ಪೊಲೀಸರಿಂದಲೇ ಇನ್ನು ಉಗ್ರರ ಅಂತ್ಯಕ್ರಿಯೆ| ಕುಟುಂಬಕ್ಕೆ ಶವ ಹಸ್ತಾಂತರ ಇಲ್ಲ: ಕಾಶ್ಮೀರ ನಿರ್ಧಾರ|  ಅಂತಿಮ ಯಾತ್ರೆ ವೇಳೆ ಸಾವಿರಾರು ಜನರು ಸೇರಿ ಪ್ರಚೋದನಕಾರಿ ಜಿಹಾದಿ ಘೋಷಣೆಗಳನ್ನು ಕೂಗುತ್ತಾರೆ

ಶ್ರೀನಗರ(ಏ.26): ಜಮ್ಮು-ಕಾಶ್ಮೀರದಲ್ಲಿ ಹತ ಉಗ್ರರ ಶವಗಳನ್ನು ಇನ್ನು ಕುಟುಂಬದವರಿಗೆ ನೀಡದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ. ಇದರ ಬದಲು ತಾವೇ ಈ ಶವಗಳನ್ನು ದಫನ್‌ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.

Add Asianetnews Kannada as a Preferred SourcegooglePreferred

ಹತ ಉಗ್ರರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದರೆ ಆ ಶವಗಳ ಅಂತಿಮ ಯಾತ್ರೆ ವೇಳೆ ಸಾವಿರಾರು ಜನರು ಸೇರಿ ಪ್ರಚೋದನಕಾರಿ ಜಿಹಾದಿ ಘೋಷಣೆಗಳನ್ನು ಕೂಗುತ್ತಾರೆ. ಇದರಿಂದ ಉಗ್ರ ಚಟುವಟಿಕೆಗೆ ಸುಖಾಸುಮ್ಮನೆ ಸರ್ಕಾರವೇ ಉತ್ತೇಜನ ನೀಡಿದಂತಾಗುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಪೊಲೀಸರೇ ಶವಗಳನ್ನು ಹೂಳುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

26/11 ರೀತಿ ಮತ್ತೊಂದು ದಾಳಿಗೆ ಪಾಕ್ ಸಂಚು

ಇದಕ್ಕೆ ಪೂರಕವಾಗಿ ಇತ್ತೀಚೆಗೆ ಹತರಾದ ಅಲ್‌ ಖೈದಾ ಸಂಘಟನೆಯ ಸೋದರ ಸಂಘಟನೆ ‘ಅನ್ಸರ್‌ ಗಝ್ವಾತುಲ್‌ ಹಿಂದ್‌’ನ ನಾಲ್ವರು ಉಗ್ರರನ್ನು ಸರ್ಕಾರಿ ಸ್ಮಶಾನದಲ್ಲಿ ಪೊಲೀಸರೇ ಧಾರ್ಮಿಕ ವಿಧಿವಿಧಾನ ಅನುಸರಿಸಿ ದಫನ್‌ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂಬ ದಾಖಲೆಗಳು ತನಗೆ ಲಭ್ಯವಾಗಿವೆ ಎಂದು ಟೀವಿ ಚಾನೆಲ್‌ ಒಂದು ವರದಿ ಮಾಡಿದೆ.

‘ಶವವನ್ನು ಕುಟುಂಬಕ್ಕೆ ಕೊಡಬೇಕು ಎಂಬ ನಿಯಮವೇನಿಲ್ಲ. ನೇಣುಗಂಬಕ್ಕೇರಿದ ಸಂಸತ್‌ ದಾಳಿ ಉಗ್ರ ಅಫ್ಜಲ್‌ ಗುರುವಿನ ಶವವನ್ನು ದಿಲ್ಲಿಯ ತಿಹಾರ್‌ ಜೈಲಿನಲ್ಲೇ ಹೂಳಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.