Asianet Suvarna News Asianet Suvarna News

ಉಗ್ರರ ಸಂಪೂರ್ಣ ಮಟ್ಟ ಹಾಕಲು ತಾಕೀತು: ಸಚಿವ ಅಮಿತ್‌ ಶಾ ಮಿಷನ್‌ ಕಾಶ್ಮೀರ ಶುರು!

  • ಸಚಿವ ಅಮಿತ್‌ ಶಾ ಮಿಷನ್‌ ಕಾಶ್ಮೀರ!
  • ಭದ್ರತಾ ಪಡೆಗಳ ಮುಖ್ಯಸ್ಥರ ಜತೆ ಮಾತುಕತೆ
  • ಉಗ್ರರ ಸಂಪೂರ್ಣ ಸದೆಬಡಿಯಲು ತಾಕೀತು
Jammu and Kashmir to become giver not taker region of India Amit Shah begins Mission Kashmir dpl
Author
Bangalore, First Published Oct 24, 2021, 8:05 AM IST

ಶ್ರೀನಗರ(ಅ.24): ಜಮ್ಮು ಮತ್ತು ಕಾಶ್ಮೀರದಲ್ಲಿ(Jammu & Kashmir) ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದ ಹೊರತಾಗಿಯೂ ಭಯೋತ್ಪಾದನಾ ಚಟುವಟಿಕೆಗಳು ಪೂರ್ಣವಾಗಿ ನಿರ್ಮೂಲನೆಯಾಗದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯದಲ್ಲಿ ಉಗ್ರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕುವಂತೆ ಭದ್ರತಾ ಪಡೆಗಳಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ಹಿಂಪಡೆದ ಎರಡು ವರ್ಷಗಳ ನಂತರ ಮೊದಲ ಬಾರಿ ಅಮಿತ್‌ ಶಾ(Amit Shah) ಮೂರು ದಿನಗಳ ಭೇಟಿಗಾಗಿ ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ (Kashmir) ಆಗಮಿಸಿದರು. ಈ ವೇಳೆ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ(Security Forces) ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ಅವರು ಕೇಂದ್ರಾಡಳಿತ ಪ್ರದೇಶದಲ್ಲಿನ(Union Territory) ಭದ್ರತಾ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.

ಜಮ್ಮು ಕಾಶ್ಮೀರ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೇಜ್ ಮನೆಗೆ ಅಮಿತ್ ಶಾ ಭೇಟಿ, ಪತ್ನಿಗೆ ಸರ್ಕಾರಿ ಉದ್ಯೋಗ!

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ಅಮಿತ್‌ ಶಾ ‘ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳಲ್ಲಿ ಅಲಕ್ಷ್ಯಕ್ಕೆ ಯಾವುದೇ ಆಸ್ಪದವಿಲ್ಲ. ಕಣಿವೆ ರಾಜ್ಯದಿಂದ ಉಗ್ರರನ್ನು ಪೂರ್ಣವಾಗಿ ನಿರ್ನಾಮ ಮಾಡಲು ಭದ್ರತಾ ಪಡೆಗಳು ಸತತ ಮತ್ತು ನಿರ್ದಿಷ್ಟಪ್ರಯತ್ನ ಮಾಡಬೇಕು. ಈ ವಿಷಯದಲ್ಲಿ ಭದ್ರತಾ ಪಡೆಗಳ ನಡುವೆ ಮತ್ತು ಗುಪ್ತಚರ ಸಂಸ್ಥೆಗಳ ಜೊತೆ ಹೆಚ್ಚಿನ ಸಮನ್ವಯ ಅಗತ್ಯವಿದೆ. ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ಶಾಂತಿ ಪುನರ್‌ ಸ್ಥಾಪನೆಯಾಗುವುದನ್ನು ಸರ್ಕಾರ ಬಯಸುತ್ತದೆ. ಈ ನಿಟ್ಟಿನಲ್ಲಿ ಭದ್ರತಾ ಪಡೆಗಳಿಗೆ ಏನೇನು ನೆರವಿನ ಅಗತ್ಯವಿದೆಯೋ ಅದನ್ನು ನೀಡಲು ಕೇಂದ್ರ ಸರ್ಕಾರ ಬದ್ಧ. ಒಟ್ಟಿನಲ್ಲಿ ಉಗ್ರರನ್ನು ಸಂಪೂರ್ಣವಾಗಿ ಸದೆ ಬಡಿಯಿರಿ’ ಎಂದು ಭದ್ರತಾ ಸಂಸ್ಥೆಗಳಿಗೆ ತಾಕೀತು ಮಾಡಿದರು ಎನ್ನಲಾಗಿದೆ.

ಜೊತೆಗೆ ‘ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭದ್ರತಾ ಪಡೆಗಳ ನಿಯೋಜನೆ ಆಗಿದ್ದರೂ ಅಮಾಯಕ ನಾಗರಿಕರ ಹತ್ಯೆ ನಡೆಯಲು ಕಾರಣವೇನು? ಪದೇ ಪದೇ ಇಂಥ ಘಟನೆಗಳು ಏಕೆ ನಡೆಯುತ್ತಿವೆ? ಯುವಕರು ಉಗ್ರವಾದದತ್ತ ತಿರುಗಲು ಕಾರಣವಾಗುತ್ತಿರುವ ಅಂಶಗಳಾದರೂ ಏನು? ಇತ್ತೀಚಿನ ಪೂಂಚ್‌ ಮತ್ತು ರಜೋರಿ ಉಗ್ರ ನಿಗ್ರಹ ಕಾರ್ಯಾಚರಣೆಗಳು ಅಷ್ಟುಸುದೀರ್ಘ ಅವಧಿಗೆ ವಿಸ್ತರಣೆಯಾಗಿದ್ದು ಏಕೆ?’ ಎಂಬ ಕಠಿಣ ಪ್ರಶ್ನೆಗಳನ್ನು ಅಮಿತ್‌ ಶಾ ಭದ್ರತಾ ಪಡೆಗಳ ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ.

ಭೇಟಿ:

ಭದ್ರತಾ ಪಡೆಗಳ ಜೊತೆಗಿನ ಸಭೆಗೂ ಮುನ್ನ ಅಮಿತ್‌ ಶಾ ಅವರು, ನೌಗಾಮ್‌ನಲ್ಲಿ ಇತ್ತೀಚೆಗೆ ಉಗ್ರರ ದಾಳಿಗೆ ಬಲಿಯಾದ ಪೊಲೀಸ್‌ ಇನ್‌ಸ್ಪೆಕ್ಟರ್‌ ಪರ್ವೇಜ್‌ ಅಹಮ್ಮದ್‌ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು. ಅಲ್ಲದೆ, ಪರ್ವೇಜ್‌ ಅವರ ಪತ್ನಿ ಫಾತಿಮಾ ಅಖ್ತರ್‌ಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿಯ ನೇಮಕಾತಿ ಪತ್ರ ನೀಡಿದರು.

2019ರಲ್ಲೂ ಅಮಿತ್‌ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಹತ್ಯೆಗೀಡಾದ ಪೊಲೀಸ್‌ ಅಧಿಕಾರಿಯ ಮನೆಗೆ ಭೇಟಿ ನೀಡಿದ್ದರು. ನಂತರ ಆ ವರ್ಷ ಆಗಸ್ಟ್‌ 5ರಂದು ಸಂವಿಧಾನದ 370ನೇ ಪರಿಚ್ಛೇದ ರದ್ದುಪಡಿಸಿ ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅದರ ಜೊತೆಗೇ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾಗಿತ್ತು.

ಇನ್ನೂ 2 ದಿನ ವಿವಿಧ ಕಾರ‍್ಯಕ್ರಮ:

ಒಟ್ಟು 3 ದಿನಗಳ ಕಾಲ ಅಮಿತ್‌ ಶಾ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಹವಾಮಾನ ವೈಪರೀತ್ಯ ಇಲ್ಲದಿದ್ದರೆ ಭಾನುವಾರ ಜಮ್ಮುವಿಗೆ ತೆರಳಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಣಿವೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ವಲಸಿಗರ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವುದು ಅವರ ಭೇಟಿಯ ಮುಖ್ಯ ಉದ್ದೇಶವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಲಿದ್ದಾರೆ. ಅಮಿತ್‌ ಶಾ ಭೇಟಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶ್ರೀನಗರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಕಣಿವೆಯಾದ್ಯಂತ 50 ಹೆಚ್ಚುವರಿ ಪ್ಯಾರಾಮಿಲಿಟರಿ ಪಡೆ ಹಾಗೂ 5000 ಯೋಧರನ್ನು ನಿಯೋಜಿಸಲಾಗಿದೆ.

ಇಂದು ಹುತಾತ್ಮ ಪರ್ವೇಜ್‌ ಅಹಮದ್‌ ದಾರ್‌ಅವರ ಮನೆಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದೆ. ಅವರ ಸಾಹಸಕ್ಕೆ ನಾನು ಹಾಗೂ ದೇಶ ಹೆಮ್ಮೆ ಪಡುತ್ತೇವೆ. ನವ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸುವ ಪ್ರಧಾನಿ ಮೋದಿ ಅವರ ಗುರಿ ಈಡೇರಿಕೆಗೆ ಇಲ್ಲಿನ ಪೊಲೀಸರು ಹಾಗೂ ಅಧಿಕಾರಿಗಳು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಮಿತ್‌ ಶಾ ಹೇಳಿದ್ದಾರೆ.

Follow Us:
Download App:
  • android
  • ios