ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣ ಸಂಬಂಧ ಜೈಲು ಸೇರಿದ್ದ ಗ್ಯಾಂಗ್‌ಸ್ಟರ್ ಕಮ್ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಲಖನೌ(ಮಾ.28) ಹಲವು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಉತ್ತರ ಪ್ರದೇಶದ ಮಾಜಿ ಶಾಸಕ, ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೈಲಿನಲ್ಲಿ ಅಸ್ವಸ್ಥರಾಗಿದ್ದ ಅನ್ಸಾರಿಯನ್ನು ಮಾರ್ಚ್ 26ರಂದು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ನಡುವೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

Add Asianetnews Kannada as a Preferred SourcegooglePreferred

ತೀವ್ರ ಅಸ್ವಸ್ಥಗೊಂಡಿದ್ದ 63 ವರ್ಷದ ಮುಖ್ತಾರ್ ಅನ್ಸಾರಿಯನ್ನು ಮಾರ್ಚ್ 26 ರಂದು ಬಂದಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ರಾಣಿ ದುರ್ಗಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 9 ವೈದ್ಯರ ತಂಡ ಚಿಕಿತ್ಸೆ ನೀಡಿದ್ದರು. ಮುಕ್ತಾರ್ ಅನ್ಸಾರಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಬೆನ್ನಲ್ಲೇ ಅನ್ಸಾರಿ ಕುಟುಂಬ ಗಂಭೀರ ಆರೋಪ ಮಾಡಿದ್ದರು. ಜೈಲಿನಲ್ಲಿ ಅನ್ಸಾರಿಗೆ ವಿಷವುಣಿಸಲಾಗಿದೆ ಎಂದು ಆರೋಪಿಸಿದ್ದರು.

ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್ ಗುಂಡೇಟಿಗೆ ಬಲಿ, ಕೋರ್ಟ್ ಆವರಣದಲ್ಲೇ ಅನ್ಸಾರಿ ಆಪ್ತನ ಹತ್ಯೆ!

2023ರಲ್ಲಿ ಅವಧೇಶ್‌ ರಾಯ್‌ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿದ್ದ ಅನ್ಸಾರ್‌ ಪ್ರಸ್ತುತ ಬಂದಾ ಜೈಲಿನಲ್ಲಿದ್ದರು. ಇತ್ತೀಚೆಗಷ್ಟೇ ನಕಲಿ ಗನ್‌ ಲೈಸೆನ್ಸ್‌ ಪ್ರಕರಣಧಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅನ್ಸಾರಿ ವಿಚಾರಣೆಗೆ ಹಾಜರಾಗಿದ್ದರು. ಇದುವರೆಗೆ ಮಖ್ತಾರ್ ಅನ್ಸಾರಿಗೆ 7 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಆದರೆ ಉತ್ತರ ಪ್ರದೇಶ, ಪಂಜಾಬ್‌, ನವದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಸುಮಾರು 60 ಪ್ರಕರಣಗಳು ಬಾಕಿ ಇವೆ. 

2023ರ ಅಕ್ಟೋಬರ್ ತಿಂಗಳಲ್ಲಿ ಪೊಲೀಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮ್ಯಾಜಿಸ್ಟ್ರೇಟ್ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮುಖ್ತರ್‌ 2009ರಲ್ಲಿ ಪೊಲೀಸ್‌ ಅಧಿಕಾರಿ ಮೀರ್‌ ಹಸನ್‌ ಎಂಬುವರನ್ನು ಕೊಲೆ ಮಾಡಿ ಮತ್ತೊಬ್ಬ ಅಧಿಕಾರಿಯ ಕೊಲೆಗೆ ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸುದೀರ್ಘ ವಿಚಾರಣೆಯಲ್ಲಿ ಈ ಆರೋಪ ಸಾಬೀತಾಗಿತ್ತು.

32 ವರ್ಷದ ಹಿಂದಿನ ಕೊಲೆ ಕೇಸ್‌: ಕುಖ್ಯಾತ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

20023ರಲ್ಲಿ ಉತ್ತರ ಪ್ರದೇಶದ ಪೊಲೀಸರು ರಾಜ್ಯದ 66 ಮೋಸ್ಟ್‌ ವಾಂಟೆಡ್‌ ವ್ಯಕ್ತಿಗಳ ಪಟ್ಟಿಬಿಡುಗಡೆ ಮಾಡಿತ್ತು. ಅದರಲ್ಲಿ 7 ಮಾಜಿ ಶಾಸಕರು ಮತ್ತು ಸಂಸದರು ಸೇರಿದ್ದಾರೆ. ಹಲವಾರು ಕೊಲೆ, ದರೋಡೆ, ಇನ್ನಿತರೆ ಪ್ರಕರಣಗಳನ್ನು ಆಧರಿಸಿ ಈ ಪಟ್ಟಿಬಿಡುಗಡೆ ಮಾಡಲಾಗಿದೆ. ಪಟ್ಟಿಯಲಿ ರಾಜಕಾರಣಿ ಮುಖ್ತರ್‌ ಅನ್ಸಾರಿ, ಮಾಜಿ ಶಾಸಕ ವಿಜಯ್‌ ಕುಮಾರ್‌, ಬಿಎಸ್‌ಪಿ ಮಾಜಿ ಶಾಸಕ, ಹಾಜಿ ಯಾಕೂಬ್‌ ಖುರೇಶಿ, ಬಿಎಸ್‌ಪಿ ಮಾಜಿ ಪರಿಷತ್‌ ಶಾಸಕ ಹಾಜಿ ಇಕ್ಬಾಲ್‌ ಸೇರಿದಂತೆ ಪ್ರಮುಖರು ಕಾಣಿಸಿಕೊಂಡಿದ್ದಾರೆ.