ಬೆಳೆ ನಾಶ ಮಾಡೋ ಕಾಡು ಹಂದಿಗಳನ್ನು ಬೇಟೆಯಾಡಿ ರೈತರಿಗೆ ಹಂದಿ ಬೇಟೆಗೆ ಅವಕಾಶ ನೀಡಿದ ಹೈಕೋರ್ಟ್

ತಿರುವನಂತಪುರಂ(ಜು.23): ಕೇರಳದಲ್ಲಿ ಆನೆಗಳ ಹಬ್ಬ ನಡೆಯುತ್ತಿರುವ ಮಧ್ಯೆಯೇ ಇದೀಗ ವನ್ಯ ಜೀವಿಗಳಿಗೆ ಸಂಬಂಧಿಸಿ ಮಹತ್ವದ ಆದೇಶ ಹೊರಬಿದ್ದಿದೆ. ಕೆಲವೇ ದಿನಗಳ ಹಿಂದೆ ಕೇರಳದ ವಡಕ್ಕುನಾಥ ದೇವಸ್ಥಾನದಲ್ಲಿ ಆನೆಗಳ ಆರೋಗ್ಯ ವೃದ್ಧಿಗಾಗಿ ಆನಯೂಟ್ಟ್(ಆನೆಗೆ ತಿನ್ನಿಸುವುದು) ಕಾರ್ಯಕ್ರಮ ಆರಂಭವಾಗಿತ್ತು. ಒಂದೆಡೆ ಆನೆಗಳ ರಕ್ಷಣೆಯ ಕೆಲಸವಾಗುತ್ತಿದ್ದರೆ ಇನ್ನೊಂದೆಡೆ ಹಂದಿಗಳಿಗೆ ಕಂಟಕವಾಗುವ ಆದೇಶವನ್ನು ಕೋರ್ಟ್ ನೀಡಿದೆ.

Add Asianetnews Kannada as a Preferred SourcegooglePreferred

ರೈತರ ಬೆಳೆ ನಾಶ ಮಾಡುವ ಕಾಡು ಹಂದಿಗಳನ್ನು ಬೇಟೆಯಾಡಲು ಕೇರಳ ಹೈಕೋರ್ಟ್ ರೈತರಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ವಯನಾಡು ಜಿಲ್ಲೆಯ ರೈತರಿಗೆ ದೊಡ್ಡ ನಿರಾಳತೆಯನ್ನು ಕೊಟ್ಟ ಈ ಆದೇಶದಲ್ಲಿ ರೈತರ ಬೆಳೆಯನ್ನು ಹಾನಿ ಮಾಡುವ ಹಂದಿಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.

ಕೇರಳದಲ್ಲಿ ವಿಶೇಷ ಆನೆ ಹಬ್ಬ; ಒಂದು ತಿಂಗಳು ಗಜರಾಜನಿಗೆ ಚಿಕಿತ್ಸೆ, ಆರೈಕೆ!

ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್, ಕಾಡುಹಂದಿಗಳನ್ನು ಬೇಟೆಯಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11 (1) (ಬಿ) ಪ್ರಕಾರ ಮುಖ್ಯ ವೈಲ್ಡ್ ಲೈಫ್ ವಾರ್ಡನ್ ರೈತರಿಗೆ ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ.

ರಾಜ್ಯ ಮೆಷಿನರಿ ಕಾಡುಹಂದಿ ದಾಳಿಯನ್ನು ನಿಯಂತ್ರಿಸಿ ರೈತರ ಬೆಳೆ ಕಾಪಾಡಲು ಸಂಪೂರ್ಣ ವಿಫಲವಾಗಿರುವ ಕಾರಣ ಇಂತಹ ಆದೇಶವನ್ನು ಹೊರಡಿಸುವುದು ಅಗತ್ಯವಾಗಿದೆ ಎಂದು ನ್ಯಾ.ಪಿ.ಬಿ. ಸುರೇಶ್ ಕುಮಾರ್ ಮಧ್ಯಂತರ ಆದೇಶ ಹೊರಡಿಸುವಾಗ ತಿಳಿಸಿದ್ದಾರೆ. ಮುಖ್ಯ ವನ್ಯಜೀವಿ ಅಧಿಕಾರಿ ಅರ್ಜಿದಾರರಿಗೆ ಹಂದಿ ಬೇಟೆಯಾಡಲು ಅನುಮತಿ ನೀಡಬೇಕಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 62 ರ ಅಡಿಯಲ್ಲಿ ಕಾಡುಹಂದಿಗಳನ್ನು ಬೆಳೆ ನಾಶಕ ಎಂದು ಎಂದು ಘೋಷಿಸಬೇಕೆಂದು ಕೋರಿ ಆರು ರೈತರ ಗುಂಪು ಕಳೆದ ವರ್ಷ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು.

ಈಗಾಗಲೇ ಇರುವ ಕಾನೂನಿನಂತೆ ಕಾಡು ಹಂದಿಯನ್ನು ವನ್ಯ ಜೀವಿ ಎಂದು ಗುರುತಿಸಲಾಗುತ್ತಿದ್ದು, ಬೆಳೆ ಸಂರಕ್ಷಿಸುವುದು ಸೇರಿ ಬೇರೆ ಯಾವುದೇ ಕಾರಣಕ್ಕೂ ಸಾಯಿಸುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಕ್ರಿಮಿನಲ್ ಅಪರಾಧವಾಗಿದೆ. ಈ ಕಾನೂನಿನ ಭಯದಿಂದ ಬೆಳೆ ನಾಶವಾದರೂ ಜನರು ಹಂದಿಗಳಿಗೆ ಅಪಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಈ ನಿಟ್ಟಿನಲ್ಲಿ ಕಾಡುಹಂದಿಗಳಿಂದ ಸತತ ಬೆಳೆ ಕಳೆದುಕೊಂಡ ಕೋಝಿಕ್ಕೋಡ್ ರೈತರು ವಕೀಲ ಅಮಲ್ ದರ್ಶನ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ಸೆಕ್ಷನ್ 62ರ ಪ್ರಕಾರ ಕಾಡು ಪ್ರಾಣಿಗಳನ್ನು ಕೀಟ ಎಂಬುದಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಆದೇಶ ನೀಡಬಹುದು. ಈ ಮೂಲಕ ಇಲಿ, ಬಾವಲಿ, ಕಾಗೆಗಳನ್ನು ಸಾಯಿಸುವಂತೆ ಹಂದಿಯನ್ನೂ ಸಾಯಿಸಲು ಅವಕಾಶ ನೀಡಲು ಸಾಧ್ಯವಾಗುತ್ತದೆ.