ಕಾಂಗ್ರೆಸ್ನಲ್ಲಿ ಭಾರೀ ಬದಲಾವಣೆ ಆಗಲೇಬೇಕು: ಸಿಬಲ್
* ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪಕ್ಷದ ಹೈಕಮಾಂಡ್ ವಿರುದ್ಧ ಮತ್ತೊಮ್ಮೆ ಅಸಮಾಧಾನ
* ಕಾಂಗ್ರೆಸ್ನಲ್ಲಿ ಆಮೂಲಾಗ್ರ ಬದಲಾವಣೆ ಆಗಲೇಬೇಕು: ಸಿಬಲ್
* ಪಕ್ಷ ಜಡತ್ವ ತೊಡೆದು ಮೇಲೇಳಬೇಕು
ನವದೆಹಲಿ(ಜೂ.14): ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪಕ್ಷದ ಹೈಕಮಾಂಡ್ ವಿರುದ್ಧ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಎಲ್ಲಾ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲೇ ಬೇಕಾದ ಅಗತ್ಯವಿದೆ. ಕಾಂಗ್ರೆಸ್ ಒಂದು ನಿಷ್ಕಿ್ರಯ ಪಕ್ಷವಾಗಿ ಇರದೇ ಬಿಜೆಪಿಗೆ ಪರ್ಯಾಯವಾಗಿ ಗುರುತಿಸಿಕೊಳ್ಳುವ ಅಗತ್ಯವಿದೆ ಎಂದು ಕಪಿಲ್ ಸಿಬಲ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಪ್ರಸ್ತುತ ಬಿಜೆಪಿ ವಿರುದ್ಧ ಪ್ರಬಲ ರಾಜಕೀಯ ಪರ್ಯಾಯ ಇಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಆಳುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಕಾಂಗ್ರೆಸ್ ಗುರುತಿಸಿಕೊಳ್ಳಬಹುದಾಗಿದೆ.
ಇತ್ತೀಚಿನ ಪಂಚರಾಜ್ಯ ಚುನಾವಣೆಯ ಸೋಲಿನ ಪರಾಮರ್ಶೆಗೆ ಸಮಿತಿಯನ್ನು ರಚಿಸಿರುವುದು ಸ್ವಾಗತಾರ್ಹ, ಆದರೆ, ಸಮಿತಿಯ ಸಲಹೆಗಳನ್ನು ಅನುಷ್ಠಾನ ಮಾಡದೇ ಇದ್ದರೆ ಯಾವುದೇ ಪ್ರಯೋಜನ ಇಲ್ಲ. ಕಾಂಗ್ರೆಸ್ ಪುನರುತ್ಥಾನ ಆಗುವುದು ಭಾರತಕ್ಕೆ ಅಗತ್ಯವಿದೆ. ಇದು ಸಾಧ್ಯವಾಗಬೇಕೆಂದರೆ ಪಕ್ಷದಲ್ಲಿ ಆಮೂಲಾಗ್ರ ಬದಲಾಣೆಯ ಅಗತ್ಯವಿದೆ’ ಎಂದು ಹೇಳಿದ್ದಾರೆ.