ಬೆಟ್ಟದ ಕಣಿವೆಗಳಲ್ಲಿ ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಕೀಡಾ ಜಡಿ ಸಿಗುತ್ತದೆ.  ಹಚ್ಚ ಹಸಿರಿನಿಂದ ಕೂಡಿರುವ ಕಣಿವೆಗಳ ನಡುವೆ ಇದು ಸಿಗುತ್ತದೆ. ಆದರೆ, ಹಿಮಮಳೆಯ ಕಾರಣದಿಂದಾಗಿ ಇವುಗಳು ಈಗ ಅಂದಾಜು 3 ಅಡಿಯ ಹಿಮದಲ್ಲಿ ಹೂತುಹೋಗಿದೆ ಎಂದು ಹೇಳಲಾಗಿದೆ. 

ನವದೆಹಲಿ (ಮೇ.6): ಪ್ರತಿ ಕೆಜಿಗೆ 10 ರಿಂದ 12 ಲಕ್ಷ ಬೆಲೆಯಿರುವ ಹಿಮಾಲಯದ ವಯಾಗ್ರಾ ಎಂದೇ ಹೆಸರು ಪಡೆದುಕೊಂಡಿರುವ 'ಕೀಡಾ ಜಡಿ' ಸಂಗ್ರಹಕ್ಕೆ ತೆರಳುವವರ ಪಾಲಿಗೆ ನಿರಾಸೆಯಾಗಿದೆ. ಬೇಸಿಗೆ ಸಮಯದಲ್ಲಿ ಸುರಿದ ಭಾರೀ ಮಳೆ ಹಾಗೂ ಹಿಮಪಾತ ದೊಡ್ಡ ಮಟ್ಟದಲ್ಲಿ ಅಡ್ಡಿಪಡಿಸಿದೆ. ಕೀಡಾ ಜಡಿ ಎನ್ನುವುದು ಕಾರ್ಡಿಸೆಪ್ಸ್‌ ಎನ್ನುವ ಕಂಬಳಿ ಹುಳದ ಮಾದರಿಯ ಶಿಲೀಂಧ್ರದ ಫಂಗಸ್‌ ಆಗಿದ್ದು, ಸುಮಾರು 12 ಸಾವಿರ ಅಡಿ ಎತ್ತರದಲ್ಲಿರುವ ಹಿಮಾಲಯದ ಪ್ರದೇಶಗಳಲ್ಲಿ ಮಾತ್ರವೇ ಬೆಳೆಯುತ್ತದೆ. ಹಾಗಂತ ಈ ಕಾಮೋತ್ತೇಜಕ ಕೀಡಾ ಜಡಿ ವರ್ಷಕಾಲಾವಧಿ ಸಿಗೋದಿಲ್ಲ. ಏಪ್ರಿಲ್‌ನ ಅಂತಿಮ ವಾರದಿಂದ ಜೂನ್‌ ಮಧ್ಯಭಾಗದವರೆಗೆ ಸಂಗ್ರಹಕ್ಕೆ ಹೋದವರಿಗೆ ಮಾತ್ರವೇ ಇದು ಸಿಗುತ್ತದೆ. ತೀರಾ ಅಲ್ಪ ಅವಧಿಯಲ್ಲಿಯೇ ಇದನ್ನು ಸಂಗ್ರಹ ಮಾಡಿಕೊಳ್ಳುವ ಇಲ್ಲಿನ ಜನರು ಇದನ್ನು ಮಾರಾಟ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಕಾಮೋತ್ತೇಜಕ ಎಂದು ಹೇಳಲಾಗಿರುವ ಕೀಡಾ ಜಡಿ ಎಂದರೆ, ಕೀಟದ ಸಸ್ಯ ಎಂದರ್ಥವಾಗಿದೆ. ಇದನ್ನು ಸಂಗ್ರಹ ಮಾಡುವವರೇ ಹೇಳುವ ಪ್ರಕಾರ ಪ್ರಸ್ತುತ ಇದಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 10 ರಿಂದ 12 ಲಕ್ಷ ರೂಪಾಯಿ ಬೆಲೆಯಿದೆ. ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಕಣಿವೆಗಳು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಆದರೆ, ಈ ಬಾರಿಯ ಮಳೆ ಹಾಗೂ ಹಿಮಪಾತದ ಕಾರಣದಿಂದಾಗಿ ಕೀಡಾ ಜಡಿ ಬಹುತೇಕವಾಗಿ ಹಿಮದ ಅಡಿಯಲ್ಲಿ ಮುಳುಗಿಹೋಗಿದೆ.

ಈ ಬಾರಿ ಅನಿರೀಕ್ಷಿತವಾಗಿ ಸುರಿದ ಮಳೆ ಹಾಗೂ ಹಿಮಪಾತ ಇವರೆಲ್ಲರ ಆಸೆಯನ್ನು ಮಣ್ಣುಪಾಲು ಮಾಡಿದೆ. ಇದನ್ನು ಸಂಗ್ರಹ ಮಾಡುವ ಸಲುವಾಗಿಯೇ ವರ್ಷದ ಈ ಸಮಯದಲ್ಲಿ ದೊಡ್ಡ ದೊಡ್ಡ ತಂಡಗಳು ಹಿಮಾಲಯದಲ್ಲಿ ಚಾರಣ ಮಾಡುತ್ತವೆ. ಪಿಥೋರಗಡ್‌, ಮುನ್ಶ್ಯಾರಿ ಬ್ಲಾಕ್‌, ಮಿಲಾಂ, ಬುಯಿ ಪಾಟೋ, ಸೈಫೋಲೋ, ಕ್ವಿರಿಜಿಮಿಯಾ, ಕುಲ್ತುಂ, ಧುರಾಟೋಲಿ ಗ್ರಾಮಗಳ ಹೆಚ್ಚಿನ ಜನರು ಬೆಟ್ಟದ ಮೇಲೇರಿ ವಿವಿಧ ಕಣಿವೆಗಳಲ್ಲಿ ಕೀಡಾ ಜಡಿ ಸಂಗ್ರಹ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಎಲ್ಲೂ ಇದರ ಸಣ್ಣ ಸುಳಿವು ಕೂಡ ಸಿಗದ ಕಾರಣ ನಿರಾಸೆಯಿಂದ ವಾಪಸಾಗಿದ್ದಾರೆ.

ಸಾಮಾನ್ಯವಾಗಿ ಇಲ್ಲಿನ ಗ್ರಾಮಸ್ಥರು ಈ ಸಮಯದಲ್ಲಿ ಕಣಿವೆಗಳನ್ನು ಏರುವುದು ಮಾತ್ರವಲ್ಲದೆ, ಅಲ್ಲಿಯೇ ಟೆಂಟ್‌ ಹಾಕಿಕೊಂಡು, ಇಡೀ ದಿನ ಈ ಮೂಲಿಕೆಗಳನ್ನು ಹುಡುಕಾಡುತ್ತಾರೆ. 'ಇಲ್ಲ, ಈ ಬಾರಿ ಇಡೀ ಕಣಿವೆಯಲ್ಲಿ ಹಿಮಪಾತ ಹಾಗೂ ಮಳೆ ಬಂದಿದೆ. ಎಲ್ಲವೂ ಹಿಮದ ಅಡಿಯಲ್ಲಿ ಮುಳುಗಿಹೋಗಿದೆ. ಹಾಗಾಗಿ ಈಗ ಈ ಮೂಲಿಕೆಯನ್ನು ಪಡೆದುಕೊಳ್ಳುವುದು ಬಹಳ ಕಷ್ಟ' ಎಂದು ಮುನ್ಶ್ಯಾರಿ ಗ್ರಾಮದ ನಿವಾಸಿ ಸುಂದರ್‌ ಕೊರಂಗಾ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಧಾರ್ಚುಲಾ ಗ್ರಾಮದ ವಿಕ್ಕಿ ಚಿರಾಲ್‌ ಕೂಡ ಈ ಬಗ್ಗೆ ಮಾತನಾಡಿದ್ದು, 'ಇಲ್ಲಿನ ಮೂರು ಸಾವಿರಕ್ಕೂ ಅಧಿಕ ಕುಟುಂಬಗಳು ಜೀವನೋಪಾಯಕ್ಕಾಗಿ ಕೀಡಾ ಜಡಿಯನ್ನು ಅವಲಂಗಿಸಿದೆ. ಹಿಮ ಕರಗಿ ಇಳಿದು ಹೋದ ಬಳಿಕ ನಾವು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದನ್ನು ಸಂಗ್ರಹಿಸಲು ಯೋಜಿಸಿದ್ದೇವೆ. ಆದರೆ ಹಿಮ ಕರಗದೆ ಇದ್ದರೆ ನಮಗೆ ಅದರಿಂದ ಬಹಳ ನಷ್ಟವಾಗಲಿದೆ. ಮೂಲಿಕೆಗಳನ್ನು ಹಿಮ ಹಾಳುಗೆಡವಿಲ್ಲ ಎಂದು ನಮ್ಮ ನಂಬಿಕೆ' ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲಕ್ಕೆ ಭಾರೀ ಬೇಡಿಕೆ

ಹಿಮಾಲಯದ ಪ್ರದೇಶ ಮಾತ್ರವಲ್ಲದೆ, ಟಿಬೇಟ್‌ನ ಪ್ರಸ್ಥಭೂಮಿಗಳಲ್ಲಿ ಮಾತ್ರ ಇದು ಸಿಗುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ದೇಶದಲ್ಲೂ ಅಪಾರ ಬೇಡಿಕೆ ಇದೆ. ಕೆಲವು ದಿನಗಳ ಹಿಂದೆ ಕೀಡಾ ಜಡಿಯನ್ನು ಸಂಗ್ರಹಿಸಲು ನೇಪಾಳದಿಂದ ಹೋಗಿದ್ದ ಐವರು ನಾಪತ್ತೆಯಾಗಿದ್ದರು. ಅವರು ಹಿಮಪಾತದಲ್ಲಿ ಮುಳುಗಿ ಹೋಗಿರಬಹುದು ಎಂದು ಶಂಕೆ ಮಾಡಲಾಗಿತ್ತು.

ಸೆಕ್ಸ್‌ನಲ್ಲಿ ಖುಷಿ ಹೆಚ್ಚಾಗಲು ವಯಾಗ್ರ ಸೇವನೆ, ರಕ್ತ ಹೆಪ್ಪುಗಟ್ಟಿ ವ್ಯಕ್ತಿ ಸಾವು!