Kanpur Violence: ಮುಖ್ತಾರ್ ಬಾಬಾನ 'ಬಾಬಾ ಬಿರಿಯಾನಿ' ಹೋಟೆಲ್ ಮುಚ್ಚಿಸಿದ ಯೋಗಿ ಸರ್ಕಾರ!
ಪ್ರವಾದಿ ಪೈಗಂಬರ್ ಕುರಿತಾಗಿ ನೂಪುರ್ ಶರ್ಮ ಹೇಳಿಕೆಯ ಕುರಿತು ಕಾನ್ಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸಾಥ್ ನೀಡಿದ್ದ 'ಬಾಬಾ ಬಿರಿಯಾನಿ' ಆಹಾರ ಮಳಿಗೆಯ ಮಾಲೀಕ ಮುಖ್ತಾರ್ ಬಾಬಾನನ್ನು ಈಗಾಗಲೇ ಉತ್ತರ ಪ್ರದೇಶ ಜೈಲಿಗೆ ಕಳುಹಿಸಿದೆ. ಇದರ ಬೆನ್ನಲ್ಲಿಯೇ ಬಾಬಾ ಬಿರಿಯಾನಿ ಮಳಿಗೆಯ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ ಎನ್ನುವ ಕಾರಣಕ್ಕೆ ಎಫ್ಎಸ್ಎಸ್ಎಐ ಎಲ್ಲಾ ಅಂಗಡಿಗಳನ್ನು ಸೀಲ್ ಮಾಡಿದೆ.
ಕಾನ್ಪುರ (ಜೂನ್ 27): ಕಾನ್ಪುರ ಹಿಂಸಾಚಾರದಲ್ಲಿ (Kanpur Violence) ಭಾಗಿಯಾಗಿರುವ 'ಬಾಬಾ ಬಿರಿಯಾನಿ' (Baba Biryani) ಆಹಾರ ಮಳಿಗೆಯ ಮಾಲೀಕ ಮುಖ್ತಾರ್ ಬಾಬಾ (Mukhtar baba) ವಿರುದ್ಧ ಸೋಮವಾರ ಉತ್ತರ ಪ್ರದೇಶ ಸರ್ಕಾರ (Uttar Pradesh Govt) ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಹಲವು ಇಲಾಖೆಗಳ ತಂಡಗಳು ಏಕಕಾಲದಲ್ಲಿ ನಗರದಲ್ಲಿ ಮುಖ್ತಾರ್ ಬಾಬಾ ನಿರ್ಮಿಸಿರುವ ಬಾಬಾ ಬಿರಿಯಾನಿಯ ಹಲವು ರೆಸ್ಟೋರೆಂಟ್ಗಳಲ್ಲಿ ಕಾರ್ಯಾಚರಣೆ ನಡೆಸಿ, ಆಹಾರದ ಸ್ಯಾಂಪಲ್ (Food Sample) ಪರಿಶೀಲನೆ ನಡೆಸಿದೆ.
ಜಜ್ಮೌನ ನಗರದ ಎರಡು ಸಂಸ್ಥೆಗಳ ಮೇಲೆ ದಾಳಿಗಳು ನಡೆದಿದ್ದು, ಇದರೊಂದಿಗೆ ಸ್ವರೂಪ್ ನಗರ, ಬೇಕನಂಗಜೆ, ಸೌತೆಕ್ಸ್ ಮಾಲ್ ಮತ್ತು ಆರ್ಯನಗರದಲ್ಲಿ ನಿರ್ಮಿಸಲಾಗಿದ್ದ ಬಾಬಾ ಬಿರಿಯಾನಿ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ. ಆಹಾರ ಇಲಾಖೆ, ಆಡಳಿತ ಮತ್ತು ಪೊಲೀಸ್ ತಂಡ ದಾಳಿಯಲ್ಲಿ ತೊಡಗಿದೆ ಎಂದು ಎಡಿಎಂ ಸಿಟಿ ಅತುಲ್ ಕುಮಾರ್ ಹೇಳಿದ್ದು, ಎಲ್ಲಾ ಮಳಿಗೆಗಳಲ್ಲಿ ಆಹಾರದ ಸ್ಯಾಂಪಲ್ ಅನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಬಿರಿಯಾನಿ ಆಹಾರದ ಮಾದರಿಗಳು ಗುಣಮಟ್ಟವನ್ನು ಕಾಪಾಡಿಕೊಳ್ಳದ ಹಿನ್ನಲೆಯಲ್ಲಿ ಎಫ್ಎಸ್ಎಸ್ಎಐ ಎಲ್ಲಾ ಅಂಗಡಿಗಳಿಗೆ ಸೀಲ್ ಮಾಡಿದೆ ಎಂದು ವರದಿಯಾಗಿದೆ. ಮ್ಯಾಜಿಸ್ಟ್ರೇಟ್ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೂನ್ 3 ರಂದು ಕಾನ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ 'ಬಾಬಾ ಬಿರಿಯಾನಿ' ಮಾಲೀಕ ಮುಖ್ತಾರ್ ಬಾಬಾ ಅವರು ಪ್ರಮುಖ ಪಾತ್ರ ವಹಿಸಿದ್ದರು, ಗಲಭೆ ಹೆಚ್ಚಳಕ್ಕೆ ಇವರ ಪಾತ್ರವೇ ಪ್ರಮುಖವಾಗಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಇದರ ಬೆನ್ನಲ್ಲಿಯೇ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಬಾಬಾ ಬಿರಿಯಾನಿ ಮಾಲೀಕ ಮುಕ್ತಾರ್ ಬಾಬಾ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟನೆ ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಸಾಕ್ಷ್ಯಾಧಾರಗಳಿದ್ದರೆ ಸರ್ಕಾರ ತನಿಖೆ ನಡೆಸಲಿ ಎಂದಿದ್ದಾರೆ. ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಮಜಾನಕಿ ದೇವಸ್ಥಾನದ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಮಳಿಗೆಗಳನ್ನು ನಿರ್ಮಿಸಿದ್ದಾರೆ ಎನ್ನುವ ಬಗ್ಗೆ ಆರೋಪಿ ಮುಖ್ತಾರ್ ಬಾಬಾನ ಸಂಬಂಧಿಕರು ಮಾತನಾಡಿದ್ದು, ದೇವಸ್ಥಾನದ ವಿಚಾರವೇ ಬೇರೆ, ನಮ್ಮ ಅಂಗಡಿಗಳ ವಿಚಾರವೇ ಬೇರೆ. ನಮ್ಮ ಮಾಲೀಕತ್ವದಲ್ಲಿರುವ ಜಮೀನಿನಲ್ಲಿಯೇ ಅಂಗಡಿಗಳನ್ನು ನಿರ್ಮಾಣ ಮಾಡಿದ್ದೇವೆ ಎನ್ನುವ ದಾಖಲೆಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ಹಕ್ಕಿ, ತುರ್ತು ಭೂಸ್ಪರ್ಶ!
ಈ ನಡುವೆ ಕಾನ್ಪುರ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು (Uttar Pradesh Police ) ಮುಕ್ತಾರ್ ಬಾಬಾ ವಿರುದ್ಧ ಇನ್ನೂ ಮೂರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಅರ್ಜಿದಾರರು ರಾಮ್ ಜಾನಕಿ ದೇವಸ್ಥಾನದ ಜಮೀನಿಗೆ ಸಂಬಂಧಿಸಿದಂತೆ ಮುಖ್ತಾರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಕಾನ್ಪುರ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪರಿಗಣಿಸಿ ಮುಖ್ತಾರ್ ಬಾಬಾ ಅವರನ್ನು ಈಗಾಗಲೇ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಆತನ ಕುಟುಂಬ ಸದಸ್ಯರ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಯಾಗ್ರಾಜ್ ಕಲ್ಲು ತೂರಾಟ ಘಟನೆಯ ಆರೋಪಿಗಳ ಮನೆ ಹರಾಜಿಗೆ ನಿರ್ಧಾರ
ಲೈಸೆನ್ಸ್ ಕ್ಯಾನ್ಸಲ್: ಬಾಬಾ ಬಿರಿಯಾನಿ ಹೋಟೆಲ್ ಆಹಾರ ಎಫ್ಎಸ್ಎಸ್ಎಐ (FSSAI) ಗುಣಮಟ್ಟವನ್ನು ಕಾಪಾಡಿಕೊಳ್ಳದ ಹಿನ್ನಲೆಯಲ್ಲಿ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ. ಅದರೊಂದಿಗೆ ಬಾಬಾ ಸ್ವೀಟ್ಸ್ (Baba Sweets )ಮಳಿಗೆಗಳ ಸ್ಯಾಂಪಲ್ ಅನ್ನು ಎಫ್ಎಸ್ಎಸ್ಎಐ ಪರಿಶೀಲನೆ ಮಾಡಿದ್ದು, ಇದನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದೆ. ಹಾಗೇನಾದರೂ, ಇದೂ ಕೂಡ ಕಳಪೆಯಾಗಿದ್ದಲ್ಲಿ ಸ್ವೀಟ್ಸ್ ಮಳಿಗೆಯನ್ನೂ ಮುಚ್ಚಲಾಗುವುದು ಎಂದು ಸರ್ಕಾರ ಹೇಳಿದೆ.