ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ Kashmiri Pandit ಹತ್ಯೆ: ಉಗ್ರರಿಂದ ದುಷ್ಕೃತ್ಯ
ಶೋಪಿಯಾನ್ನ ಚೌಧರಿ ಗುಂಡ್ನಲ್ಲಿ ನಾಗರಿಕ ಶ್ರೀ ಪೂರನ್ ಕೃಷ್ಣನ್ ಭಟ್ ತಮ್ಮ ಹಣ್ಣಿನ ತೋಟಕ್ಕೆ ಹೋಗುತ್ತಿದ್ದ ವೇಳೆ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನ ಹತ್ಯೆಯಾಗಿದೆ. ಉಗ್ರರು ಶನಿವಾರ ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಕಾಶ್ಮೀರಿ ಪಂಡಿತನನ್ನು ಗುರಿಯಾಗಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದು, ಮನೆಯಿಂದ ಅವರ ಹಣ್ಣಿನ ತೋಟಕ್ಕೆ ಹೋಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಹತ್ಯೆಗೀಡಾದವನ್ನು ಪೂರನ್ ಕೃಷ್ಣನ್ ಭಟ್ ಎಂದು ಗುರುತಿಸಲಾಗಿದ್ದು, ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅವರ ಮನೆಯ ಬಳಿ ಶನಿವಾರ ಹತ್ಯೆ ಮಾಡಲಾಗಿದೆ. ಹಾಗೂ, ಅವರನ್ನು ಶೋಪಿಯಾನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ಈ ಪ್ರದೇಶವನ್ನು ಪೊಲೀಸರು ಹಾಗೂ ಸೇನೆಯವರು ಸುತ್ತುವರಿದಿದ್ದು, ಉಗ್ರರನ್ನು ಹಿಡಿಯಲು ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದೂ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ್ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ
ಈ ಘಟನೆ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಶೋಪಿಯಾನ್ನ ಚೌಧರಿ ಗುಂಡ್ನಲ್ಲಿ ನಾಗರಿಕ ಶ್ರೀ ಪೂರನ್ ಕೃಷ್ಣನ್ ಭಟ್ ತಮ್ಮ ಹಣ್ಣಿನ ತೋಟಕ್ಕೆ ಹೋಗುತ್ತಿದ್ದ ವೇಳೆ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟರು. ಈ ಪ್ರದೇಶವನ್ನು ಸುತ್ತುವರಿಯಲಾಗಿದೆ. ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ಮಾಡಿದ್ದ ಲಷ್ಕರ್ ಭಯೋತ್ಪಾದಕನ ಕೊಂದು ಹಾಕಿದ ಸೇನೆ!
ಕಾಶ್ಮೀರಿ ಪಂಡಿತರ ಪ್ರತಿಭಟನೆ
ಜಮ್ಮು ಕಾಶ್ಮೀರದ ಶೋಪಿಯಾನ್ನಲ್ಲಿ ಕಾಶ್ಮೀರಿ ಪಂಡಿತ ಪೂರನ್ ಕೃಷ್ಣನ್ ಭಟ್ ಹತ್ಯೆ ಬಳಿಕ ಆಕ್ರೋಶಗೊಂಡ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮುವಿಗೆ ವಲಸೆ ಬಂದು ಅಲ್ಲೇ ಕೆಲಸ ಮಾಡುತ್ತರುವ ನೂರಾರು ಕಾಶ್ಮೀರಿ ಪಂಡಿತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಮಾಹಿತಿ ನೀಡಿವೆ.
1990 ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿತ್ತು. ಆ ವೇಳೆ ಹಲವು ಕಾಶ್ಮೀರಿ ಪಂಡಿತರ ಹತ್ಯೆಯಾಗಿತ್ತು. ಆದರೂ, ಕಾಶ್ಮೀರಿ ಹಿಂದೂ ಪೂರನ್ ಕೃಷ್ಣನ್ ಭಟ್ ಕಾಶ್ಮೀರ ಕಣಿವೆ ತೊರೆಯಲಿಲ್ಲ. ಇನ್ನು, ಗುಜರಾತ್ನಲ್ಲಿ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ, ಕಾಶ್ಮೀರ ವಿಚಾರ ಈಗ ಪರಿಹರಿಸಲಾಗಿದೆ ಎಂದು ಹೇಳೀದ ಬಳಿಕ ಈ ಹತ್ಯೆಯಾಗಿದೆ.
“ಶೋಪಿಯಾನ್ನ ಚೌಧರಿ ಗುಂಡ್ನಲ್ಲಿ ಮತ್ತೊಬ್ಬ ಕೆಪಿ (ಕಾಶ್ಮೀರಿ ಪಂಡಿತ್) ವಲಸಿಗರಲ್ಲದವರನ್ನು ಕೊಲ್ಲಲಾಯಿತು… ಅಕ್ಟೋಬರ್ 13 ರಂದು ನಾವು ಮಾಡಿದ ಟ್ವೀಟ್ಗಳ ಹೊರತಾಗಿಯೂ, ವಾಸ್ತವ ಪರಿಸ್ಥಿತಿ ಏನೂ ಬದಲಾಗಿಲ್ಲ. ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಶ್ರೀ ಅಮಿತ್ ಶಾ ಅವರಿಗೆ ಇದು ಸಂದೇಶವಾಗಿದೆ” ಎಂದು ಕಣಿವೆಯನ್ನು ತೊರೆಯದ ಕಾಶ್ಮೀರಿ ಪಂಡಿತರನ್ನು ಪ್ರತಿನಿಧಿಸುವ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್ಎಸ್) ಟ್ವೀಟ್ ಮಾಡಿದೆ.
ಈ ಮಧ್ಯೆ, ಶೋಪಿಯಾನ್ನ ಉಪ ಆಯುಕ್ತ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಶೋಪಿಯಾನ್) "ಕಣಿವೆಯಲ್ಲಿ ಸಹಜತೆಯನ್ನು ತೋರಿಸಬೇಕಾಗಿರುವ ಕಾರಣ ಸಂತ್ರಸ್ತೆಯ ಕುಟುಂಬಕ್ಕೆ ಆದಷ್ಟು ಬೇಗ ಅಂತ್ಯಕ್ರಿಯೆ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ" ಎಂದು ಕೆಪಿಎಸ್ಎಸ್ ಅಧ್ಯಕ್ಷ ಸಂಜಯ್ ಟಿಕೂ ಆರೋಪಿಸಿದ್ದಾರೆ.