ಕೇರಳದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಇರಿಸಿದ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ.
ಕೊಚ್ಚಿ (ಏ.17): ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಕೋರುವ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಮಂದಿ (ಚಿಕನ್ ಮತ್ತು ರೈಸ್) ಖಾದ್ಯವನ್ನು ಚಿತ್ರೀಕರಿಸಿದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಮಲಯಾಳಿಗಳ ಹೊಸ ವರ್ಷವಾದ 'ವಿಷು' ಹಬ್ಬದ ಅಂಗವಾಗಿ ಚೆರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ 'ಮೆಹರ್ ಮಂತಿ ಆ್ಯಂಡ್ ಗ್ರಿಲ್ಸ್' ರೆಸ್ಟೋರೆಂಟ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ವೊಂದು ಹರಿದಾಡಿತ್ತು. ಆ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಚಿತ್ರದ ಮುಂದೆ ಗ್ರಿಲ್ಡ್ ಚಿಕನ್ ಮತ್ತು ಮಂದಿ ರೈಸ್ ಇರುವ ತಟ್ಟೆಯನ್ನು ಇಡಲಾಗಿತ್ತು. ಈ ಚಿತ್ರವು ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ವಕೀಲ ಎಂ.ವಿ. ಬಿಜು ಎಂಬುವವರು ದೂರು ದಾಖಲಿಸಿದ್ದರು.
ರೆಸ್ಟೋರೆಂಟ್ ಮಾಲೀಕನ ಬಂಧನ
ದೂರಿನ ಅನ್ವಯ ಪೊಲೀಸರು ರೆಸ್ಟೋರೆಂಟ್ ಮಾಲೀಕ ಅರ್ಷಾದ್ ಎಂಬುವವರನ್ನು ಬಂಧಿಸಿದ್ದಾರೆ. ಕೋಮು ಶಾಂತಿ ಕದಡುವ ಉದ್ದೇಶ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ರೆಸ್ಟೋರೆಂಟ್ ಪಾಲುದಾರನ ಕ್ಷಮೆಯಾಚನೆ
ವಿವಾದ ತಾರಕಕ್ಕೇರುತ್ತಿದ್ದಂತೆ ರೆಸ್ಟೋರೆಂಟ್ನ ವ್ಯವಸ್ಥಾಪಕ ಪಾಲುದಾರ ಶಮೀರ್ ಇನ್ಸ್ಟಾಗ್ರಾಮ್ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. "ಈ ಪೋಸ್ಟರ್ ಅನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿಲ್ಲ. ಖಾಸಗಿ ಗ್ರೂಪ್ ಒಂದರಲ್ಲಿ ಇದು ಹರಿದಾಡಿತ್ತು, ಅಲ್ಲಿ ಆಕ್ಷೇಪ ವ್ಯಕ್ತವಾದ ತಕ್ಷಣ ಅದನ್ನು ತೆಗೆಯಲು ಯತ್ನಿಸಲಾಯಿತು. ಆದರೆ ಸಂವಹನದ ಕೊರತೆಯಿಂದ ಅದು ವೈರಲ್ ಆಗಿದೆ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ," ಎಂದು ಅವರು ವಿನಂತಿಸಿದ್ದಾರೆ.
ಉಸ್ತಾದ್ ಅನ್ಸಾರಿ ಸುಹ್ರಿ ಅವರ ತೀಕ್ಷ್ಣ ಪ್ರತಿಕ್ರಿಯೆ
ಈ ಘಟನೆಯ ಕುರಿತು ಕೇರಳದ ಪ್ರಮುಖ ಮುಸ್ಲಿಂ ನಾಯಕ ಉಸ್ತಾದ್ ಅನ್ಸಾರಿ ಸುಹ್ರಿ ಅವರು ಫೇಸ್ಬುಕ್ ವಿಡಿಯೋ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. "ನೀವು ವಿಷು ಶುಭಾಶಯ ಕೋರಲೇಬೇಕೆಂದಿಲ್ಲ, ಆದರೆ ಶುಭಾಶಯದ ಹೆಸರಿನಲ್ಲಿ ಕೋಮುದ್ವೇಷ ಹಚ್ಚಬೇಡಿ. ಇಂತಹ ಕೃತ್ಯಗಳು ಸಮಾಜದಲ್ಲಿ ಶಾಂತಿ ಕದಡಲು ದಾರಿ ಮಾಡಿಕೊಡುತ್ತವೆ. ಕೆಲವು ತಪ್ಪುಗಳು ಮನುಷ್ಯನ ಜೀವಕ್ಕೆ ಬೆಲೆ ತೆರುವಂತೆ ಮಾಡುತ್ತವೆ," ಎಂದು ಅವರು ಎಚ್ಚರಿಸಿದ್ದಾರೆ.
"ಒಂದು ಸಮುದಾಯವು ಅತ್ಯಂತ ಗೌರವದಿಂದ ಕಾಣುವ ದೈವದ ಮುಂದೆ ಮಾಂಸಾಹಾರವನ್ನು ಚಿತ್ರಿಸಬಾರದು ಎಂಬ ಕನಿಷ್ಠ ಜ್ಞಾನ ಚಿಕ್ಕ ಮಕ್ಕಳಿಗೂ ಇರುತ್ತದೆ. ಇಂತಹ ಕೆಲಸಗಳಿಂದ ಸಾಮಾನ್ಯ ಹಿಂದೂ ಸಹೋದರರ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಮೂಡುವಂತೆ ಮಾಡಲಾಗುತ್ತಿದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅವರು ನೆಯ್ಯಾಟ್ಟಿಂಕರ ದೇವಸ್ಥಾನವೊಂದರಲ್ಲಿ ಮದ್ಯದ ಬಾಟಲಿಗಳು ಪತ್ತೆಯಾದ ಘಟನೆಯನ್ನು ಸ್ಮರಿಸುತ್ತಾ, "ಯಾರೇ ಧಾರ್ಮಿಕ ನಿಂದನೆ ಮಾಡಿದರೂ ಅದನ್ನು ಸಮಾನವಾಗಿ ಖಂಡಿಸಬೇಕು. ಆಯಾ ವ್ಯಕ್ತಿಯ ಧರ್ಮ ಅಥವಾ ವಸ್ತ್ರ ನೋಡಿ ವಿರೋಧದ ತೀವ್ರತೆ ಬದಲಾಗಬಾರದು. ಎಲ್ಲಿ ನಿಂದನೆಯಾದರೂ ಅಲ್ಲಿ ನ್ಯಾಯಯುತವಾಗಿ ಪ್ರತಿಕ್ರಿಯಿಸುವುದೇ ಧರ್ಮ," ಎಂದು ಅವರು ನುಡಿದಿದ್ದಾರೆ.


