ಹಲವು ಮೃತದೇಹಗಳು ಗುರುತೇ ಸಿಗದಷ್ಟು ಛಿದ್ರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುರಂತ ಸಂಭವಿಸಿದ ಚುರಲ್ಮಲಾ ಪ್ರದೇಶದಲ್ಲಿ ಇದುವರೆಗೆ ಸುಮಾರು 90ಕ್ಕೂ ಅಧಿಕ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಅದೇ ರೀತಿ ಭೂಕುಸಿತವಾಗಿದ್ದ ಮುಂಡಕೈಗೆ ಮಂಗಳವಾರ ಮಧ್ಯಾಹ್ನ ಮಾತ್ರವೇ ರಕ್ಷಣಾ ತಂಡ ತಲುಪಲು ಸಾಧ್ಯವಾಗಿದೆ. ಪತ್ತೆಯಾಗಿರುವ ಹಲವು ಶವಗಳ ಗುರುತು ಪತ್ತೆಯಾಗಿಲ್ಲ.

ಎಷ್ಟು ಜನ ಸತ್ತಿದ್ದಾರೆ, ಎಷ್ಟು ಜನ ಸುರಕ್ಷಿತವಾಗಿದ್ದಾರೆ ಎಂಬುದೇ ತಿಳಿಯದಂತಹ ಪರಿಸ್ಥಿತಿ ಮುಂಡಕೈನಲ್ಲಿದೆ. ಚುರುಲ್ಮಲಾದಲ್ಲಿ ಅನಾಹುತದ ತೀವ್ರತೆ ಹೊರಜಗತ್ತಿಗೆ ತಿಳಿದಿದೆ. ಆದರೆ, ಮುಂಡಕೈನಲ್ಲಿ ಪರಿಸ್ಥಿತಿ ಏನಾಗಿದೆ, ಅನಾಹುತ ಯಾವ ಪ್ರಮಾಣದಲ್ಲಾಗಿದೆ ಎನ್ನುವ ಮಾಹಿತಿ ಯಾರಲ್ಲೂ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಮುಂಡಕೈ ಮತ್ತು ಚುರುಲ್ಮಲಾಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದ್ದು, 300 ಕುಟುಂಬಗಳಿಗೆ ಸೇರಿದ ಸುಮಾರು 1,000 ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಲವರು ಬೆಟ್ಟದ ತುದಿಯಲ್ಲಿ ಆಶ್ರಯ ಪಡೆದಿದ್ದಾರೆ. ಎಷ್ಟು ಮನೆಗಳು ಕೊಚ್ಚಿ ಹೋಗಿವೆ ಅಥವಾ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂಬ ನಿಖರ ಮಾಹಿತಿ ಕೂಡ ಇನ್ನೂ ಸಿಕ್ಕಿಲ್ಲ. ತೋಟದ ಮಾಲೀಕರ 9 ಪದರಗಳು ಕೊಚ್ಚಿಹೋಗಿವೆ. ಈ ಸ್ಥಳಗಳಲ್ಲಿ ವಾಸಿಸುವ ಜನರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಭೂಕುಸಿತದಿಂದ ನದಿ ಬೇರೆ ಬೇರೆ ಕಡೆಗೆ ಹರಿದು ಚುರಲ್ಮಲಾ ಕೂಡ ನಾಶವಾಗಿದೆ. ಎಲ್ಲೆಂದರಲ್ಲಿ ಬೃಹತ್ ಕಲ್ಲುಗಳು, ಮಣ್ಣುಗಳು ಬಿದ್ದಿವೆ.

'ಇದು ಕ್ರೋಧಿನಾಮ ಸಂವತ್ಸರ, ಮಳೆ ಆಗುತ್ತೆ, ಗುಡ್ಡ ಉರುಳುತ್ತೆ..' ಮತ್ತೆ ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ

ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಗಳು, ಸೇನೆಯ ಮೂರು ಶಾಖೆಗಳು, ಪೊಲೀಸ್, ಅಗ್ನಿಶಾಮಕ ದಳ, ಇತರ ಅಧಿಕಾರಿಗಳು ಮತ್ತು ಸ್ಥಳೀಯರು ತಮ್ಮವರ ಹತಾಶ ಹುಡುಕಾಟದಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ಪೊಲೀಸರ ಡ್ರೋನ್‌ಗಳು ಮತ್ತು ಶ್ವಾನದಳಗಳು ತೊಡಗಿಸಿಕೊಂಡಿವೆ.

Wayanad Landslide: ಚಿತ್ರಗಳಲ್ಲಿ ದೇವರನಾಡಿನ ಭೀಕರ ಭೂಕುಸಿತ!